ನಿಷೇಧದ ಪ್ರಮಾಣ ಇಳಿಕೆ: ವೇಗಿ ಶ್ರೀಶಾಂತ್ಗೆ 'ಜೀವದಾನ'

ಮುಂಬೈ, ಆಗಸ್ಟ್ 20: ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಆಜೀವ ನಿಷೇಧಕ್ಕೆ ಒಳಗಾಗಿರುವ ಭಾರತದ ವೇಗಿ ಎಸ್. ಶ್ರೀಶಾಂತ್ ಅವರ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿದ್ದು, ಮತ್ತೆ ಕ್ರಿಕೆಟ್ಗೆ ಮರಳಲು ಸತತ ಪ್ರಯತ್ನ ನಡೆಸುತ್ತಿದ್ದ ಅವರಿಗೆ ಕೊನೆಗೂ ನೆಮ್ಮದಿಯ ಸುದ್ದಿ ದೊರಕಿದೆ.
ಮುಂದಿನ ವರ್ಷದ ಆಗಸ್ಟ್ ಬಳಿಕ ಶಾಂತಕುಮಾರನ್ ಶ್ರೀಶಾಂತ್ ಅವರು ಮತ್ತೆ ಕ್ರಿಕೆಟ್ ಮೈದಾನಕ್ಕೆ ಇಳಿಯಲು ಸಾಧ್ಯವಿದೆ. ಅವರ ಮೇಲೆ ವಿಧಿಸಿದ್ದ ಆಜೀವ ನಿಷೇಧವನ್ನು ಏಳು ವರ್ಷದ ಅವಧಿಗೆ ಕಡಿತಗೊಳಿಸಲಾಗಿದೆ. ಬಿಸಿಸಿಐನ ಓಂಬುಡ್ಸ್ಮನ್ ಡಿಕೆ ಜೈನ್ ಅವರು ಮಂಗಳವಾರ ಈ ಆದೇಶ ಪ್ರಕಟಿಸಿದ್ದಾರೆ.
ಈಗಾಗಲೇ ಶ್ರೀಶಾಂತ್ ಅವರು ಆರು ವರ್ಷದ ನಿಷೇಧದ ಅವಧಿಯನ್ನು ಕಳೆದಿದ್ದಾರೆ. ಅವರು ತಮ್ಮ ಕ್ರೀಡಾ ಬದುಕಿನ ಮಹತ್ವದ ಸಮಯವನ್ನು ನಿಷೇಧದ ಕಾರಣ ತಪ್ಪಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಕ್ರಿಕೆಟಿಗರು 35ರ ಗಡಿ ತಲುಪುತ್ತಿದ್ದಂತೆ ನಿವೃತ್ತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದರಲ್ಲಿಯೂ ವೇಗದ ಬೌಲರ್ಗಳ ವೃತ್ತಿ ಬದುಕು ಇನ್ನೂ ಕಡಿಮೆ. ಆದರೆ, ಶ್ರೀಶಾಂತ್ ವಯಸ್ಸು ಈಗಾಗಲೇ 36 ದಾಟಿದೆ. 2020ರ ಆಗಸ್ಟ್ನಲ್ಲಿ ಶ್ರೀಶಾಂತ್ ಮೇಲಿನ ನಿಷೇಧ ಕೊನೆಗೊಳ್ಳಲಿದೆ.
ತಮ್ಮ ವಿರುದ್ಧದ ಆರೋಪಗಳು ಸುಳ್ಳಾಗಿದ್ದು, ತಾವು ಅಮಾಯಕರು ಎಂದು ಶ್ರೀಶಾಂತ್ ಪ್ರತಿಪಾದಿಸಿದ್ದರು.

2013ರಲ್ಲಿ ಸ್ಪಾಟ್ ಫಿಕ್ಸಿಂಗ್
ಐಪಿಎಲ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿದ್ದ ಆರೋಪದಲ್ಲಿ ಎಸ್ ಶ್ರೀಶಾಂತ್ ಅವರನ್ನು 2013ರಲ್ಲಿ ಅವರ ರಾಜಸ್ಥಾನ ರಾಯಲ್ಸ್ ತಂಡದ ಸಹ ಆಟಗಾರರಾದ ಅಜಿತ್ ಚಾಂಡಿಲ ಮತ್ತು ಅಂಕಿತ್ ಚವಾಣ್ ಅವರೊಂದಿಗೆ ನಿಷೇಧಿಸಿ ಬಿಸಿಸಿಐ ನಿರ್ಧಾರ ಪ್ರಕಟಿಸಿತ್ತು.
ಇದರ ವಿರುದ್ಧ ಶ್ರೀಶಾಂತ್ ಕಾನೂನು ಹೋರಾಟ ನಡೆಸಿದ್ದರು. ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಮೇಲಿನ ಶಿಕ್ಷೆ ತೆರವುಗೊಳಿಸಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಅಜರುದ್ದೀನ್ ಅವರಿಗೆ ಈ ಅವಕಾಶ ನೀಡಲಾಗಿರುವುದರಿಂದ ತಮ್ಮ ಮೇಲೆ ಮಾತ್ರ ಏಕೆ ಈ ಶಿಕ್ಷೆ ಮುಂದುವರಿಸಲಾಗಿದೆ ಎಂದು ಶ್ರೀಶಾಂತ್ ಪ್ರಶ್ನಿಸಿದ್ದರು.

ವೃತ್ತಿಯ ಪ್ರಮುಖ ಘಟ್ಟ ಕಳೆದಿರುವ ಶ್ರೀಶಾಂತ್
ಬಿಸಿಸಿಐ ಶಿಸ್ತು ಸಮಿತಿ ನೀಡಿದ್ದ ಆದೇಶವನ್ನು ಈ ವರ್ಷದ ಮಾರ್ಚ್ 15ರಂದು ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು. ಆಗಸ್ಟ್ 7ರಂದು ಆದೇಶ ಹೊರಡಿಸಿರುವ ಜೈನ್, ಶ್ರೀಶಾಂತ್ ಅವರಿಗೆ 'ನ್ಯಾಯ' ದೊರಕಿಸಿದ್ದು, ಅವರು ಮುಂದಿನ ವರ್ಷದಿಂದ ಕ್ರಿಕೆಟ್ ಆಡಲು ಅವಕಾಶ ಸಿಗುವಂತೆ ಏಳು ವರ್ಷಕ್ಕೆ ಅಮಾನತನ್ನು ಸೀಮಿತಗೊಳಿಸಿದ್ದಾರೆ.
'ಶ್ರೀಶಾಂತ್ ಅವರು 30 ವರ್ಷದ ಗಡಿ ದಾಟಿದ್ದಾರೆ. ಕ್ರಿಕೆಟಿಗನಾಗಿ ಅವರ ಪ್ರಮುಖ ವರ್ಷಗಳು, ಮುಖ್ಯವಾಗಿ ವೇಗದ ಬೌಲರ್ ಆಗಿ ಅವರ ವೃತ್ತಿ ಬದುಕು ಈಗಾಗಲೇ ಮುಗಿದು ಹೋಗಿದೆ' ಎಂದು ಜೈನ್ ಅವರು ತಮ್ಮ ಆದೇಶಕ್ಕೆ ಕಾರಣವನ್ನು ತಿಳಿಸಿದ್ದಾರೆ.
3ನೇ ಆ್ಯಷಸ್ ಟೆಸ್ಟ್ನಿಂದ ಆಸೀಸ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಹೊರಕ್ಕೆ

ಏಳು ವರ್ಷಕ್ಕೆ ಇಳಿಕೆ
'ಬಿಸಿಸಿಐ ಅಥವಾ ಅದರ ಸಹ ಸಂಸ್ಥೆಗಳಲ್ಲಿನ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಅಥವಾ ಯಾವುದೇ ರೀತಿಯ ವಾಣಿಜ್ಯಾತ್ಮಕ ಕ್ರಿಕೆಟ್ನಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಿ 2013ರ ಸೆ.13ರಿಂದ ಜಾರಿಯಾಗಿದ್ದ ಶಿಕ್ಷೆಯು ಏಳು ವರ್ಷಕ್ಕೆ ಕೊನೆಗೊಳ್ಳಲಿದೆ. ಶಿಸ್ತು ಸಮಿತಿ ಜಾರಿ ಮಾಡಿದ್ದ ನಿಷೇಧದ ಶಿಕ್ಷೆಯ ಅವಧಿಯು ಅಂತ್ಯಗೊಳ್ಳಲಿದೆ' ಎಂದು ಅವರು ಹೇಳಿದ್ದಾರೆ.
ಶ್ರೀಶಾಂತ್ ಅವರು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ಶಿಕ್ಷೆಯ ಪ್ರಮಾಣದ ಬದಲಾವಣೆ ಕುರಿತು ಜೈನ್ ಅವರು ಮೂರು ತಿಂಗಳ ಒಳಗೆ ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಕೆಎಂ ಜೋಸೆಫ್ ಅವರನ್ನು ಒಳಗೊಂಡ ನ್ಯಾಯಪೀಠ ಏಪ್ರಿಲ್ನಲ್ಲಿ ಹೇಳಿತ್ತು.

ಸ್ಪಾಟ್ ಫಿಕ್ಸಿಂಗ್ ನಡೆದೇ ಇಲ್ಲ!
ಶ್ರೀಶಾಂತ್ ಅವರು ಪಂದ್ಯದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದರು. ಅವರಿಗೆ ವಿಧಿಸಿರುವ ನಿಷೇಧವು ಕಾನೂನಿಗೆ ಅನುಗುಣವಾಗಿಯೇ ಇದೆ ಎಂದು ಬಿಸಿಸಿಐ ಹೇಳಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಶ್ರೀಶಾಂತ್ ಪರ ವಕೀಲರು, ಐಪಿಎಲ್ ವೇಳೆ ಯಾವುದೇ ಸ್ಪಾಟ್ ಫಿಕ್ಸಿಂಗ್ ನಡೆದಿರಲಿಲ್ಲ. ಅವರ ವಿರುದ್ಧ ಮಾಡಲಾಗಿರುವ ಆರೋಪಗಳಿಗೆ ಪ್ರಬಲ ಸಾಕ್ಷ್ಯಗಳಿಲ್ಲ ಎಂದು ವಾದಿಸಿದ್ದರು.

ಹತ್ತು ಲಕ್ಷ ಪಡೆದಿದ್ದ ಶ್ರೀಶಾಂತ್
ಬಿಸಿಸಿಐ ಪರ ವಕೀಲ ಪರಾಗ್ ತ್ರಿಪಾಠಿ ಅವರು, ಧ್ವನಿಮುದ್ರಿತ ದೂರವಾಣಿ ಸಂಭಾಷಣೆಯನ್ನು ಉಲ್ಲೇಖಿಸಿದ್ದರು. ಸ್ಪಾಟ್ ಫಿಕ್ಸಿಂಗ್ಗಾಗಿ ಹಣದ ಬೇಡಿಕೆ ಇರಿಸಲಾಗಿತ್ತು ಮತ್ತು ಬಹುಶಃ ಪಡೆದುಕೊಳ್ಳಲಾಗಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಎರಡನೆಯ ಓವರ್ನಲ್ಲಿ ಶ್ರೀಶಾಂತ್ 14 ರನ್ ನೀಡಿದ್ದಕ್ಕಾಗಿ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದರು ಎಂದು ಆರೋಪಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications