
ದುಬೈ, ಏಪ್ರಿಲ್ 26: ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ಗೆ ಪ್ರಕಟಿಸಲಾದ 22 ಮಂದಿ ಅಧಿಕಾರಿಗಳ ಪಟ್ಟಿಯಲ್ಲಿ ಸುಂದರಂ ರವಿ ಭಾರತದ ಏಕೈಕ ಅಂಪೈರ್ ಆಗಿ ಗುರುತಿಸಿಕೊಂಡಿದ್ದಾರೆ.
ಐಸಿಸಿ ಎಲೈಟ್ ಪ್ಯಾನೆಲ್ನಲ್ಲಿ ಭಾರತವನ್ನು ಪ್ರತಿನಿಧಿಸಉತ್ತಿರುವ ಏಕೈಕ ವ್ಯಕ್ತಿ ಆಗಿರುವ ಸುಂದರಂ ರವಿ, ಈವರೆಗೆ 33 ಟೆಸ್ಟ್, 42 ಒಡಿಐ ಮತ್ತು 18 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇನ್ನು ಐಸಿಸಿ ಬಿಡುಗಡೆ ಮಾಡಿರುವ 22 ಮಂದಿ ಅಧಿಕಾರಿಗಳಲ್ಲಿ 16 ಅಂಫೈರ್ಸ್ ಮತ್ತು 6 ಮಂದಿ ಮ್ಯಾಚ್ ರೆಫ್ರಿಗಳಿದ್ದಾರೆ.
53 ವರ್ಷದ ಅನುಭವಿ ಅಂಪೈರ್ ಇತ್ತೀಚೆಗಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬಯಿ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಕಳಪೆ ನಿರ್ಧಾರದ ಮೂಲಕ ಟೀಮ್ ಇಂಡಿಯಾ ನಾಯಕ ಮತ್ತು ಆರ್ಸಿಬಿ ತಂಡದ ಮುಂದಾಳು ವಿರಾಟ್ ಕೊಹ್ಲಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು.
ಪಂದ್ಯದ ಕೊನೆಯ ಎಸೆತದಲ್ಲಿ ಆರ್ಸಿಬಿಗೆ 7 ರನ್ಗಳ ಅಗತ್ಯವಿದ್ದಾಗ ಬೌಲರ್ ಲಸಿತ್ ಮಾಲಿಂಗ್ ನೋ ಬಾಲ್ ಎಸೆದಿರುವುದನ್ನು ರವಿ ಗಮನಿಸದೇ ಹೋಗಿದ್ದರು. ಟೆಲಿವಿಷನ್ ರೀಪ್ಲೇಯಲ್ಲಿ ಮಾಲಿಂಗ ನೋಬಾಲ್ ಎಸೆದಿರುವುದು ಪತ್ತೆಯಾಗಿತ್ತು. ಮುಂಬಯಿ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡ ಅಂಪೈರ್ಗಳ ಗುಣಮಟ್ಟದ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ವಿಶ್ವಕಪ್ಗೆ ಐಸಿಸಿ ಅಧಿಕಾರಿಗಳ ವಿವರ ಇಂತಿದೆ
ಮ್ಯಾಚ್ ರೆಫ್ರಿಗಳು: ಕ್ರಿಸ್ ಬ್ರಾಡ್, ಡೇವಿಡ್ ಬೂನ್, ಆಂಡಿ ಪೈಕ್ರಾಫ್ಟ್, ಜೆಫ್ ಕ್ರೋವ್, ರಂಜನ್ ಮಧುಗಲೆ, ರಿಚಿ ರಿಚರ್ಡ್ಸನ್.
ಅಂಪೈರ್ಗಳು: ಅಲೀಮ್ ದಾರ್, ಕುಮಾರ ಧರ್ಮಸೇನಾ, ಮರಾಯಿಸ್ ಎರಾಸ್ಮಸ್, ಕ್ರಿಸ್ ಗ್ಯಾಫನಿ, ಇಯಾನ್ ಗೌಲ್ಡ್, ರಿಚರ್ಡ್ ಇಲ್ಲಿಂಗ್ವರ್ಥ್, ರಿಚರ್ಡ್ ಕೆಟಲ್ಬೋರ್ಗ್,ನಿಗೆಲ್ ಲಾಂಗ್, ಬ್ರೂಸ್ ಆಕ್ಸೆನ್ಫೋರ್ಡ್, ಸುಂದರಂ ರವಿ, ಪೌಲ್ ರೀಫೆಲ್, ರಾಡ್ ಟಕರ್, ಜೋಯೆಲ್ ವಿಲ್ಸನ್, ಮೈಕಲ್ ಗೌ, ರುಚಿರ ಪಲ್ಲಿಯಾಗುರುಗೆ, ಪೌಲ್ ವಿಲ್ಸನ್.