ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಬಲಗೈ ಲೆಗ್ಬ್ರೇಕ್ ಬೌಲರ್ ಶ್ರೇಯಸ್ ಗೋಪಾಲ್ ಅವರನ್ನು ಮೂಲ ಬೆಲೆ 30 ಲಕ್ಷ ರೂ.ಗೆ ಬಿಡ್ ಮಾಡಿತ್ತು. ಇದೀಗ ಶ್ರೇಯಸ್ ಗೋಪಾಲ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಸಂಚಲನ ಮೂಡಿಸಿದ್ದಾರೆ. ಶ್ರೇಯಸ್ ಗೋಪಾಲ್ ಬರೋಡಾ ಮತ್ತು ಕರ್ನಾಟಕ ನಡುವಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಬರೋಡಾ ತಂಡ ಎರಡನೇ ಇನಿಂಗ್ಸ್ನಲ್ಲಿ 2 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿತ್ತು. ಈ ವೇಳೆ ಕರ್ನಾಟಕದ ಪರ 11ನೇ ಓವರ್ನಲ್ಲಿ ಬೌಲಿಂಗ್ ದಾಳಿಗಿಳಿದ ಶ್ರೇಯಸ್ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು. ಆದರೆ, ಶ್ರೇಯಸ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದರೂ ಕರ್ನಾಟಕ ತಂಡಕ್ಕೆ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. 4 ವಿಕೆಟ್ಗಳಿಂದ ಸೋಲನ್ನು ಎದುರಿಸಬೇಕಾಯಿತು.

ಬರೋಡಾ ಪರ ಆರಂಭಿಕ ಬ್ಯಾಟರ್ ಶಾಶ್ವತ್ ರಾವತ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಶ್ರೇಯಸ್ ಸ್ಪಿನ್ ಮೋಡಿ ಮುಂದೆ ಅವರ ಆಟ ನಡೆಯಲಿಲ್ಲ. ಮೊದಲ ಎಸೆತದಲ್ಲಿಯೇ ರಾವತ್ (37 ಎಸೆತಗಳಲ್ಲಿ 63 ರನ್) ಔಟ್ ಮಾಡಿದ ರು. ಇದಾದ ಬಳಿಕ ಕ್ರೀಸ್ಗೆ ಬಂದ ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲೇ ಬಿಗ್ ಶಾಟ್ ಬಾರಿಸುವಲ್ಲಿ ವಿಫಲವಾಗಿ ಕ್ಯಾಚ್ ಔಟಾದರು. ಹಾರ್ದಿಕ್ ನಂತರ ಅವರ ಸಹೋದರ ಕೃನಾಲ್ ಪಾಂಡ್ಯ ಬ್ಯಾಟಿಂಗ್ ಮಾಡಲು ಬಂದರು. ಆದರೆ ಶ್ರೇಯಸ್ ಅವರನ್ನು ಮೊದಲ ಎಸೆತದಲ್ಲಿಯೇ ಔಟ್ ಮಾಡುವ ಮೂಲಕ ತಮ್ಮ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.
ಶ್ರೇಯಸ್ ಗೋಪಾಲ್ ತಮ್ಮ ನಾಲ್ಕು ಓವರ್ಗಳಲ್ಲಿ ಕೇವಲ 19 ರನ್ ಬಿಟ್ಟು ಕೊಟ್ಟು 4 ವಿಕೆಟ್ಗಳನ್ನು ಪಡೆದರು. ಆದರೆ ಅವರಿಗೆ ಇತರ ಬೌಲರ್ಗಳಿಂದ ಬೆಂಬಲ ಸಿಗಲಿಲ್ಲ. ಇದರಿಂದಾಗಿ ಬರೋಡಾ ತಂಡ ಕರ್ನಾಟಕವನ್ನು 4 ವಿಕೆಟ್ಗಳಿಂದ ಸೋಲಿಸಿತು.
ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಪರ ಸ್ಮರಣ್ 38 ರನ್ ಗಳಿಸಿದರೆ, ಅಭಿನವ್ ಮನೋಹರ್ 34 ಎಸೆತಗಳಲ್ಲಿ 6 ಸಿಕ್ಸರ್ಗಳೊಂದಿಗೆ 56 ರನ್ ಬಾರಿಸಿದರು. ಅಭಿನವ್ ಮನೋಹರ್ ಅವರ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಕಲೆ ಹಾಕಿತು.
ಕರ್ನಾಟಕ ನೀಡಿದ 170 ರನ್ಗಳ ಗುರಿ ಬೆನ್ನಟ್ಟಿದ ಬರೋಡಾ ತಂಡಕ್ಕೆ ಶಾಶ್ವತ್ ರಾವತ್ ಅದ್ಭುತ ಆರಂಭ ನೀಡಿದರು. ಶಾಶ್ವತ್ ರಾವತ್ 37 ಎಸೆತಗಳಲ್ಲಿ 63 ರನ್ ಚಚ್ಚಿದರೆ, ಆ ಬಳಿಕ ಬಂದ ಭಾನು ಪನಿಯಾ 42 ರನ್ಗಳನ್ನು ಗಳಿಸುವ ಮೂಲಕ ಬರೋಡ ತಂಡಕ್ಕೆ ಗೆಲುವು ತಂದು ಕೊಟ್ಟರು.