ಮೈಸೂರು, ನವೆಂಬರ್ 27: ಮುಂಬೈ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡ ಕರ್ನಾಟಕ ತಂಡ ಈಗ ಮೈಸೂರಿನಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ.
ಬುಧವಾರ(ನವೆಂಬರ್ 28)ದಿಂದ ಆರಂಭವಾಗಲಿರುವ ಪಂದ್ಯಾವಳಿಗೆ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿಯನ್ನು ಆಯ್ಕೆ ಮಾಡಲಾಗಿಲ್ಲ. ಪ್ರಸಕ್ತ ಋತುವಿನ ರಣಜಿ ಟೂರ್ನಮೆಂಟ್ ನಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲೂ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ತಲಾ 3 ಅಂಕಗಳನ್ನು ಗಳಿಸಿ ಎಲೈಟ್ ಎ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ.
ಮೈಸೂರಿನಲ್ಲಿ ನವೆಂಬರ್ 28ರಿಂದ ರಣಜಿ ಕ್ರಿಕೆಟ್ ಹವಾ ಶುರು
ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿರುದ್ಧದ ಪಂದ್ಯಕ್ಕೆ ಸ್ಟುವರ್ಟ್ ಬಿನ್ನಿ ಬದಲಿಗೆ 19 ವರ್ಷ ವಯಸ್ಸಿನ ಭಾರತ ತಂಡದ ಆಟಗಾರ ದೇವದತ್ತ ಪಡಿಕ್ಕಲ್ ಅವರಿಗೆ ಅವಕಾಶ ಸಿಕ್ಕಿದೆ. ಮುಂಬೈ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ನಾಯಕ ವಿನಯ್ ಕುಮಾರ್ ಅವರು ಈ ಪಂದ್ಯ ಆಗಮಿಸಿದ್ದಾರೆ. ಕೆಎಲ್ ರಾಹುಲ್, ಮನೀಶ್ ಪಾಂಡೆ, ಕೆ ಗೌತಮ್ ಹಾಗೂ ಮಾಯಾಂಕ್ ಅಗರವಾಲ್ ಅವರು ಭಾರತ ಹಾಗೂ ಭಾರತ 'ಎ' ಪರ ಆಡಲು ಆಯ್ಕೆಯಾಗಿದ್ದಾರೆ.
ಕರ್ನಾಟಕ ತಂಡ: ವಿನಯ್ ಕುಮಾರ್ (ನಾಯಕ), ಡಿ. ನಿಶ್ಚಲ್, ಶ್ರೇಯಸ್ ಗೋಪಾಲ್ (ಉಪ ನಾಯಕ), ಪವನ್ ದೇಶಪಾಂಡೆ, ಸಿದ್ಧಾರ್ಥ್ ಕೆವಿ, ದೇವದತ್ತ ಪಡಿಕ್ಕಲ್, ಮಿಥುನ್, ಪ್ರಸಿದ್ಧ ಕೃಷ್ಣ, ಜೆ. ಸುಚಿತ್, ರೋನಿತ್ ಮೋರೆ, ಶಿಶಿರ್ ಭವಾನಿ, ಬಿಆರ್ ಶರತ್ (ವಿಕೆಟ್ ಕೀಪರ್), ಶರತ್ ಶ್ರೀನಿವಾಸ್(ವಿಕೆಟ್ ಕೀಪರ್), ಮಿರ್ ಕೌನೇನ್ ಅಬ್ಬಾಸ್, ಲಿಯಾನ್ ಖಾನ್, ಅಭಿಷೇಕ್ ರೆಡ್ಡಿ