
ಭಾರತ ಟಿ20 ತಂಡದ ನಾಯಕತ್ವವನ್ನು ತೊರೆಯದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಂದಿಗೂ ಕೇಳಲಿಲ್ಲ ಎಂಬ ವಿರಾಟ್ ಕೊಹ್ಲಿ ಹೇಳಿಕೆಯು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ವಿರಾಟ್ ಕೊಹ್ಲಿ ಉತ್ತರದಿಂದ ಅನೇಕ ಆಯಾಮಗಳು ತೆರೆದುಕೊಂಡಿದ್ದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನ ಪೇಚಿಗೆ ಸಿಲುಕಿಸಿದೆ.
ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯುವ ಮುನ್ನ ಖಾಸಗಿಯಾಗಿ ಕರೆ ಮಾಡಿ, ನಾಯಕತ್ವ ತ್ಯಜಿಸದಂತೆ ಕೇಳಿಕೊಂಡಿದ್ದೆ, ಆದ್ರೆ ವಿರಾಟ್ ಒಪ್ಪಲಿಲ್ಲ ಎಂಬ ಹೇಳಿಕೆ ನೀಡಿದ್ದರು. ಆದ್ರೆ ವಿರಾಟ್ ಇದಕ್ಕೆ ತದ್ವಿರುದ್ದ ಹೇಳಿಕೆ ನೀಡುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ. ಜೊತೆಗೆ ಸೌರವ್ ಗಂಗೂಲಿ ಹೇಳಿದ್ದು ನಿಜವೇ? ಅಥವಾ ವಿರಾಟ್ ಕೊಹ್ಲಿ ಹೇಳುತ್ತಿರುವುದು ಸತ್ಯವೇ? ಎಂಬ ಪ್ರಶ್ನೆಗಳನ್ನ ಹುಟ್ಟುಹಾಕಿದೆ.
ಇದೀಗ ಈ ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಸೌರವ್ ಗಂಗೂಲಿ ಉತ್ತರ ನೀಡಬೇಕು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಬಿಸಿಸಿಐ ಅಧ್ಯಕ್ಷರ ಹೇಳಿಕೆಗೆ ವಿರುದ್ಧವಾಗಿ ಮಾತನಾಡಿರುವುದು ಸಣ್ಣ ವಿಷಯವಲ್ಲ. ಗಂಗೂಲಿ ಮತ್ತು ಕೊಹ್ಲಿ ಅವರ ಎರಡು ವ್ಯತಿರಿಕ್ತ ಹೇಳಿಕೆಗಳಿಂದ ಭಾರತೀಯ ಡ್ರೆಸ್ಸಿಂಗ್ ರೂಂನಲ್ಲಿ ಅಶಾಂತಿ ಉಂಟಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
"ಭಾರತೀಯ ಕ್ರಿಕೆಟ್ನ ಸುಧಾರಣೆಗಾಗಿ ಗಂಗೂಲಿ ಈ ಪ್ರಶ್ನೆಗೆ ಉತ್ತರಿಸಬೇಕಾಗಿದೆ. ಅವರು ಬಿಸಿಸಿಐ ಅಧ್ಯಕ್ಷರಾಗಿದ್ದು, ಸಾರ್ವಜನಿಕವಾಗಿ ಕೊಹ್ಲಿ ಅವರನ್ನು ವಿರೋಧಿಸುವುದು ಸಣ್ಣ ವಿಷಯವಲ್ಲ. ಒಂದೆಡೆ, ಟಿ20 ನಾಯಕತ್ವದಿಂದ ಕೆಳಗಿಳಿಯದಂತೆ ಕೊಹ್ಲಿಗೆ ಮನವಿ ಮಾಡಿರುವುದಾಗಿ ಗಂಗೂಲಿ ಹೇಳಿದ್ದಾರೆ. ಆದರೆ ಕೊಹ್ಲಿ ಇದೀಗ ಬಿಸಿಸಿಐನಿಂದ ಯಾರೂ ಈ ಬಗ್ಗೆ ತನ್ನೊಂದಿಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಇವು ಸಂಪೂರ್ಣವಾಗಿ ವ್ಯತಿರಿಕ್ತವಾದ ಎರಡು ಹೇಳಿಕೆಗಳು. ಇದು ಗೊಂದಲವನ್ನುಂಟು ಮಾಡುತ್ತದೆ" ಎಂದು ಸಲ್ಮಾನ್ ಬಟ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ಭಾರತ ತಂಡದ ಪ್ರಮುಖ ಸಮಸ್ಯೆ ಎಂದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಅಲ್ಲ ಎಂದು ಸಲ್ಮಾನ್ ಭಟ್ ಅಭಿಪ್ರಾಯಪಟ್ಟಿದ್ದಾರೆ. ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ನಡುವೆ ವಿಶ್ವಾಸದ ಕೊರತೆಯಿದೆ ಎಂದು ನನಗೆ ಅನ್ನಿಸುತ್ತಿದೆ ಎಂದು ಪಾಕ್ ಮಾಜಿ ಆಟಗಾರ ಸಲ್ಮಾನ್ ಭಟ್ ಹೇಳಿದ್ದಾರೆ.
''ಇದು ನಾಯಕತ್ವದ ಪ್ರಶ್ನೆಯಲ್ಲ. ರೋಹಿತ್ ಅಧಿಕಾರ ವಹಿಸಿಕೊಂಡ ಬಗ್ಗೆ ಅಲ್ಲ. ಅವರು ಉತ್ತಮ ನಾಯಕ ಮತ್ತು ಅಂತರಾಷ್ಟ್ರೀಯ ಮತ್ತು ಐಪಿಎಲ್ ಮಟ್ಟದಲ್ಲಿ ತಮ್ಮನ್ನು ತಾವು ಸಾಭೀತುಪಡಿಸಿದ್ದಾರೆ. ಆದ್ರಿಲ್ಲ ಒಬ್ಬರಿಂದ ಇನ್ನೊಬ್ಬರಿಗೆ ಜವಾಬ್ದಾರಿಯನ್ನು ಹಸ್ತಾಂತರಿಸುವ ಪ್ರಕ್ರಿಯೆ ಸುಗಮವಾಗಿರಲಿಲ್ಲ. ಅನಗತ್ಯ ವಿವಾದಗಳನ್ನು ಸೃಷ್ಟಿಸಲಾಗಿದ್ದು, ಮುಂದೆ ಕೊಹ್ಲಿ ಮತ್ತು ಗಂಗೂಲಿ ನಡುವೆ ವಿಶ್ವಾಸದ ಕೊರತೆ ಉಂಟಾಗಲಿದೆ'' ಎಂದು ಬಟ್ ಹೇಳಿದ್ದಾರೆ.
ಇದರ ಜೊತೆಗೆ ತಂಡವನ್ನು ಒಗ್ಗೂಡಿಸುವುದು ರೋಹಿತ್ ಶರ್ಮಾಗೆ ಸವಾಲಾಗಿದೆ ಎಂದು ಬಟ್ ಹೇಳಿದ್ದಾರೆ. ಆದ್ರೆ ಈಗಾಗಲೇ ರೋಹಿತ್ ತಾನೊಬ್ಬ ಉತ್ತಮ ನಾಯಕ ಎಂದು ಸಾಬೀತುಪಡಿಸಿದ್ದಾರೆ ಎಂದು ಮಾತು ಮುಗಿಸಿದ್ದಾರೆ.