ಮೈಸೂರಿನಲ್ಲಿ ನಡೆಯುತ್ತಿರುವ ಮಹಾರಾಜ್ ಟ್ರೋಫೀ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ 3 ವಿಕೆಟ್ಗಳಿಂದ ಮೈಸೂರು ವಾರಿಯರ್ಸ್ ತಂಡವನ್ನು, ಮಂಗಳೂರು ಡ್ರ್ಯಾಗನ್ಸ್ 9 ವಿಕೆಟ್ಗಳಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಮಣಿಸಿವೆ.
ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ಭಾನುವಾರ ನಡೆದ ಎರಡನೇ ಪಂದ್ಯ ರೋಚಕತೆಯಿಂದ ಕೂಡಿತ್ತು. ಗೆಲ್ಲಲು ಶಿವಮೊಗ್ಗ ಲಯನ್ಸ್ ತಂಡಕ್ಕೆ ಕೊನೆಯ ಓವರ್ನಲ್ಲಿ 24 ರನ್ಗಳ ಅವಶ್ಯಕತೆ ಇತ್ತು. ಆಗ ಅವಿನಾಶ್ ಡಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ಅಧಾರವಾದರು. ಅಲ್ಲದೆ ಶಿವಮೊಗ್ಗ ಗೆಲುವಿನಲ್ಲಿ ಮಿಂಚಿದರು. ಶಿವಮೊಗ್ಗ ತಂಡದ ಪರ ಸ್ಟಾರ್ ಆಟಗಾರರ ಬಿಗ್ ಇನಿಂಗ್ಸ್ ಕಟ್ಟದೇ ಇದ್ದರೂ ತಂಡದ ಸಂಘಟಿತ ಆಟ ಗೆಲುವಿನಲ್ಲಿ ಮಿಂಚಿತು.

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಶಿವಮೊಗ್ಗ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ತುಷಾರ್ ಸಿಂಗ್ ಹಾಗೂ ನಾಯಕ ನಿಹಾಲ್ ಉಲ್ಲಾಳ್, ಧ್ರುವ್ ಪ್ರಭಾಕರ್ ಅವರು ರನ್ ಕಲೆ ಹಾಕುವಲ್ಲಿ ವಿಫಲರಾದರು. ನಾಲ್ಕನೇ ವಿಕೆಟ್ಗೆ ಅನೀಶ್ವರ್ ಗೌತಮ್ ಹಾಗೂ ರೋಹಿತ್ ಕುಮಾರ್ ಕೆ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಅನೀಶ್ವರ್ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 29 ರನ್ ಬಾರಿಸಿದರೆ, ರೋನಿತ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 46 ರನ್ ಸಿಡಿಸಿದರು.ಕೊನೆಯಲ್ಲಿ ಅವಿನಾಶ್ 21 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 15 ರನ್ ಸಿಡಿಸಿದರು. ಅಂತಿಮವಾಗಿ ಶಿವಮೊಗ್ಗ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 81 ರನ್ ಸೇರಿಸಿತು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಮೈಸೂರು ತಂಡದ ಎಂ ವೆಂಕಟೇಶ್ (4) ಹಾಗೂ ಎಸ್ಯು ಕಾರ್ತಿಕ್ ಜೋಡಿ ಮೊದಲ ವಿಕೆಟ್ಗೆ 44 ರನ್ ಜೊತೆಯಾಟದ ಕಾಣಿಕೆ ನೀಡಿತು. ಶ್ರೀನಿವಾಸ್ ಶರತ್ (8) ಹಾಗೂ ಮನೀಶ್ ಪಾಂಡೆ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಆರಂಭಿಕ ಕಾರ್ತಿಕ್ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 53 ರನ್ ಸಿಡಿಸಿದರು. ಲಂಕೇಶ್ 24, ಹರ್ಷಿಲ್ ಅಜೇಯ 37, ಸಾಗರ್ ಗೌತಮ್ 30, ಯಶೋವರ್ಧನ್ 12 ರನ್ ಬಾರಿಸಿ ತಂಡಕ್ಕೆ ಆಧಾರವಾಯಿತು. ಅಂತಿಮವಾಗಿ ಮೈಸೂರು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180 ರನ್ ಸೇರಿಸಿತು.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ಮೊದಲು ಬ್ಯಾಟ್ ಮಾಡಿತು. ಬ್ಲಾಸ್ಟರ್ಸ್ ತಂಡದ ಮೆಲ್ಪಂಕ್ತೀಯ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಎಲ್ಆರ್ ಚೇತನ್, ಮಯಾಂಕ್ ಅಗರ್ವಾಲ್, ರೋಹನ್ ಪಟೇಲ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಭುವನ್ ರಾಜ್ 25, ಶುಭಾಂಗ್ ಹೆಗ್ಡೆ 39, ಸುರಜ್ ಅಹುಜಾ 36 ಹಾಗೂ ವಿದ್ಯಾಧರ್ ಪಾಟೀಲ್ 25 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಬ್ಲಾಸ್ಟರ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮಂಗಳೂರು ಡ್ರ್ಯಾಗನ್ಸ್ ತಂಡದ ಆರಂಭಿಕರಾದ ಲೋಚನ್ ಗೌಡ್ ಹಾಗೂ ಶರತ್ ಬಿಆರ್ ಅಬ್ಬರಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 9.1 ಓವರ್ಗಳಲ್ಲಿ 99 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು. ಲೋಚನ್ ಗೌಡ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 55 ರನ್ ಸಿಡಿಸಿ ಔಟ್ ಆದರು. ಇನ್ನೋರ್ವ ಆರಂಭಿಕ ಶರತ್ ಬಿಆರ್ 47 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 72 ರನ್ ಸಿಡಿಸಿ ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ಮಂಗಳೂರು 16.1 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 149 ರನ್ ಸೇರಿಸಿ ಜಯ ಸಾಧಿಸಿತು.