
ನವದೆಹಲಿ, ಅಕ್ಟೋಬರ್ 1: ಹೈದರಾಬಾದ್ ನ ಯುವ ವೇಗಿ ಮೊಹಮ್ಮದ್ ಸಿರಾಜ್ ಅವರು ತಾನು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಕಾರಣ ಎಂದಿದ್ದಾರೆ. (ಚಿತ್ರಕೃಪೆ: ಇಎಸ್ಪಿಎನ್ ಕ್ರಿಕ್ ಇನ್ಫೋ)
ಅಕ್ಟೋಬರ್ 4ರಿಂದ ಆರಂಭವಾಗಲಿರುವ ಪ್ರವಾಸಿ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿ ಮೂಲಕ ಸಿರಾಜ್ ಅವರು ಅಂತಾರಾಷ್ಟ್ರೀಯ ಟೆಸ್ಟ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಪ್ರಥಮದರ್ಜೆ ಕ್ರಿಕೆಟ್ ನಲ್ಲಿ ಸಿರಾಜ್ ಕೇವಲ 8 ಇನ್ನಿಂಗ್ಸ್ ಗಳಲ್ಲಿ 14.21ರ ಸರಾಸರಿಯಲ್ಲಿ 37 ವಿಕೆಟ್ ಪಡೆದ ಸಾಧನೆ ಹೊಂದಿದ್ದಾರೆ.
ಈ ಬಗ್ಗೆ ಮಾತನಾಡುತ್ತ ಸಿರಾಜ್, 'ಬೌಲಿಂಗ್ ಗೆ ಮೊದಲು ಬ್ಯಾಟ್ಸ್ಮನ್ ಒಬ್ಬನ ಬ್ಯಾಟಿಂಗ್ ಕೌಶಲವನ್ನು ಸೂಕ್ಷ್ಮವಾಗಿ ಗಮನಿಸಿ, ಅದಕ್ಕೆ ತಕ್ಕಹಾಗೆ ಗೆರೆ-ದೂರವನ್ನು ಬದಲಿಸಿಕೊಳ್ಳು ಎನ್ನುವ ಧೋನಿ ಮಾತು ನನ್ನ ಆಟದ ರೀತಿಯನ್ನೇ ಬದಲಿಸಿತು. ನನ್ನ ಆಟವನ್ನು ಇನ್ನೊಂದು ಮಟ್ಟಕ್ಕೆ ಕರೆದೊಯ್ಯಿತು' ಎಂದು ಹೇಳಿದರು.
'ನಾನು ಟಿ20 ಮೂಲಕ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದೆ. ಅನಂತರ ನಾನು ಏಕದಿನಕ್ಕೆ ಪ್ರವೇಶಿಸಿದ್ದೆ. ಒಮ್ಮೆ ರಾಹುಲ್ (ದ್ರಾವಿಡ್) ಸರ್ ಅವರು ಗೆರೆ ಮತ್ತು ದೂರದ ಬಗ್ಗೆ ಗಮನ ಹರಿಸು ಎಂದು ಸಲಹೆ ನೀಡಿದರು. ಮತ್ತೆ ನಾನು ಭರತ್ ಅರುಣ್ (ಬೌಲಿಂಗ್ ಕೋಚ್) ಮಾರ್ಗದರ್ಶನ ಪಡೆದೆ. ಇವೆಲ್ಲವೂ ನನ್ನೀ ಗೆಲುವಿಗೆ ಕಾರಣ' ಎಂದು ಅಂತಾರಾಷ್ಟ್ರೀಯ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ ಬಗ್ಗೆ ಸಿರಾಜ್ ಖುಷಿ ಹಂಚಿಕೊಂಡರು.