ನವದೆಹಲಿ, ಅಕ್ಟೋಬರ್ 16: ಬಿಸಿಸಿಐ ಅಧ್ಯಕ್ಷ ಪಟ್ಟವನ್ನು ಮಾಜಿ ನಾಯಕ ಸೌರವ್ ಗಂಗೂಲಿ ಅವರು ಅಲಂಕರಿಸುವುದು ಬಹುತೇಕ ಖಚಿತವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಟೀಂ ಇಂಡಿಯಾದ ಅತ್ಯಂತ ಯಶಸ್ವೀ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಅವರು ಬಿಜೆಪಿ ಸೇರುತ್ತಾರೆ ಎಂಬ ದಟ್ಟ ವದಂತಿ ಹಬ್ಬಿದ್ದು, ಅದಕ್ಕೆ ದಾದಾ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಸೌರವ್ ಗಂಗೂಲಿ ಭೇಟಿಯಾದರು. ಉಭಯ ನಾಯಕರ ಭೇಟಿ ಸಾಕಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು. ಆದರೆ ತಮ್ಮ ರಾಜಕೀಯ ಸೇರ್ಪಡೆಯ ವದಂತಿಯನ್ನು ಅಲ್ಲಗಳೆದ 'ಬಂಗಾಳದ ಹುಲಿ' ಗಂಗೂಲಿ, "ನಾನು ರಾಜಕೀಯಕ್ಕೆ ಸೇರುವ ಯಾವ ಯೋಚನೆಯನ್ನೂ ಮಾಡಿಲ್ಲ. ಅಮಿತ್ ಶಾ ಅವರನ್ನು ರಾಜಕೀಯ ಕಾರಣದಿಂದ ಭೇಟಿಯಾಗಿಲ್ಲ. ಈ ಮೊದಲು ನಾನು ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದಾಗಲೂ ಇಂಥದೇ ವದಂತಿ ಹಬ್ಬಿತ್ತು. ಆದರೆ ಕೊನೆಯಲ್ಲಿ ಏನಾಯ್ತು ಎಂಬುದು ನಿಮಗೆಲ್ಲ ಗೊತ್ತು. ಆದ್ದರಿಂದ ನಾನು ರಾಜಕೀಯ ಸೇರುವ ಯೋಚನೆಯನ್ನು ಮಾಡಿಲ್ಲ" ಎಂದು ಗಂಗೂಲಿ ಹೇಳಿದರು.
ಬಿಸಿಸಿಐ ಚುಕ್ಕಾಣಿ ಹಿಡಿಯಲು ಸಜ್ಜಾದ ಮಾಜಿ ನಾಯಕ ಸೌರವ್ ಗಂಗೂಲಿ!
ಭಾರತೀಯ ಕ್ರಿಕೆಟ್ ನಿಂಯತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅವರು ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಈ ಸಂದರ್ಭದಲ್ಲಿ ಅವರು ಬಿಜೆಪಿಗೂ ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು.
ಪಶ್ಚಿಮ ಬಘಳಾದಲ್ಲಿ 2021 ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿಯನ್ನು ಈ ರಾಜ್ಯದಲ್ಲಿ ಬಲಗೊಳಿಸುವ ಗುರುತರ ಜವಾಬ್ದಾರಿ ಅಮಿತ್ ಶಾ ಅವರ ಮೇಲಿದ್ದು, ಸೂಕ್ತ ನಾಯಕತ್ವದ ಹುಡುಕಾಟದಲ್ಲಿದ್ದಾರೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ದಾದಾ ಬಿಜೆಪಿಗೆ ಸೇರಿದರೆ ಅದು ಪಕ್ಷಕ್ಕೆ ಆನೆಬಲ ನೀಡಬಹುದು ಎಂಬ ಯೋಚನೆ ಅಮಿತ್ ಶಾ ಅವರಿಗೆ ಇದ್ದಿರಲಿಕ್ಕೆ ಸಾಕು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಸೌರವ್ ಗಂಗೂಲಿ ಅವರು ಮಾತ್ರ ರಾಜಕೀಯ ಸೇರ್ಪಡೆಯ ಎಲ್ಲಾ ವದಂತಿಗಳನ್ನೂ ತಳ್ಳಿಹಾಕಿದ್ದು, ಕ್ರಿಕೆಟ್ ಹೊರತಾಗಿ ತಾವು ಬೇರೆ ಕ್ಷೇತ್ರದ ಬಗ್ಗೆ ಆಸಕ್ತಿ ತಳೆಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.