ಮೇ 26 ಭಾನುವಾರ, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2024ರ ಐಪಿಎಲ್ ಫೈನಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಬಾರಿಗೆ ಚಾಂಪಿಯನ್ ಆಗಿದೆ.
2014ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದಿದ್ದ ಕೆಕೆಆರ್ ಇದೀಗ 10 ವರ್ಷಗಳ ನಂತರ ಐಪಿಎಲ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಹೈದರಾಬಾದ್ ತಂಡವನ್ನು ಕೇವಲ 113 ರನ್ಗಳಿಗೆ ಕೆಕೆಆರ್ ಆಲೌಟ್ ಮಾಡಿತ್ತು. ಹೀಗಾಗಿ ಆರಂಭದಿಂದಲ್ಲೇ ಆಟದ ಮೇಲೆ ಪ್ರಾಬಲ್ಯ ಸಾಧಿಸಿ ಕೇವಲ 10.3 ಓವರ್ಗಳಲ್ಲಿ ಕೆಕೆಆರ್ ಗುರಿ ಮುಟ್ಟಿತ್ತು.

ಐಪಿಎಲ್ 2024ರ ಟೂರ್ನಿ ಆರಂಭದಿಂದಲ್ಲೂ ಕೆಕೆಆರ್ ಅದ್ಭುತ ಆಟವಾಡಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಬಾಗದಲ್ಲೂ ಭರ್ಜರಿ ಪ್ರದರ್ಶನ ನೀಡುವನ ಮೂಲಕ ಕೆಕೆಆರ್ ಅಂಕಪಟ್ಟಿದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ.
ಕಳೆದ ವರ್ಷ ಐಪಿಎಲ್ನಲ್ಲಿ ಕೆಕೆಆರ್ ಆಡಿದ 14 ಪಂದ್ಯಗಳಲ್ಲಿ ಕೇವಲ 6 ರಲ್ಲಿ ಮಾತ್ರ ಗೆದ್ದು, 8 ರಲ್ಲಿ ಸೋತು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿತ್ತು. ಟೂರ್ನಿಯಲ್ಲೂ ಹೇಳಿಕೊಳ್ಳುವಂತ ಪ್ರದರ್ಶನ ಕಂಡು ಬಂದಿರಲಿಲ್ಲ.
ಆದರೆ ಈ ಋತುವಿನ ಐಪಿಎಲ್ನಲ್ಲಿ ಕೆಕೆಆರ್ ಫ್ರಾಂಚೈಸಿ ಮಹತ್ವದ ಹೆಜ್ಜೆಯನ್ನೆಟ್ಟಿತ್ತು. ಕಳೆದು ಎರಡು ಋತುಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಅವರನ್ನು ಮರಳಿ ಕೆಕೆಆರ್ಗೆ ತರಲಾಗಿತ್ತು.
ಮೊದಲಿನಿಂದಲೂ ಕೆಕೆಆರ್ ತಂಡದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಗೌತಮ್ ಗಂಭೀರ್ ಈ ಬಾರಿ ಕೆಕೆಆರ್ ಪಾಳಯದಲ್ಲಿ ಹೊಸ ಅಲೆ ಎಬ್ಬಿಸಿದ್ದರು. ಮಂಕಾಗಿದ್ದ ಕೆಕೆಆರ್ ಆಲ್ರೌಂಡರ್ ಪ್ರದರ್ಶನ ನೀಡುವ ಮೂಲಕ ಟೂರ್ನಿಯಲ್ಲಿ ಬಲಿಷ್ಠ ತಂಡಗಳನ್ನು ಸೋಲಿಸಿ ಅಂಕಪಟ್ಟಿ ಆಗ್ರಸ್ಥಾನಿಯಾಗುವಂತೆ ಮಾಡಿದರು.
ಅಷ್ಟರ ಮಟ್ಟಿಗೆ ಗೌತಮ್ ಗಂಭೀರ್ ಅವರು ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡದಲ್ಲಿ ಬದಲಾವಣೆ ತಂದಿದ್ದರು. ಬಹುಮುಖ್ಯವಾಗಿ ಗೌತಮ್ ಗಂಭೀರ್ ಅವರ ಸಲಹೆ ಮೇರೆಗೆ ಐಪಿಎಲ್ 2024ರ ಹರಾಜಿನಲ್ಲಿ ಬರೋಬ್ಬರಿ 24.74 ಕೋಟಿ ರೂ.ಗಳಿಗೆ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು ಬಿಡ್ ಮಾಡಲಾಗಿತ್ತು.
ಆರಂಭದಲ್ಲಿ ದುಬಾರಿ ಬೌಲಿಂಗ್ ಪ್ರದರ್ಶನ ನೀಡಿದ್ದ ಮಿಚಲ್ ಸ್ಟಾರ್ಕ್ ನಾಕೌಟ್ ಪಂದ್ಯಗಳಲ್ಲಿ ಅದ್ಭುತ ಸ್ಪೆಲ್ಗಳ ಮೂಲಕ ಕೆಕೆಆರ್ ಫೈನಲ್ ತಲುಪಲು ಶ್ರಮವಹಿಸಿದ್ದರು. ಇದಕ್ಕೆ ಅಂದು ಗೌತಮ್ ಗಂಭೀರ್ ತೆಗೆದುಕೊಂಡ ನಿರ್ಧಾರವೇ ಬಹುಮುಖ್ಯ ಕಾರಣ ಎನ್ನಬಹುದು.
ಹೀಗಾಗಿ ಹೈದರಾಬಾದ್ ಎದುರು ಫೈನಲ್ನಲ್ಲಿ ಕೆಕೆಆರ್ ಗೆಲ್ಲುತ್ತಿದ್ದಂತೆ ಮಾಲೀಕ, ನಟ ಶಾರುಖ್ ಖಾನ್ ಕುಣಿದು ಕುಪ್ಪಳಿಸಿದರು. ಜೊತೆಗೆ ಇಡೀ ಕೆಕೆಆರ್ ಸಿಬ್ಬಂದಿ, ಆಟಗಾರರು ದಶಕಗಳ ಬಳಿಕ ಕಪ್ ಗೆದ್ದ ಖುಷಿಗೆ ಮೈದಾನದಲ್ಲಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಕಪ್ ಗೆಲ್ಲಲು ಕಾರಣಕರ್ತನಾದ ಗೌತಮ್ ಗಂಭೀರ್ ಅವರ ಹಣೆಗೆ ಶಾರುಖ್ ಖಾನ್ ಮೈದಾನದಲ್ಲಿ ಮುತ್ತಿಟ್ಟು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ತಂಡದ ಆಟಗಾರರಿಗೂ ಪ್ರೀತಿಯ ಅಪ್ಪುಗೆ ನೀಡಿದ್ದಾರೆ.
ಮತ್ತೊಂದೆಡೆ ಆಟಗಾರರು ಕೂಡ ಗೌತಮ್ ಗಂಭೀರ್ ಅವರನ್ನು ಹೆಗಲ ಮೇಲೆ ಎತ್ತಿಕೊಂಡು ತಮ್ಮ ಮೆಂಟರ್ಗೆ ಗೌರವ ಸೂಚಿಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಕೆಆರ್ ಚಾಂಪಿಯನ್ ಆಗಲು ಗೌತಮ್ ಗಂಭೀರ್ ಸಾಕುಷ್ಟು ಕೊಡುಗೆ ನೀಡಿದ್ದಾರೆ. ಗಂಭೀರ್ 2011 ರಿಂದ 2017 ರವರೆಗೆ ಒಟ್ಟು 7 ಐಪಿಎಲ್ ಆವೃತ್ತಿಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕತ್ವ ವಹಿಸಿ ಮುನ್ನೆಡೆಸಿದ್ದಾರೆ.
ಈ ಅವಧಿಯಲ್ಲಿ ಕೆಕೆಆರ್ 5 ಬಾರಿ ಪ್ಲೇ ಆಫ್ಗೆ ಅರ್ಹತೆ ಪಡೆದುಕೊಂಡಿತ್ತು. ಇದರೊಂದಿಗೆ 2012 ಮತ್ತು 2014ರಲ್ಲಿ ಎರಡು ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.