
ಚೆನ್ನೈ: ಶ್ರೀಲಂಕಾ ಕ್ರಿಕೆಟ್ ದಂತಕತೆ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರು ಚೆನ್ನೈಯಲ್ಲಿರುವ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಮುರಳೀಧರನ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಹೃದಯದ ಸಮಸ್ಯೆ ಇರುವುದರಿಂದ ಮುತ್ತಯ್ಯ ಮುರಳೀಧರನ್ ಅವರು ಆ್ಯಂಜಿಯೋಪ್ಲ್ಯಾಸ್ಟಿ ಪ್ರಕ್ರಿಯೆಗಾಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಲ್ಲಿ ತಿಳಿದು ಬಂದಿದೆ. ಸನ್ ರೈಸರ್ಸ್ ಹೈದರಾಬಾದ್ ಕೋಚಿಂಗ್ ಸಿಬ್ಬಂದಿ ಬಳಗದಲ್ಲಿರುವ ಮುರಳೀಧರನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಭಾಗವಾಗಿದ್ದರು.
ಏಪ್ರಿಲ್ 17ಕ್ಕಷ್ಟೇ ಮುರಳೀಧರನ್ 49ನೇ ಹರೆಯಕ್ಕೆ ಕಾಲಿರಿಸಿದ್ದರು. ಹುಟ್ಟುಹಬ್ಬರ ಮರುದಿನವೇ ಮುರಳೀಧರನ್ ಆಸ್ಪತ್ರೆಗೆ ದಾಖಲಾಗುವಂತಾಗಿದ್ದು ದುರದೃಷ್ಟಕರ. ಮುರಳೀಧರನ್ ಹೆಸರಿನಲ್ಲಿ ಈಗಲೂ ಬಹಳಷ್ಟು ದಾಖಲೆಗಳಿವೆ.
133 ಟೆಸ್ಟ್ ಪಂದ್ಯಗಳಲ್ಲಿ 800 ವಿಕೆಟ್, 350 ಏಕದಿನ ಪಂದ್ಯಗಳಲ್ಲಿ 534 ವಿಕೆಟ್, 12 ಟಿ20ಐ ಪಂದ್ಯಗಳಲ್ಲಿ 13 ವಿಕೆಟ್ ಮತ್ತು 66 ಐಪಿಎಲ್ ಪಂದ್ಯಗಳಲ್ಲಿ 63 ವಿಕೆಟ್ ದಾಖಲೆ ಮುರಳೀಧರನ್ ಹೊಂದಿದ್ದಾರೆ.