ಟೀಂ ಇಂಡಿಯಾಕ್ಕೆ ಆಘಾತ, ವಿಶ್ವಕಪ್ ನಿಂದ ಧವನ್ ಔಟ್

ನಾಟಿಂಗ್ಹ್ಯಾಮ್, ಜೂನ್ 11: ಭಾರತ ಕ್ರಿಕೆಟ್ ತಂಡಕ್ಕೆ ತೀವ್ರ ಆಘಾತವಾಗಿತ್ತು. ಗಾಯಾಳುವಾಗಿರುವ ಆರಂಭಿಕ ಆಟಗಾರ ಶಿಖರ್ ಧವನ್ ಅವರು ವಿಶ್ವಕಪ್ ನಿಂದ ಹೊರ ನಡೆಯಬೇಕಾಗಿದೆ ಎಂದು ಟಿವಿ ಮಾಧ್ಯಮಗಳಲ್ಲಿ ಬ್ರೇಕಿಂಗ್ ಸುದ್ದಿ ಬಂದಿದೆ. ಬಿಸಿಸಿಐ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.
ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಶಿಖರ್ ಧವನ್ ಅವರಿಗೆ ಮೂರು ವಾರಗಳ ಕಾಲ ವಿಶ್ರಾಂತಿ ಅಗತ್ಯ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ. ಬೆರಳಿಗೆ ಆಗಿರುವ ಗಾಯದ ಪ್ರಮಾಣವನ್ನು ಪತ್ತೆ ಹಚ್ಚಲು ಸ್ಕಾನಿಂಗ್ ಮಾಡಲಾಗಿತ್ತು. ಇದಾದ ಬಳಿಕ ಬಂದ ವರದಿ ಪರಿಶೀಲಿಸಿದ ವೈದ್ಯರು, ಧವನ್ ಗೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಭಾನುವಾರದಂದು ಓವಲ್ ಮೈದಾನದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಶಿಖರ್ ಧವನ್ ಅವರು ಭರ್ಜರಿ ಶತಕ ಸಿಡಿಸಿದ್ದರು. ಆದರೆ, ಪಂದ್ಯದ ವೇಳೆ . ವೇಗಿ ನಥಾನ್ ಕೌಲ್ಟರ್ ನೀಲ್ ಎಸೆತದಲ್ಲಿ ಆಕಸ್ಮಿಕವಾಗಿ ಚೆಂಡು ಧವನ್ ಕೈಬೆರಳಿಗೆ ಬಡಿದು ಗಾಯಗೊಂಡಿದ್ದರು.
ನೋವಿನಲ್ಲೂ 109 ಎಸೆತಗಳಲ್ಲಿ 117 ರನ್ ಸಿಡಿಸಿ ಔಟಾಗಿದ್ದ ಧವನ್ ಅವರು ನಂತರ ಫೀಲ್ಡಿಂಗ್ ಗೆ ಬಂದಿರಲಿಲ್ಲ.
ಜೂನ್ 13ರಂದು ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಮುಂದಿನ ಪಂದ್ಯ ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆಯಲಿದೆ. ಈ ಪಂದ್ಯದ ಅಭ್ಯಾಸಕ್ಕಾಗಿ ಧವನ್ ಮೈದಾನಕ್ಕೆ ಇಳಿದಿರಲಿಲ್ಲ. ಮಂಗಳವಾರದಂದು ಬಂದ ವರದಿಯಂತೆ ಧವನ್ ಗೆ ವಿಶ್ವಕಪ್ ಬಾಗಿಲು ಬಂದ್ ಆಗಿದೆ.

ಲೀಡ್ಸ್ ಗೆ ತೆರಳಿ ಬೆರಳಿಗೆ ಸ್ಕ್ಯಾನಿಂಗ್
ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಆಸೀಸ್ ವೇಗಿ ನಥಾನ್ ಕೌಲ್ಟರ್ ನೀಲ್ ಎಸೆತದಲ್ಲಿ ಆಕಸ್ಮಿಕವಾಗಿ ಚೆಂಡು ಧವನ್ ಕೈಬೆರಳಿಗೆ ಬಡಿದಿತ್ತು. ಗಾಯಗೊಂಡಿದ್ದ ಧವನ್ ಅವರು ಫೀಲ್ಡಿಂಗ್ ಮಾಡಲು ಮೈದಾನಕ್ಕಿಳಿದಿರಲಿಲ್ಲ. ಲೀಡ್ಸ್ ನಲ್ಲಿ ಶಿಖರ್ ಧವನ್ ಅವರ ಎಡಗೈ ಹೆಬ್ಬರಳಿಗೆ ಮತ್ತೊಮ್ಮೆ ಸ್ಕ್ಯಾನಿಂಗ್ ಮಾಡಿಸಲಾಗುತ್ತಿದೆ. ಈ ಸ್ಕ್ಯಾನಿಂಗ್ ವರದಿ ಮಂಗಳವಾರ(ಜೂನ್ 11)ಸಂಜೆ ವೇಳೆಗೆ ಬರಲಿದ್ದು, ಇದನ್ನು ಪರಿಶೀಲಿಸಿ ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆ ಹೊರಡಿಸಲಿದೆ. ಒಂದು ವೇಳೆ ಗಾಯದ ಸ್ವರೂಪ ಹಾಗೆ ಇದ್ದರೆ ಮುಂದಿನ ಎರಡು ವಿಶ್ವಕಪ್ ಪಂದ್ಯಗಳಿಗೆ ವಿಶ್ರಾಂತಿ ಪಡೆಯಬೇಕಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬದಲಿ ಆಟಗಾರ ಆಯ್ಕೆಗೆ ಮನವಿ?
ವಿಶ್ವಕಪ್ 2019ಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಐಸಿಸಿ) ನೀಡಿರುವ ನೀತಿ ನಿಯಮಾವಳಿಗಳ ಪ್ರಕಾರ ಮೊದಲಿಗೆ 25 ಆಟಗಾರರ ತಂಡ ನಂತರ 16 ಮಂದಿ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ. ಒಂದು ವೇಳೆ ಟೂರ್ನಮೆಂಟ್ ವೇಳೆ ಆಟಗಾರರು ಗಾಯಗೊಂಡು ಅಲಭ್ಯರಾದರೆ ಯಾವ ನಿಯಮ ಬಳಸಬೇಕು ಎಂಬುದನ್ನು ಸೂಚಿಸಲಾಗಿದೆ.
ಶಿಖರ್ ಧವನ್ ಅವರು ಜೂನ್ 13ರಂದು ನ್ಯೂಜಿಲೆಂಡ್ ವಿರುದ್ಧ ಹಾಗೂ ಜೂನ್ 16ರಂದು ಪಾಕಿಸ್ತಾನದ ವಿರುದ್ಧದ ಪಂದ್ಯಗಳಿಗೆ ಮಾತ್ರ ಅಲಭ್ಯರಾದರೆ, ಬದಲಿ ಆಟಗಾರನಿಗಾಗಿ ಐಸಿಸಿಯನ್ನು ಬಿಸಿಸಿಐ ಕೋರುವ ಅಗತ್ಯವಿಲ್ಲ. ಆದರೆ, ವಿಶ್ವಕಪ್ ಟೂರ್ನಮೆಂಟ್ ನಿಂದಲೇ ಹೊರಗುಳಿಯಬೇಕಾದರೆ ಮಾತ್ರ ಐಸಿಸಿ ತಾಂತ್ರಿಕ ಸಮಿತಿಯ ಮುಂದೆ ಬದಲಿ ಆಟಗಾರನಿಗಾಗಿ ಮನವಿ ಸಲ್ಲಿಸಬೇಕಾಗುತ್ತದೆ.

ಆರಂಭಿಕ ಆಟಗಾರನಾಗಿ ಕೆಎಲ್ ರಾಹುಲ್
ಶಿಖರ್ ಧವನ್ ಅವರು ಜೂನ್ 13ರಂದು ನ್ಯೂಜಿಲೆಂಡ್ ವಿರುದ್ಧ ಹಾಗೂ ಜೂನ್ 16ರಂದು ಪಾಕಿಸ್ತಾನದ ವಿರುದ್ಧದ ಪಂದ್ಯಗಳಿಗೆ ಮಾತ್ರ ಅಲಭ್ಯರಾದರೆ ಆಗ ಯಾವುದೇ ಬದಲಿ ಆಟಗಾರನಿಗಾಗಿ ಬಿಸಿಸಿಐ ಮನವಿ ಸಲ್ಲಿಸುವುದಿಲ್ಲ. ಉಳಿದ ಪಂದ್ಯಗಳಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿದ್ದು, ಪಂದ್ಯಗಳಿಗೆ ಅಲಭ್ಯರಾದರೆ, ಅವರ ಬದಲಿಗೆ ಕೆಎಲ್ ರಾಹುಲ್ ಅವರು ರೋಹಿತ್ ಶರ್ಮ ಜೊತೆ ಓಪನರ್ ಆಗಿ ಕಣಕ್ಕಿಳಿಯಬಹುದು. ನಾಲ್ಕನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್ ಅವರನ್ನು ಆಡಿಸುವ ಸಾಧ್ಯತೆಯಿದೆ.

ಬದಲಿ ಆಟಗಾರ ಯಾರಾಗಬಹುದು?
ಶಿಖರ್ ಧವನ್ ಅವರು ವಿಶ್ವಕಪ್ ನಿಂದಲೆ ಹೊರಗುಳಿದರೆ, ಬಿಸಿಸಿಐ ಬದಲಿ ಆಟಗಾರನಿಗಾಗಿ ಮನವಿ ಸಲ್ಲಿಸಲಿದೆ. ಈಗಾಗಲೇ ಪ್ರಕಟಿಸಿದಂತೆ ಅಂಬಟಿ ರಾಯುಡು ಹಾಗೂ ರಿಷಬ್ ಪಂತ್ ಅವರು ರಿಸರ್ವ್ ಆಟಗಾರರಾಗಿದ್ದು, ಇವರಲ್ಲಿ ಒಬ್ಬರು ಆಯ್ಕೆಯಾಗಲಿದ್ದು, ತಕ್ಷಣವೇ ಲಂಡನ್ನಿಗೆ ತೆರಳಬೇಕಾಗುತ್ತದೆ. ಆದರೆ, ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಇನ್ನೂ ಆಶಾಭಾವದಲ್ಲಿದ್ದು, ಧವನ್ ಅವರ ಪೂರ್ಣ ವೈದ್ಯಕೀಯ ವರದಿ ಪರಿಶೀಲಿಸಿ ಮುಂದಿನ ಹೆಜ್ಜೆ ಇಡುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications