
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆ ಖಚಿತವಾಗಿದೆ. ಮೊಣಕಾಲಿನ ಗಾಯಕ್ಕೆ ಒಳಗಾಗಿರುವ ಧವನ್ ಟಿ20 ಸರಣಿಯಿಂದ ಹೊರಗುಳಿದಿದ್ದರು. ಇದೀಗ ಏಕದಿನ ತಂಡದಿಂದಲೂ ಔಟ್ ಆಗಿದ್ದಾರೆ.
ಮಯಾಂಕ್ ಅಗರ್ವಾಲ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿ ಈ ವರ್ಷ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. ಇದೀಗ ಸೀಮಿತ ಓವರ್ಗಳ ಫಾರ್ಮ್ಯಾಟ್ನಲ್ಲೂ ಆಯ್ಕೆಯಾಗಿದ್ದು ಇಲ್ಲೂ ತಮ್ಮ ಅತ್ಯುತ್ತಮ ಫಾರ್ಮ್ ಮುಂದುವರಿಸುವ ಇರಾದೆಯಲ್ಲಿದ್ದಾರೆ.
ಅಗರ್ವಾಲ್ ವಿಶ್ವಕಪ್ ತಂಡದಲ್ಲೂ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ತಂಡಕ್ಕೆ ಆಯ್ಕೆಯಾಗಿದ್ದ ವಿಜಯ್ ಶಂಕರ್ ಗಾಯಗೊಂಡ ಬಳಿಕ ಮಯಾಂಕ್ ಸೇರ್ಪಡೆಯಾಗಿದ್ದರು. ಆದರೆ ಮಹತ್ವದ ಟೂರ್ನಿಯಲ್ಲಿ ಆಡುವ ಬಳಗದಲ್ಲಿ ಅವಕಾಶವನ್ನು ಪಡೆಯುವಲ್ಲಿ ವಿಫಲರಾಗಿದ್ದರು. ಇದೀಗ ಮತ್ತೆ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವುದು ಸಾಮರ್ಥ್ಯ ಸಾಬೀತುಪಡಿಸಲು ಮತ್ತೊಂದು ವೇದಿಕೆ ದೊರೆತಂತಾಗಿದೆ.
ಟಿ20 ಸರಣಿಗೆ ಶಿಖರ್ ಧವನ್ ಬದಲಿ ಆಟಗಾರನಾಗಿ ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದರು. ಆದರೆ ಇಲ್ಲಿವರೆಗೆ ಆಡಿರುವ ಎರಡೂ ಪಂದ್ಯಗಳಲ್ಲೂ ಅವಕಾಶವನ್ನು ಸಂಜು ಸ್ಯಾಮ್ಸನ್ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅಂತಿಮ ಪಂದ್ಯದಲ್ಲೂ ಅವಕಾಶ ಪಡೆಯುವ ಸಾಧ್ಯತೆ ಕ್ಷೀಣಿಸಿದೆ.
ಮಯಾಂಕ್ ಅಗರ್ವಾಲ್ ಈ ವರ್ಷ ತಮ್ಮ ಟೆಸ್ಟ್ ಕೆರಿಯನ್ನಲ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿರುವ ಅಗರ್ವಾಲ್, ಎರಡು ದ್ವಿಶತಕ ಎಲ್ಲರ ಗಮನ ತಮ್ಮತ್ತ ಸೆಳೆದುಕೊಂಡಿದ್ದಾರೆ. ಈ ಮೂಲಕ ಈ ಕ್ಯಾಲೆಂಡರ್ ವರ್ಷವನ್ನು ಸ್ಮರಣೀಯವಾಗಿಸಿದ್ದಾರೆ.
ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಹಾಗೂ ವಿಜಯ್ ಹಜಾರೆ ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್ ಉತ್ತಮ ಪ್ರದರ್ಶನ ನೀಡಿ ಕರ್ನಾಟಕ ಚಾಂಪಿಯನ್ ಆಗಲು ಕಾರಣರಾಗಿದ್ದರು. ಈ ಮೂಲಕ ಸೀಮಿತ ಅವಧಿಯ ಕ್ರಿಕೆಟ್ನಲ್ಲೂ ಆಯ್ಕೆ ಸಮಿತಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮತ್ತೆ ಟೀಮ್ ಇಂಡಿಯಾ ಏಕ ದಿನ ತಂಡಕ್ಕೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.