
ಭಾರತದ ಮಾಜಿ ಕ್ರಿಕೆಟ್ ಇರ್ಫಾನ್ ಪಠಾಣ್ ಟ್ವೀಟ್ಗೆ ಅಮಿತ್ ಮಿಶ್ರಾ ಸಖತ್ ಪ್ರತಿಕ್ರಿಯೆ ನೀಡಿದ್ದು, ಭಾರತವು ಸುಂದರ ದೇಶವಾಗಬೇಕಾದ್ರೆ, ಮೊದಲು ಸಂವಿಧಾನವನ್ನ ಎಲ್ಲರೂ ಪಾಲಿಸಬೇಕು ಎಂದಿದ್ದಾರೆ.
ಭಾರತದಲ್ಲಿ ಕೆಲವೆಡೆ ಕೋಮು-ಸೌಹಾರ್ದತೆ ಕೆಡುವುವ ಪ್ರಯತ್ನ ನಡೆಯುತ್ತಿದ್ದು, ಸಾಮಾಜಿಕ ಶಾಂತಿಗೆ ಭಂಗ ಎದುರಾಗಿದೆ ಎಂಬುದು ಇರ್ಫಾನ್ ಪಠಾಣ್ ಟ್ವೀಟ್ ಹಿಂದಿನ ಉದ್ದೇಶದಂತಿದೆ. ಇತ್ತೀಚೆಗೆ ಭಾರತದಲ್ಲಿ ಹಲವೆಡೆ ಕೋಮು ಗಲಭೆಗಳು ನಡೆದಿರುವ ನಿದರ್ಶನಗಳನ್ನ ಆಧಾರವಾಗಿಟ್ಟುಕೊಂಡು ಇರ್ಫಾನ್ ಈ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗಷ್ಟೆ ಇಸ್ಲಾಂ ಧರ್ಮವನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಯುವಕನೊಬ್ಬನ ಸೋಶಿಯಲ್ ಮೀಡಿಯಾ ಪೋಸ್ಟ್ನಿಂದ ಕೆರಳಿದ ಒಂದು ಗುಂಪು, ಕರ್ನಾಟಕದ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.
'' ನನ್ನ ದೇಶ, ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಟ ದೇಶವಾಗುವ ಸಾಮರ್ಥ್ಯವನ್ನ ಹೊಂದಿದೆ. ಆದ್ರೆ...'' ಎಂದು ಟೀಂ ಇಂಡಿಯಾದ ಮಾಜಿ ವೇಗಿ ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದರು. ಈ ಮೂಲಕ ಯಾವುದೋ ಒಂದು ವಿಚಾರದ ಕುರಿತಾಗಿ ಗೊಂದಲವನ್ನ ಟ್ವೀಟ್ ಮೂಲಕ ವ್ಯಕ್ತಪಡಿಸಿದ್ರು.
ಇರ್ಫಾನ್ ಪಠಾಣ್ರ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆದ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗ, ಸ್ಪಿನ್ನರ್ ಅಮಿತ್ ಮಿಶ್ರಾ, ಪಠಾಣ್ ಟ್ವೀಟ್ ಹೋಲುವಂತೆ ಬರೆದು ಆತನ ಮಾತನ್ನ ಮುಂದುವರಿಸಿದಂತೆ ಟ್ವೀಟ್ ಮಾಡಿದ್ದಾರೆ. ಇದು ಆತನಿಗೆ ಉತ್ತರ ನೀಡದಿದ್ದರೂ, ಪರೋಕ್ಷವಾಗಿ ಇರ್ಫಾನ್ ಪಠಾಣ್ಗೆ ತಿಳಿಸಿದಂತಿದೆ.
'' ನನ್ನ ದೇಶ, ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಟ ದೇಶವಾಗುವ ಸಾಮರ್ಥ್ಯವನ್ನ ಹೊಂದಿದೆ. ಆದ್ರೆ ನಮ್ಮಲ್ಲಿ ಕೆಲವರು ಅನುಸರಿಸಬೇಕಾದ ಮೊದಲ ಪುಸ್ತಕ ಸಂವಿಧಾನ ಎಂದು ಅರಿತುಕೊಂಡರೆ ಮಾತ್ರ'' ಎಂದು ಅಮಿತ್ ಮಿಶ್ರಾ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಅಮಿತ್ ಮಿಶ್ರಾ ಟ್ವೀಟ್ಗೆ ಶ್ಲಾಘನೆ ವ್ಯಕ್ತವಾಗಿದ್ದು, 87 ಸಾವಿರ ನೆಟ್ಟಿಗರು ಲೈಕ್ ಮಾಡಿದ್ದು, 19.3 ಸಾವಿರ ರೀ ಟ್ವೀಟ್ ಆಗಿದೆ.