ಪ್ರಾರ್ಥನಾ ಮಂದಿರ, ಬಾರುಗಳಲ್ಲಿ, ಬಸ್ ಸ್ಟಾಂಡಿನಲ್ಲಿ, ಕಿರುತೆರೆಯಲ್ಲಿ, ದೊಡ್ಡಪರದೆಯಲ್ಲಿ ಎಲ್ಲೆಲ್ಲೂ ಕ್ರಿಕೆಟ್ ಜ್ವರ. ಅದಕ್ಕೆ ಕಾರಣ ವಿಶ್ವಕಪ್ಪಿನ ಮೊದಲ ಪಂದ್ಯವೇ ಪಾಕಿಸ್ತಾನದ ಜೊತೆಗೆ ಎನ್ನುವ ಕಾರಣ ಇದ್ದರೂ ಇರಬಹುದು.
ಭಾರತೀಯರಿಗೆ ದೇಶೀ ಕ್ರೀಡೆಗಿಂತ ಹೆಚ್ಚಿನ ಅಭಿಮಾನ ಕ್ರಿಕೆಟ್ ಮೇಲೆ. ಅಭಿಮಾನಿಗಳಂತೂ ಕ್ರಿಕೆಟ್ ಪಂದ್ಯವನ್ನು ತಮ್ಮದೇ ಆದ ಶೈಲಿಯಲ್ಲಿ ವೀಕ್ಷಕ ವಿವರಣೆ ನೀಡುವುದು ನಡೆದುಕೊಂಡು ಬರುತ್ತಲೇ ಇದೆ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವ ಪಟ್ಟಕ್ಕೆ ವಾಪಸ್ ಬಂದ ನಂತರ ಭಾರತದ ಒನ್ ಎಂಡ್ ಓನ್ಲೀ ಭರವಸೆಯ 'ಗೋಡೆ' ವಿರಾಟ್ ಕೊಹ್ಲಿ ಬ್ಯಾಟ್ ನಲ್ಲಿ ರನ್ನಿನ ಹೊಳೆ ಹರೆಯದೇ ಇರುವುದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತಂದಿದೆ. (ಈ ಯುವ ಆಟಗಾರರ ಮೇಲೆ ಕಣ್ಣಿರಿಸಿ)
ಬಿಸಿಸಿಐ, ಆಟಗಾರರು ತಮ್ಮ ಪತ್ನಿಯರು ಅಥವಾ ಪ್ರೇಯಸಿಯರ ಜೊತೆ ವಿಶ್ವಕಪ್ ಕ್ರಿಕೆಟಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ನಿರ್ಭಂದ ಹೇರಿರುವುದರ ನಂತರ ಕೊಹ್ಲಿ ತನ್ನ ಬ್ಯಾಟಿಂಗ್ ಲಯವನ್ನು ಕಳೆದು ಕೊಂಡಿದ್ದಾರೆ ಎನ್ನುವ ಗುಸುಗುಸು ಸುದ್ದಿ ಹರಿದಾಡುತ್ತಿದೆ.

ಫೈನಲ್ ಸೋತರೂ ಪರವಾಗಿಲ್ಲ, ಪಾಕ್ / ಭಾರತದ ಜೊತೆ ಮಾತ್ರ ಸೋಲಬಾರದು ಎನ್ನುವ ಮನಸ್ಥಿತಿ ಪಾಕಿಸ್ತಾನದಲ್ಲಿ ಇದ್ದಂತೆ, ನಮ್ಮಲ್ಲೂ ಇದೆ. ಹಾಗಾಗಿ, ಪಾಕಿಸ್ತಾನದ ಜೊತೆಗಿನ ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಅರ್ಜೆಂಟಾಗಿ ದೃಷ್ಠಿ ತೆಗೆಸಬೇಕು ಎನ್ನುವ ವ್ಯಂಗ್ಯ ಮಾತೂ ಕೇಳಿ ಬರುತ್ತಿದೆ.
ಆಸ್ಟ್ರೇಲಿಯಾ ಜೊತೆಗಿನ ಟೆಸ್ಟ್ ಪಂದ್ಯ ಮತ್ತು ನಂತರದ ತ್ರಿಕೋಣ ಸರಣಿಯಲ್ಲಿ ತಂಡ ಸೋತರೂ, ಪ್ರಚಂಡ ಫಾರಂನಲ್ಲಿದ್ದ ವಿರಾಟ್ ಕೊಹ್ಲಿಗೆ ಏನಾಗಿದೆ? ಕ್ರೀಸ್ ನಿಂದ ಪ್ಲೇನ್ ಕಿಸ್ ಕೊಡಲು ಅನುಕ್ಷಾ ಶರ್ಮಾ ಇಲ್ಲದಿರುವುದಾ?
ಕೊಹ್ಲಿ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಆಟಗಾರ. ಇತರ ಆಟಗಾರರು ಅಷ್ಟೇನೂ ಉತ್ತಮ ಫಾರಂನಲ್ಲಿ ಇಲ್ಲದಿದ್ದರೂ ಕೊಹ್ಲಿ ಫಾರಂಗೆ ಬರುವುದು ಮೊದಲ ಆದ್ಯತೆ.
ಹಾಗಾಗಿ, ವಿಷಯದ ಗಂಭೀರತೆ ಅರಿತಿರುವ ಬಿಸಿಸಿಐ ಕೊಹ್ಲಿ ಜೊತೆ ಯಾವುದಾದರೂ ಕ್ಲಬ್ /ಬಾರ್ ನಲ್ಲಿ ಕೂತು ಮಾತುಕತೆ ನಡೆಸಿ ವರದಿ ನೀಡುವಂತೆ ತಂಡದ ನಿರ್ದೇಶಕ ರವಿ ಶಾಸ್ತ್ರಿಗೆ ಸೂಚಿಸಿದೆ ಎನ್ನಲಾಗುತ್ತಿದೆ.
ಇದಲ್ಲದೇ, ಡ್ರೆಸ್ಸಿಂಗ್ ರೂಂನಲ್ಲೂ ಆಟಗಾರರ ನಡುವೆ ಹೊಂದಾಣಿಕೆ ಇಲ್ಲ ಎನ್ನುವುದರ ಬಗ್ಗೆಯೂ ಕೂಲಕುಂಷ ತನಿಖೆ ನಡೆಸುವಂತೆಯೂ ಬಿಸಿಸಿಐ, ರವಿ ಶಾಸ್ತ್ರಿಗೆ ಸೂಚನೆ ನೀಡಿದೆ.
ಈ ಮಧ್ಯೆ, ವಿಶ್ವಕಪ್ ಕ್ರಿಕೆಟಿಗೆ ಮುನ್ನ ನಾಡಿನ ಹಲವು ಜ್ಯೋತಿಷಿಗಳು ಭಾರತ ತಂಡದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಗ್ರಹಗತಿ ಚೆನ್ನಾಗಿ ಇಲ್ಲದಿರುವುದರಿಂದ ಆತ ಫಾರಂನಲ್ಲಿ ಇಲ್ಲ. (ವಿಶ್ವಕಪ್: ಟಾಪ್ ಟೆನ್ ಶತಕವೀರರು)

ಕೊಹ್ಲಿ ಫಾರಂಗೂ, ಪಾಪ ಹೆಣ್ಣುಮಗಳು ಅನುಕ್ಷಾ ಶರ್ಮಾಗೂ ಸಂಬಂಧ ಕಲ್ಪಿಸುವುದು ತರವಲ್ಲ. ನಾವು ಜ್ಯೋತಿಷಿಗಳು ಇರುವುದ್ಯಾತಕ್ಕೆ? ಚೆನ್ನಾಗಿಲ್ಲದಿರುವ ಗ್ರಹಗತಿಯನ್ನು ಸರಿಮಾಡಲು ತಾನೇ?
ಚಿಂತಿಸಬೇಡಿ, ನಾವಿದ್ದೇವೆಂದು ಬಿಸಿಸಿಐನ ಹೆಸರು ಹೇಳಲು ಇಚ್ಚಿಸ ಅಧಿಕಾರಿಯೊಬ್ಬರಿಗೆ ಕರ್ನಾಟಕ ಮೂಲದ ಜ್ಯೋತಿಷಿಯೊಬ್ಬರು ಅಭಯ ನೀಡಿದ್ದಾರೆ ಎನ್ನುವು ಸುದ್ದಿ ಲಂಗುಲಗಾಮಿಲ್ಲದೇ ಹರಿದಾಡುತ್ತಿದೆ.
ವಿರಾಟ್ ಕೊಹ್ಲಿ ಈ ಹಿಂದೆ ಬಳಸಿದ್ದ ಬ್ಯಾಟೊಂದನ್ನು ತರೆಸಿಕೊಡಲು ಜ್ಯೋತಿಷಿ, ಬಿಸಿಸಿಐ ಅಧಿಕಾರಿಗೆ ಸೂಚಿಸಿದ್ದಾರೆ. ಅದರಂತೇ, ದೆಹಲಿಯ ಕೊಹ್ಲಿ ಮನೆಯಿಂದ ಬ್ಯಾಟನ್ನು ಜ್ಯೋತಿಷಿಗೆ ಹಸ್ತಾಂತರಿಸಲಾಗಿದೆ.
ಬ್ಯಾಟಿಗೆ ಕುಂಕುಮ, ಅರಸಿನ, ಕರ್ಪೂರ ಹಚ್ಚಿ, ಕುಂಬಳಕಾಯಿ ಹೊಡೆಯುವ ಮೂಲಕ ವಿರಾಟ್ ಕೊಹ್ಲಿಗೆ ಇದ್ದ ದೃಷ್ಠಿದೋಷವನ್ನು ನಿವಾರಣೆ ಮಾಡಿದ್ದೇವೆ.
ಹೋಗಿ, ಡೋಂಟ್ ವರಿ ಕೊಹ್ಲಿ ಗ್ರಹಗತಿ ಇನ್ಮುಂದೆ ಚೆನ್ನಾಗಿರುತ್ತೆ ಎಂದು ಜ್ಯೋತಿಷಿ, ಬಿಸಿಸಿಐ ಅಧಿಕಾರಿಯ ತಲೆಸವರಿ ಕಳುಹಿಸಿದ್ದಾರೆ ಎನ್ನುವ ಸುದ್ದಿ ಬಿಸಿಸಿಐ ಪ್ರಧಾನ ಕಚೇರಿಯ ಮುಂಬೈನ ಚರ್ಚ್ ಗೇಟ್ ಪ್ರದೇಶದಲ್ಲಿ ಹರಿದಾಡುತ್ತಿದೆ. (ಈ ಲೇಖನವನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಬೇಡಿ)