ಗದ್ದೆಯೇ ಕ್ರಿಕೆಟ್ ಮೈದಾನ: ಶುಭಮನ್ ಗಿಲ್ ವಿಕೆಟ್ ಪಡೆದವರಿಗೆ ಸಿಗ್ತಿತ್ತು 100 ರುಪಾಯಿ ಬಹುಮಾನ

ಶುಭಮನ್ ಗಿಲ್ ಸದ್ಯ ಭಾರತ ತಂಡದ ಉದಯೋನ್ಮುಕ ತಾರೆ. ಭವಿಷ್ಯದಲ್ಲಿ ಕ್ರಿಕೆಟ್ ಜಗತ್ತನ್ನು ಈತ ಆಳುತ್ತಾನೆ ಎಂದು ಈಗಾಗಲೇ ಹಲವರು ಭವಿಷ್ಯ ನುಡಿದಿದ್ದಾರೆ. ಅದಕ್ಕೆ ತಕ್ಕಂತೆ ಶುಭಮನ್ ಗಿಲ್ ಕೂಡ ತಮ್ಮ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ದ್ವಿಶತಕ ಬಾರಿಸಿ ವಿಶ್ವಕ್ರಿಕೆಟ್ನ ಗಮನ ಸೆಳೆದರು.
ಟಿ20 ಕ್ರಿಕೆಟ್ಗೆ ಗಿಲ್ ಉತ್ತಮ ಆಯ್ಕೆಯಲ್ಲ ಎಂದವರಿಗೆ ಅಹಮದಾಬಾದ್ನಲ್ಲಿ ನಡೆದ ಟಿ20 ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದರು. ಮೂರು ಮಾದರಿ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಭಾರತದ 5ನೇ ಆಟಗಾರ ಎನ್ನುವ ಖ್ಯಾತಿ ಅವರದ್ದು.
23ನೇ ವರ್ಷದಲ್ಲೇ ಹಲವು ದಾಖಲೆಗಳನ್ನು ಮಾಡಿರುವ ಶುಭಮನ್ ಗಿಲ್ ಮುಂದಿನ ದಿನಗಳಲ್ಲಿ ಹಲವು ದಾಖಲೆಗಳನ್ನು ಮುರಿದು ಹೊಸ ದಾಖಲೆನಗಳನ್ನು ಸೃಷ್ಟಿಸುವುದು ಖಚಿತ ಎನ್ನಲಾಗಿದೆ. ವಿರಾಟ್ ಕೊಹ್ಲಿ ನಂತರ ಭಾರತಕ್ಕೆ ಮೂರು ಮಾದರಿ ಕ್ರಿಕೆಟ್ನಲ್ಲಿ ಆಡುವ ಒಬ್ಬ ಆಟಗಾರ ಸಿಕ್ಕಿದ್ದಾನೆ ಎಂದು ಹಲವು ಮಾಜಿ ಕ್ರಿಕೆಟಿಗರು ಹೊಗಳಿದ್ದಾರೆ.
ಶುಭಮನ್ ಗಿಲ್ ಇಂದು ಖ್ಯಾತಿಯನ್ನು ಗಳಿಸಿದ್ದಾರೆ. ಆದರೆ, ಶುಭಮನ್ ಗಿಲ್ರ ಈ ಸಾಧನೆಯ ಹಿಂದೆ ಇರುವುದು ಅವರ ಅಪ್ಪನ ತ್ಯಾಗ ಎನ್ನುವುದು ಸಾಕಷ್ಟು ಮಂದಿಗೆ ಗೊತ್ತಿಲ್ಲ. ಪಂಜಾಬ್ನ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಶುಭಮನ್ಗಿಲ್ನಲ್ಲಿ ಒಬ್ಬ ಅದ್ಭುತ ಕ್ರಿಕೆಟಿಗನಿದ್ದಾನೆ ಎನ್ನುವುದನ್ನು ಗುರುತಿಸಿದ್ದೇ ಆತನ ತಂದೆ ಲಖ್ವಿಂದರ್ ಸಿಂಗ್. ಮುಂದೆ ನಡೆದಿದ್ದೆಲ್ಲ ಈಗ ಇತಿಹಾಸ.

ಕ್ರಿಕೆಟಿಗನಾಗುವ ಕನಸು ಬಿಟ್ಟ ಲಖ್ವಿಂದರ್ ಸಿಂಗ್
ಶುಭಮನ್ ಗಿಲ್ 8ನೇ ಸೆಪ್ಟೆಂಬರ್ 1999 ರಂದು ಪಂಜಾಬ್ನ ಫಜಿಲ್ಕಾ ಜಿಲ್ಲೆಯ ಚಕ್ ಜೈಮಲ್ ಸಿಂಗ್ ವಾಲಾ ಗ್ರಾಮದಲ್ಲಿ ಜನಿಸಿದರು. ತಾಯಿಯ ಹೆಸರು ಕೀರತ್ ಸಿಂಗ್, ದಿಲ್ದಾರ್ ಸಿಂಗ್ ಶುಭಮನ್ ಗಿಲ್ರ ತಾತ.
ಲಖ್ವಿಂದರ್ ಸಿಂಗ್ಗೆ ತಾವೊಬ್ಬ ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿರುತ್ತಾರೆ. ಆದರೆ, ಕುಟುಂಬದ ಜವಾಬ್ದಾರಿ, ಅವಕಾಶಗಳ ಕೊರತೆಯಿಂದಾಗಿ ತಮ್ಮ ಕನಸನ್ನು ತ್ಯಾಗ ಮಾಡುವ ಅವರು, ಜೀವನ ನಿರ್ವಹಣೆಗಾಗಿ ರೈತನಾಗುತ್ತಾರೆ. ಆದರೂ ಅವರಿಗೆ ಕ್ರಿಕೆಟ್ ಮೇಲಿನ ಪ್ರೇಮ ಮಾತ್ರ ಕಡಿಮೆಯಾಗುವುದಿಲ್ಲ.
ಶುಭಮನ್ ಗಿಲ್ಗೆ ಮೂರನೇ ವರ್ಷದವನಿದ್ದಾಗಲೇ ಕ್ರಿಕೆಟ್ ಮೇಲೆ ಆಸಕ್ತಿ ಶುರುವಾಯಿತು ಎಂದು ತಂದೆ ಹಲವು ಕಡೆ ಹೇಳಿದ್ದಾರೆ. ಬೇರೆ ಯಾವುದೇ ಆಟಿಕೆಗಳಿಗಿಂತ ಕ್ರಿಕೆಟ್ ಬ್ಯಾಟ್ ಮೇಲೆ ಗಿಲ್ಗೆ ಹೆಚ್ಚಿನ ಇಷ್ಟವಿತ್ತಂತೆ. ಇದನ್ನು ಕಂಡ ಲಖ್ವಿಂದರ್ ಸಿಂಗ್ ಮಗನಿಗೆ ಕ್ರಿಕೆಟ್ ತರಬೇತಿ ನೀಡಲು ಆರಂಭಿಸಿದರು.

ಗಿಲ್ ವಿಕೆಟ್ ಪಡೆದವರಿಗೆ 100 ರೂಪಾಯಿ ಬಹುಮಾನ
ಶುಭಮನ್ ಗಿಲ್ ಬಾಲ್ಯದಲ್ಲಿ ತಮ್ಮ ಹಳ್ಳಿಯಲ್ಲೇ ಕ್ರಿಕೆಟ್ನ ಮೊದಲ ಪಾಠಗಳನ್ನು ಕಲಿತರು. ಮಗನ ಕ್ರಿಕೆಟ್ ಅಭ್ಯಾಸ ಜಮೀನನ್ನೇ ಕ್ರಿಕೆಟ್ ಅಂಗಳವನ್ನಾಗಿ ಬದಲಾಯಿಸಿದ್ದರು. ಅಲ್ಲದೆ ವೇಗದ ಬೌಲಿಂಗ್ಗೆ ಸಹಕಾರಿಯಾಗು ಟರ್ಫ್ ಪಿಚ್ ಸಿದ್ಧಪಡಿಸಿದ್ದರು. ಮಗನಿಗೆ ಬೌಲಿಂಗ್ ಮಾಡಲು ಗ್ರಾಮದ ಹುಡುಗರನ್ನು ಕರೆಯುತ್ತಿದ್ದ ಲಖ್ವಿಂದರ್ ಸಿಂಗ್, ಗಿಲ್ ವಿಕೆಟ್ ಪಡೆದವರಿಗೆ 100 ರುಪಾಯಿ ಬಹುಮಾನವನ್ನು ನೀಡುತ್ತಿದ್ದರು. ಪ್ರತಿದಿನ 500 ರಿಂದ 700 ಎಸೆತಗಳನ್ನು ಗಿಲ್ ಎದುರಿಸಬೇಕಾಗಿತ್ತು, ಉತ್ತಮ ಬ್ಯಾಟರ್ ಆಗಲು ಇದು ಸಹಕಾರಿಯಾಯಿತು.
ಮಗನಿಗೆ ಕ್ರಿಕೆಟ್ನಲ್ಲಿ ಹೆಚ್ಚಿನ ತರಬೇತಿ ನೀಡುವ ಸಲುವಾಗಿ ಮೊಹಾಲಿಗೆ ಬಂದರು. ಮಗನಿಗೆ ಅನುಕೂಲವಾಗಲೆಂದು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ಗೆ ಸಮೀಪದಲ್ಲೇ ಮನೆಯನ್ನು ಬಾಡಿಗೆ ಪಡೆದರು. ಮೊಹಾಲಿ ಕ್ರಿಕೆಟ್ ಅಸೋಸಿಯೇಷನ್ಗೆ ಮಗನನ್ನು ಸೇರಿಸುವ ಮೂಲಕ ಅವರಿಗೆ ಹೆಚ್ಚಿನ ತರಬೇತಿ ಕೊಡಿಸಿದರು.

ಪಾಕಿಸ್ತಾನದ ವಿರುದ್ಧ ಅಮೋಘ ಶತಕ
17ನೇ ವಯಸ್ಸಿನಲ್ಲಿ ಭಾರತ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದರು. ಇಂಗ್ಲೆಂಡ್ ಅಂಡರ್ 19 ತಂಡದ ವಿರುದ್ಧ ಪದರ್ಪಾಣ ಪಂದ್ಯವನ್ನಾಡಿದ ಅವರು, ಸತತವಾಗಿ ಎರಡು ಶತಕಗಳನ್ನು ಸಿಡಿಸಿದರು. 2017ರಲ್ಲಿ ಭಾರತ ಅಂಡರ್ 19 ತಂಡಕ್ಕೆ ಉಪನಾಯಕನಾದರು. 2018ರಲ್ಲಿ ನಡೆದ ಐಸಿಸಿ ಅಂಡರ್ -19 ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. 5 ಇನ್ನಿಂಗ್ಸ್ಗಳಲ್ಲಿ 372 ರನ್ ಗಳಿಸಿ ಟೂರ್ನಿಯ ಆಟಗಾರ ಪ್ರಶಸ್ತಿ ಪಡೆದುಕೊಂಡರು.
ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಅಂಡರ್-19 ತಂಡದ ವಿರುದ್ಧ 94 ಎಸೆತಗಳಲ್ಲಿ ಅಜೇಯ 102 ರನ್ ಗಳಿಸುವ ಮೂಲಕ ಗಮನ ಸೆಳೆದರು. ಗಿಲ್ ಆಟಕ್ಕೆ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಸೇರಿದಂತೆ ಅನೇಕ ದಿಗ್ಗಜ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಫೈನಲ್ ಪಂದ್ಯದಲ್ಲಿ ಕೂಡ 30 ರನ್ ಗಳಿಸುವ ಮೂಲಕ ಭಾರತ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು. ಭಾರತ ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು.

ಅಪ್ಪನೇ ಗಿಲ್ಗೆ ದೊಡ್ಡ ಶಕ್ತಿ
2019 ಜನವರಿ 31ರಂದು ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಡಿಸೆಂಬರ್ 26, 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಜನವರಿ 3, 2023ರಂದು ಶ್ರೀಲಂಕಾ ವಿರುದ್ಧ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದರು. ತಾವು ಆಡಿದ 6ನೇ ಟಿ20 ಪಂದ್ಯದಲ್ಲೇ ಶತಕ ಬಾರಿಸಿ ಗಮನ ಸೆಳೆದಿದ್ದಾರೆ.
ಈಗಲೂ ಶುಭಮನ್ ಗಿಲ್ಗೆ ಅಪ್ಪನೇ ಮೊದಲ ಗುರು, ತಮ್ಮ ಫಾರ್ಮ್ ಕಳೆದುಕೊಂಡಾಗ, ಆತ್ಮವಿಶ್ವಾಸ ಕಡಿಮೆಯಾದಾಗ ಗಿಲ್ ಮೊದಲು ಹೋಗುವುದು ಅಪ್ಪನ ಬಳಿಗೆ. ತಮ್ಮ ಊರಿನ ಬಗ್ಗೆ ಅತಿಯಾದ ಅಭಿಮಾನ ಹೊಂದಿರುವ ಗಿಲ್ಗೆ ಕೃಷಿಕನಾಗಿ ಅಪ್ಪನ ಕೃಷಿಯನ್ನು ಮುಂದುವರೆಸುವ ಆಸೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications