ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ವಿಶ್ವಕಪ್ನ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಪಾಕಿಸ್ತಾನ ನಂತರ ಎರಡೂ ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ.
ಅಕ್ಟೋಬರ್ 14ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯ ಸೋಲುಕಂಡಿತ್ತು. ಈ ಮೂಲಕ ವಿಶ್ವಕಪ್ನಲ್ಲಿ ಪಾಕಿಸ್ತಾನ ಸತತವಾಗಿ ಎಂಟನೇ ಬಾರಿಗೆ ಸೋಲು ಕಂಡಿತು.

155 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಪಾಕಿಸ್ತಾನ ನಂತರ 191 ರನ್ಗಳಿಗೆ ಆಲೌಟ್ ಆಗಿತ್ತು. ನಾಯಕ ರೋಹಿತ್ ಶರ್ಮಾ ಅವರ 63 ಎಸೆತಗಳಲ್ಲಿ 86 ರನ್ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ ಭಾರತ 30.3 ಓವರ್ಗಳಲ್ಲಿ ಈ ಮೊತ್ತವನ್ನು ಬೆನ್ನಟ್ಟುವ ಮೂಲಕ ಗೆಲುವು ಸಾಧಿಸಿತು.
ಭಾರತದ ವಿರುದ್ಧ ಹೀನಾಯ ಸೋಲು ಕಂಡ ಬಳಿಕ, ಪಾಕಿಸ್ತಾನ ತಂಡ ಬಿಸಿಸಿಐ ವಿರುದ್ಧ ಕ್ಯಾತೆ ತೆಗೆಯಿತು. ಪಾಕಿಸ್ತಾನದ ಕ್ರಿಕೆಟ್ ನಿರ್ದೇಶಕ ಮಿಕ್ಕಿ ಆರ್ಥರ್ ಮಾತನಾಡಿ, ಇದು ಐಸಿಸಿ ಪಂದ್ಯಾವಳಿಯಂತೆ ಇರಲಿಲ್ಲ, ಭಾರತ ಪಾಕಿಸ್ತಾನ ದ್ವಿಕ್ಷೀಯ ಸರಣಿಯಂತಿತ್ತು ಎಂದು ಹೇಳಿದ್ದರು. ಮೈದಾನದಲ್ಲಿ ಪಾಕಿಸ್ತಾನ ತಂಡಕ್ಕೆ ಬೆಂಬಲ ಸಿಗಲಿಲ್ಲ ಎಂದು ಕಾರಣ ನೀಡಿದ್ದರು.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನದ ಬೆಂಬಲದ ಕೊರತೆಗಾಗಿ ಬಿಸಿಸಿಐ ವಿರುದ್ಧ ವಾಗ್ದಾಳಿ ನಡೆಸಿದರು. "ನೋಡಿ, ಇದು ಐಸಿಸಿ ಕಾರ್ಯಕ್ರಮದಂತೆ ತೋರುತ್ತಿಲ್ಲ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ದ್ವಿಪಕ್ಷೀಯ ಸರಣಿಯಂತೆ ತೋರುತ್ತಿದೆ; ಇದು ಬಿಸಿಸಿಐ ಕಾರ್ಯಕ್ರಮದಂತೆ ತೋರುತ್ತಿದೆ. ನಾನು ದಿಲ್ ದಿಲ್ ಪಾಕಿಸ್ತಾನ ಎನ್ನುವುದನ್ನು ಕೇಳಲಿಲ್ಲ." ಎಂದು ಆರ್ಥರ್ ಹೇಳಿದರು.
ಇನ್ನು ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಮೊಹಮ್ಮದ್ ರಿಜ್ವಾನ್ ಎದುರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿಗೆ ದೂರು ಸಲ್ಲಿಸಿದೆ.
ಮಿಕ್ಕಿ ಆರ್ಥರ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವರ್ತನೆಗೆ ಪ್ರತಿಕ್ರಿಯೆ ನೀಡಿದ ಭಾರತ ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್ ಕಿಡಿ ಕಾರಿದರು. "ನೀವು ಉತ್ತಮ ಪ್ರದರ್ಶನ ನೀಡಿದರೆ ಜನ ನಿಮ್ಮನ್ನು ಪ್ರಶಂಸೆ ಮಾಡುತ್ತಾರೆ, ಕಳಪೆಯಾಗಿ ಪ್ರದರ್ಶನ ನೀಡಿದರೆ ಟೀಕೆಗೆ ಗುರಿಯಾಗುತ್ತೀರಾ. ನೀವು ಎರಡಕ್ಕೂ ಸಿದ್ಧವಾಗಿರಬೇಕು, ಯಾವಾಗಲೂ ಆಟದ ಬಗ್ಗೆ ಮಾತ್ರ ಗಮನ ನೀಡುವಂತೆ ಎಂಎಸ್ ಧೋನಿ ಹೇಳುತ್ತಿದ್ದರು ಏಕೆಂದರೆ ಒತ್ತಡ ಯಾವಾಗಲೂ ಇರುತ್ತದೆ. ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಭಾರತಕ್ಕೆ ಬರಬೇಡಿ. ವಾಪಸ್ ಹೋಗಿ, ನೀವು ಆ ರೀತಿಯಲ್ಲಿ ಆಡುತ್ತಿರುವಂತೆಯೇ," ಎಂದು ಹೇಳಿದ್ದಾರೆ.
ಪಾಕಿಸ್ತಾನವು ಪ್ರಸ್ತುತ ಹತ್ತು ತಂಡಗಳ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ ಮತ್ತು ಸೋಮವಾರ ಚೆನ್ನೈನ ಚೆಪಾಕ್ನಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಸೋತರೆ ಪಾಕಿಸ್ತಾನದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಲಿದೆ.