ವಾರಣಾಸಿ, ಮಾರ್ಚ್ 09: ಕ್ರಿಕೆಟ್ ದಿಗ್ಗಜ ಸ್ಟೀವ್ ವಾ ಅವರು ವಿಶ್ವದ ಪುರಾತನ ನಗರಿ ವಾರಣಾಸಿಗೆ ಇತ್ತೀಚೆಗೆ ಭೇಟಿ ನೀಡಿದ್ದರು. ತಮ್ಮ ಗೆಳೆಯನೊಬ್ಬನ ಅಸ್ತಿಯನ್ನು ಪವಿತ್ರಾ ಗಂಗಾ ನದಿಯಲ್ಲಿ ವಿಸರ್ಜಿಸಿ, ಆತನ ಕೊನೆಯಾಸೆ ತೀರಿಸಿದ್ದಾರೆ.
ಚುನಾವಣೆಯ ಭರಾಟೆಯಲ್ಲಿ ಮುಳುಗಿರುವ ವಿಶ್ವದ ಪುರಾತನ ನಗರಿಯಲ್ಲಿ ಕ್ರಿಕೆಟ್ ದಿಗ್ಗಜ ಸ್ಟೀವ್ ವಾ ಸಂಚರಿಸಿ ತಮ್ಮ ಬಹುದಿನದ ಆಸೆಯನ್ನು ತೀರಿಸಿಕೊಂಡಿದ್ದಾರೆ. ವಾರಣಾಸಿಯ ಮಣಿಕರ್ನಿಕಾ ಘಾಟ್ ಗೆ ಭೇಟಿ ನೀಡಿದ ಸ್ಟೀವ್ ವಾ ಅವರೊಂದಿಗೆ ಅವರ ಇನ್ನೊಬ್ಬ ಸ್ನೇಹಿತ ಜಾನ್ಸನ್ ಕೂಡ ಆಗಮಿಸಿದ್ದರು.

ಸ್ಟೀವ್ ಅವರು ಗೈಡ್ ಒಬ್ಬರ ನೆರವು ಪಡೆದು ಬೋಟ್ ಮುಖಾಂತರ ಮಣಿಕರ್ನಿಕಾ ಘಾಟ್ ತಲುಪಿ ಅಲ್ಲಿ ಅಸ್ತಿ ವಿಸರ್ಜಿಸಿದರು. ಇಡೀ ಪ್ರಕ್ರಿಯೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದರು. ಘಾಟ್ ನಲ್ಲಿ ಸ್ವಲ್ಪ ಕಾಲ ಕುಳಿತಿದ್ದು ನಂತರ ತೆರಳಿದರು.

ವಾರಣಾಸಿ ಭೇಟಿ ಬಗ್ಗೆ ಮಾತನಾಡಿದ ಸ್ಟೀವ್, ನನ್ನ ಗೆಳೆಯ ರುಡ್ ಇಸ್ಕಾನ್ ಅನುಯಾಯಿಯಾಗಿದ್ದ, ಆತನ ಕೊನೆಯಾಸೆಯಂತೆ ಗಂಗಾ ನದಿಯಲ್ಲಿ ಆತನ ಅಸ್ತಿಯನ್ನು ವಿಸರ್ಜಿಸಿದೆ. ಈ ಪುರಾತನ ನಗರಕ್ಕೆ ಭೇಟಿ ನೀಡಿರುವುದು ನನಗೆ ಸಂತೋಷ ತಂದಿದೆ ಎಂದರು.