
ಹೈದರಾಬಾದ್, ಮೇ 7: ಕಳೆದಬಾರಿ ಡೆಲ್ಲಿ ವಿರುದ್ಧ ಗೆದ್ದಿದ್ದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಎದುರು ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮಧ್ಯೆ ಇಂದು ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಐಪಿಎಲ್ 39 ಹಣಾಹಣಿ ನಡೆಯಲಿದೆ.
ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಬಲಾಡ್ಯ ಹೈದರಾಬಾದ್ ಗೆ ಪಟ್ಟಿಯಲ್ಲಿ ಕೆಳಗಿನ ತಂಡಗಳಿಗಿಂತ ಅಂಕದ ಅಂತರ ಕಾಯ್ದುಕೊಳ್ಳುವ ತವಕವಾದರೆ 6ನೇ ಸ್ಥಾನದಲ್ಲಿರುವ ಬೆಂಗಳೂರಿಗೆ ಇಂದಿನ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ.
ಈ ಐಪಿಎಲ್ ನಲ್ಲಿ ಆರಂಭದಿಂದಲೂ ಬೆಂಗಳೂರು ಎಡವುತ್ತಲೇ ಬಂದು ಅಭಿಮಾನಿಗಳಿಂದ ಹಾಸ್ಯಕ್ಕೀಡಾಗುತ್ತಲೇ ಬಂದಿತ್ತು. 'ಈ ಸಲ ಕಪ್ ನಮ್ದೇ' ಅಂತ ಹೊಸ ಕ್ರಾಂತಿಗೀತೆ ಶುರು ಮಾಡಿದ್ದ ಬೆಂಗಳೂರು ಅಭಿಮಾನಿಗಳು ಆರ್ಸಿಬಿ ಸೋಲಿನಿಂದ ಬೇಸತ್ತು ಗೀತೆಯನ್ನು 'ಮುಂದಿನ ಸಲ ಕಪ್ ನಮ್ದೇ' ಎಂದು ಬದಲಾಯಿಸಿಕೊಂಡಿದ್ದಾರೆ.
ಅತ್ತ ಅನುಷ್ಕಾ, ವಿರಾಟ್ ಜೋಡಿಯೂ ಸಿಕ್ಕಪಟ್ಟೆ ಟ್ರೋಲ್ ಗೀಡಾಗುತ್ತಿದ್ದಾರೆ. ಈ ಎಲ್ಲವುಗಳ ಮಧ್ಯೆ ರಾಯಲ್ ಚಾಲೆಂಜರ್ಸ್ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಇಕ್ಕಟ್ಟಿನಲ್ಲಿದೆ.
ಟಾಸ್ ಈಗಾಗಲೇ ಮುಗಿದಿದೆ. ಟಾಸ್ ಗೆದ್ದಿರುವ ಬೆಂಗಳೂರು ಫೀಲ್ಡಿಂಗ್ ಆಯ್ದುಕೊಂಡಿದೆ.
ಹಾಗೆ ನೋಡಿದರೆ ಆರ್ಸಿಬಿ ಗೆಲ್ಲುವ ನೆಚ್ಚಿನ ತಂಡವೇ. ಆದರೆ ಆಟಗಾರರ ಬೇಜಾವಾಬ್ದಾರಿಯ ಆಟದಿಂದಾಗಿ ಹಿಂದಿನ ಹೆಚ್ಚಿನ ಪಂದ್ಯಗಳಲ್ಲೆಲ್ಲಾ ಆರ್ಸಿಬಿ ಸೋಲುತ್ತಾ ಬಂದಿತ್ತು. ಇಂದಿನ ಪಂದ್ಯದಲ್ಲಿ ಕೊಹ್ಲಿ, ಡಿವಿಲಿಯರ್ಸ, ಚಾಹಲ್, ಪಾರ್ಥಿವ್ ಪಟೇಲ್ ತಿರುಗಿಬಿದ್ದರೆ ಆರ್ಸಿಬಿಯನ್ನು ಗೆಲ್ಲಿಸಬಲ್ಲರು.
ಆದರೆ ಬಲಾಡ್ಯ ಹೈದರಾಬಾದ್ ತಂಡವೂ ಪ್ರಬಲ ಪೈಪೋಟಿ ಒಡ್ಡುವ ಎಲ್ಲಾ ಸಾಧ್ಯತೆಗಳಿವೆ. ಅಂತೂ ಇಂದಿನ ಪಂದ್ಯ ಕುತೂಹಲ ಕೆರಳಿಸಿದೆ. ಹೈದರಾಬಾದ್ ನಲ್ಲಾದ್ರೂ ಬೆಂಗಳೂರು ಗೆಲ್ಲುತ್ತಾ ಕಾದು ನೋಡಬೇಕಿದೆ.