ಪಾಕಿಸ್ತಾನ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಕ್ರಿಕೆಟ್ನಲ್ಲಿ ಧರ್ಮಕ್ಕೆ ಯಾವುದೇ ಪಾಯತ್ರವಿಲ್ಲ ಎಂದು ಹೇಳಿ ಮಾಜಿ ಸ್ಪಿನ್ನರ್ ಧಾನೀಶ್ ಕನೇರಿಯಾ ಅವರ ವಿಚಾರವಾಗಿ ಎದ್ದಿರುವ ವಿವಾದಕ್ಕೆ ತಿಪ್ಪೆಸಾರುವ ಯತ್ನ ಮಾಡಿದ್ದಾರೆ. ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಇನ್ಜಮಾಮ್ ಉಲ್ ಹಕ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ದಾನೀಶ್ ಕನೇರಿಯಾ ಇನ್ಜಮಾಮ್ ಉಲ್ ಹಕ್ ಅವರ ನಾಯಕತ್ವದಲ್ಲೇ ಹೆಚ್ಚಿನ ಪಂದ್ಯಗಳನ್ನು ಆಡಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ಜಮಾಮ್ ಉಲ್ ಹಕ್ ಪ್ರತಿಕ್ರಿಯಿಸಿದ್ದು ತನ್ನ ತಂಡದ ಯಾವ ಆಟಗಾರನೂ ಕೂಡ ದಾನೀಶ್ ಕನೇರಿಯಾ ಅವರ ಜೊತೆ ಊಟದ ವಿಚಾರವಾಗಿ ಅಥವಾ ಹೊರಗಡೆ ಸುತ್ತಾಡಲು ಹಿಂಜರಿದಿರುವ ಬಗ್ಗೆ ನನಗೆ ತಿಳಿದಿಲ್ಲ ಎಂದಿದ್ದಾರೆ.
ತಾನು ನಾಯಕನಾಗಿದ್ದಾಗ ದಾನೀಶ್ ಕನೆರಿಯಾ ಹೆಚ್ಚಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಪಾಕಿಸ್ತಾನ ತಂಡದಲ್ಲಿ ಮುಸ್ಲಿಮೇತರರು ಎಂಬ ಬೇಧ ಮಾಡಿರುವ ಒಂದೇ ಒಂದು ಘಟನೆಗಳು ನಡೆದಿಲ್ಲ ಎಂದಿದ್ದಾರೆ. ಇದಕ್ಕೆ ಹಕ್ ಪಾಕ್ ಮಾಜು ಆಟಗಾರ ಯೂಸುಪ್ ಉದಾಹರಣೆಯನ್ನು ನೀಡಿದ್ದು, ಆರಂಭದಲ್ಲಿ ಯೂಸುಫ್ ಕ್ರಿಶ್ಚಿಯನ್ ಧರ್ಮೀಯರಾಗಿದ್ದರು. ಆದರೆ ಅವರೂ ಕೂಡ ಆ ಸಂದರ್ಭದಲ್ಲಿ ಯಾವುದೇ ರೀತಿಯಲ್ಲೂ ಧರ್ಮದ ಕಾರಣಕ್ಕೆ ಕೆಟ್ಟ ಕ್ಷಣಗಳನ್ನು ಎದುರಿಸಿಲ್ಲ ಎಂದಿದ್ದಾರೆ.
ಈ ಸಂದರ್ಭದಲ್ಲಿ ಹಕ್ ಪಾಕಿಸ್ತಾನ ಮತ್ತು ಭಾರತದ 2004ರ ಸರಣಿಯನ್ನು ನೆನಪಿಸಿಕೊಂಡಿದ್ದಾರೆ. ಎರಡೂ ದೇಶಗಳಲ್ಲೂ ಸರಣಿಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಟಗಾರರನ್ನು ಪಾಕಿಸ್ತಾನದಲ್ಲಿ ಹಾಗೂ ಪಾಕಿಸ್ತಾನ ಆಟಗಾರರಿಗೆ ಭಾರತದಲ್ಲಿ ಅತ್ಯುತ್ತಮ ಆತಿಥ್ಯ ದೊರೆತಿತ್ತು ಎಂಬುದನ್ನು ಹೇಳಿಕೊಂಡಿದ್ದಾರೆ.
ಟೀಮ್ ಇಂಡಿಯಾ ನಾಯಕ ಸೌರವ್ ಗಂಗೂಲಿ ಊಟ ಬಡಿಸಿದ ಸಂದರ್ಭವನ್ನು ಕೂಡ ನೆನಪಿಸಿಕೊಂಡಿದ್ದಾರೆ ಹಕ್. ಕೊಲ್ಕತ್ತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸೌರವ್ ಗಂಗೂಲಿ ತನಗಾಗಿ ಭೋಜನವನ್ನು ಕಳುಹಿಸಿದ್ದರು. ನಾನು ಅದನ್ನು ಸ್ವೀಕರಿಸಿದ್ದೆ ಎಂದಿದ್ದಾರೆ.
ಈ ಮೂಲಕ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿಯ ಜೊತೆಗಿನ ತಮ್ಮ ಬಾಂಧವ್ಯವನ್ನು ಬಣ್ಣಿಸಿ ದಾನೀಶ್ ಕನೇರಿಯಾ ವಿಚಾರದಲ್ಲಿ ಏನೂ ನಡೆದಿಲ್ಲ ಎಂಬುದನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.