ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ತಾವು ಗಾಯದಿಂದ ಚೇತರಿಸಿಕೊಂಡ ದಾರಿಯನ್ನು ನೆನಪಿಸಿಕೊಂಡಿದ್ದಾರೆ. ಗಾಯದ ಬಳಿಕ ಚೇತರಿಸಿಕೊಂಡ ಹಾದಿ ತಮ್ಮ ವೃತ್ತಿ ಜೀವನದ ಅತ್ಯಂತ ಸವಾಲಿನ ಕ್ಷಣ ಎಂದು ಪಂಜಾಬ್ ಕಿಂಗ್ಸ್ ನಾಯಕ ತಿಳಿಸಿದ್ದಾರೆ.
ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಯಾವಾಗಲೂ ಗಾಯದಿಂದ ಚೇತರಿಸಿಕೊಂಡು ಮೈದಾನಕ್ಕೆ ಇಳಿಯುವುದು ಸವಾಲುದಾಯಕ. ಇದೇ ಅವಧಿಯಲ್ಲಿ ನಾನು ಏಳು ಕಿಲೋ ಗ್ರಾಂ ತೂಕವನ್ನು ಸಹ ಕಳೆದುಕೊಂಡಿದ್ದು, ಈಗ ತೂಕದಲ್ಲಿ ಏರಿಕೆ ಆಗಿದೆ. ನಾನು ಸವಾಲುಗಳನ್ನು ಎದುರು ನೋಡುತ್ತೇನೆ. ಗಾಯದಿಂದ ಚೇತರಿಸಿಕೊಂಡು ಮತ್ತೆ ಮೈದಾನಕ್ಕೆ ಇಳಿದಿದ್ದು ಸಂತಸ ತಂದಿದೆ. ಈಗ ನಾನು ಹೆಮ್ಮೆಯಿಂದ ತಂಡವನ್ನು ಮುನ್ನಡೆಸುತ್ತಿರುವೆ ಎಂದು ಶ್ರೇಯಸ್ ತಿಳಿಸಿದ್ದಾರೆ.

ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲ ಬಾರಿಗೆ ಮುನ್ನಡೆಸಿದ ಹೆಗ್ಗಳಿಕೆ ಶ್ರೇಯಸ್ ಅಯ್ಯರ್ ಅವರದ್ದಾಗಿತ್ತು. ಈ ವೇಳೆ ತಂಡದ ಆಟಗಾರರು ಸ್ಥಿರ ಪ್ರದರ್ಶನ ನೀಡಿದರು. ಪರಿಣಾಮ ತಂಡ ಫೈನಲ್ಗೆ ಪ್ರವೇಶಿಸಿತು. ಆದರೆ ಫೈನಲ್ನಲ್ಲಿ ಟ್ರೋಫಿ ಗೆಲ್ಲಲು ಸಾಧ್ಯವಾಗದೇ ನಿರಾಸೆ ಅನುಭವಿಸಿತು.

ಭಾರತ, ಕಳೆದ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿತ್ತು. ಈ ವೇಳೆ ಏಕದಿನ ಸರಣಿಯನ್ನು ಆಡಿತು. ಈ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಉಪನಾಯಕನಾಗಿ ಕಣಕ್ಕೆ ಇಳಿದಿದ್ದರು. ಸರಣಿಯ ಮೂರನೇ ಪಂದ್ಯ ಸಿಡ್ನಿಯಲ್ಲಿ ನಡೆದಿತ್ತು. ಆಸ್ಟ್ರೇಲಿಯಾದ ಬ್ಯಾಟರ್ ಅಲೆಕ್ಸ್ ಕ್ಯಾರಿ ಅವರು ಹರ್ಷಿತ್ ರಾಣಾ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದರು. ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ ಅಮೋಘ ಕ್ಯಾಚ್ ಪಡೆದರು. ಆಗ ಅವರಿಗೆ ಗಂಭೀರ ಗಾಯವಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ತವರಿಗೆ ಮರಳಿದರು.

31 ವರ್ಷದ ಬಲಗೈ ಆಟಗಾರ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ಏಕದಿನ ತಂಡದ ಆಧಾರ ಸ್ತಂಭ. ಇವರು ಟೆಸ್ಟ್ ಕ್ರಿಕೆಟ್ ಹಾಗೂ ಟಿ20 ಕ್ರಿಕೆಟ್ನಲ್ಲೂ ಮಿಂಚು ಹರಿಸಿದ್ದಾರೆ. ಐಪಿಎಲ್ ಯಶಸ್ವಿ ನಾಯಕರಲ್ಲಿ ಶ್ರೇಯಸ್ ಅಯ್ಯರ್ ಅವರಿಗೂ ಸ್ಥಾನ. ಇವರ ಮುಂದಾಳತ್ವದಲ್ಲಿ ಕೆಕೆಆರ್ ಐಪಿಎಲ್ 2024ರಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈಗಾಗಲೇ ಶ್ರೇಯಸ್ ಅಯ್ಯರ್ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದಾರೆ. ಈ ವೇಳೆ ಆಡಿದ 133 ಪಂದ್ಯಗಳಲ್ಲಿ 34ರ ಸರಸಾರಿಯಲ್ಲಿ 3731 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರು 27 ಅರ್ಧಶತಕ ಬಾರಿಸಿದ್ದಾರೆ. ಇದರಲ್ಲಿ 314 ಬೌಂಡರಿ, 152 ಸಿಕ್ಸರ್ಗಳು ಸೇರಿವೆ.

19ನೇ ಆವೃತ್ತಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಮೊದಲ ಪಂದ್ಯವನ್ನು ಮಾರ್ಚ್ 31 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ.