
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ಶುಕ್ರವಾರ (ನ.6) ಸನ್ರೈಸರ್ಸ್ ಹೈದ್ರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಗೆದ್ದ ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಟ ನಡೆಸಲಿದ್ದು, ಸೋತ ತಂಡವು ಮನೆ ಸೇರಲಿದೆ.
ಹೀಗಿರುವಾದ ಇಂದಿನ ಪಂದ್ಯದ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್, ಪ್ರಸ್ತುತ ಎಸ್ಆರ್ಹೆಚ್ ತುಂಬಾನೇ ಅಪಾಯಕಾರಿ ತಂಡವಾಗಿದೆ ಎಂದು ಹೇಳಿದ್ದಾರೆ.
ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ವೃದ್ಧಿಮಾನ್ ಸಾಹಾ ಅವರೊಂದಿಗೆ ಡೇವಿಡ್ ವಾರ್ನರ್ ತಮ್ಮ ತಂಡವನ್ನು ಉತ್ತಮವಾಗಿ ಮುನ್ನಡೆಸಿದರು. ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ ಉನ್ನತ ಕ್ರಮಾಂಕಕ್ಕೆ ಬಲ ಒದಗಿಸಿದ್ದಾರೆ. ಇನ್ನೂ ಬೌಲಿಂಗ್ನಲ್ಲಿ ಟಿ ನಟರಾಜನ್, ಖಲೀಲ್ ಅಹ್ಮದ್, ರಶೀದ್ ಖಾನ್ ಮತ್ತು ಜೇಸನ್ ಹೋಲ್ಡರ್ ಪ್ರಮುಖರಾಗಿದ್ದಾರೆ. ಅವರು ಎರಡು ವಿಭಾಗದಲ್ಲಿ ಆಕ್ರಮಣಕಾರಿ ವಿಧಾನ ಅನುಸರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಶ್ರೀಕಾಂತ್ ಹೇಳಿದ್ದಾರೆ.
ಭುವನೇಶ್ವರ್ ಕುಮಾರ್, ಮಿಚೆಲ್ ಮಾರ್ಷ್ರಂತಹ ಆಟಗಾರನನ್ನು ಆರಂಭದಲ್ಲೇ ಕಳೆದುಕೊಂಡರೂ ಅವರು ಪ್ಲೇ ಆಫ್ ತಲುಪಲು ಸಾಕಷ್ಟು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ. ಈ ಸಮಯದಲ್ಲಿ ಎಸ್ಆರ್ಹೆಚ್ ಕಠಿಣ ತಂಡದಂತೆ ಕಾಣುತ್ತಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ನಂಬಿದ್ದಾರೆ.
"ಹೈದರಾಬಾದ್ ಆಕ್ರಮಣಕಾರಿ ಮನೋಧರ್ಮವನ್ನು ಹೊಂದಿದೆ ಎಂಬುದನ್ನು ನಿಸ್ಸಂದೇಹವಾಗಿ ಸಾಬೀತುಪಡಿಸಿದೆ. ಒದು ತುದಿಯಲ್ಲಿ ನೋಡಿದರೆ, ಅವರು ಕಳೆದ ಮೂರು ಪಂದ್ಯಗಳಲ್ಲಿ ಅದ್ಭುತ ಗೆಲುವುಗಳನ್ನು ಪಡೆದಿದ್ದು ಮತ್ತು ಅತ್ಯಂತ ಅಪಾಯಕಾರಿ ತಂಡವಾಗಿ ಗುರುತಿಸಿಕೊಂಡಿದ್ದಾರೆ. ನೆನಪಿಡಿ, ಅಭಿಯಾನದ ಸಮಯದಲ್ಲಿ ಪ್ರಮುಖ ಆಟಗಾರರನ್ನು ಗಾಯದಿಂದಾಗಿ ಕಳೆದುಕೊಂಡರೂ ಅವರು ಈ ಹಂತ ಪ್ರವೇಶಿಸಿದ್ದಾರೆ. ಭುವನೇಶ್ವರ್ ಕುಮಾರ್ ಅವರ ಸೇವೆ ಇಲ್ಲದೆ ಅಗ್ರ-ನಾಲ್ಕನೇ ಸ್ಥಾನ ಗಳಿಸುವುದು ನಿಜಕ್ಕೂ ಶ್ಲಾಘನೀಯ ಸಾಧನೆ "ಎಂದು ಕ್ರಿಸ್ ಶ್ರೀಕಾಂತ್ ಅವರು ಟೈಮ್ಸ್ ಆಫ್ ಇಂಡಿಯಾಕ್ಕಾಗಿ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.
ಎಲಿಮಿನೇಟರ್ನಲ್ಲಿ ಎಸ್ಆರ್ಹೆಚ್ ಆರ್ಸಿಬಿಯನ್ನು ಎದುರಿಸಲಿದೆ. ಸ್ಪರ್ಧೆಯ ವಿಜೇತರು ಐಪಿಎಲ್ 2020 ಫೈನಲ್ನಲ್ಲಿ ಸ್ಥಾನ ಪಡೆಯಲು ಡೆಲ್ಲಿ ಕ್ಯಾಪಿಟಲ್ಸ್ ಎದುರಿಸಲಿದ್ದಾರೆ. ಇಂದಿನ ಪಂದ್ಯವು ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆಯಲಿದೆ.