
ಟೀಮ್ ಇಂಡಿಯಾದ ಅನುಭವಿ ಆಟಗಾರ ಶಿಖರ್ ಧವನ್ ಅವರ ಭಾರತ ಟಿ20 ತಂಡದಲ್ಲಿ ಆಡುವ ಕನಸುಗಳಿಗೆ ಪರದೆ ಎಳೆಯಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಕೆಲವೇ ತಿಂಗಳುಗಳಿರುವಾಗ ಅವರು ವಿಶ್ವಕಪ್ನಲ್ಲಿ ಭಾಗಿಯಾಗುವ ಸಾಧ್ಯತೆಯಿದ್ದಿದ್ದರೆ ಈಗಾಗಲೇ ಭಾರತೀಯ ತಂಡದಲ್ಲಿ ಅವರಿಗೆ ಸ್ಥಾನ ದೊರೆಯುತ್ತಿತ್ತು ಎಂದಿದ್ದಾರೆ ಸುನಿಲ್ ಗವಾಸ್ಕರ್.
"ಆತನ ಹೆಸರೂ ಎಲ್ಲೂ ಕೇಳಿ ಬರುತ್ತಿಲ್ಲ. ಮುಂದಿನ ವಿಶ್ವಕಪ್ನ ತಂಡದಲ್ಲಿ ಆತ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿದ್ದರೆ ಈ ಸರಣಿಗೆ ಅವರು ಆಯ್ಕೆಯಾಗಬೇಕಾಗಿತ್ತು. ಸಾಕಷ್ಟು ಅನುಭವಿ ಆಟಗಾರರು ಇಂಗ್ಲೆಂಡ್ಗೆ ತೆರಳಿದ್ದಾರೆ. ಹಾಗಾಗಿ ಆತನಿಗೆ ಈ ತಂಡದಲ್ಲಿ ಅವಕಾಶ ದೊರೆಯಬೇಕಾಗಿತ್ತು. ಆತ ಐರ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಇಲ್ಲ ಎಂದಾದರೆ ಟಿ20 ವಿಶ್ವಕಪ್ನಲ್ಲಿ ಖಂಡಿತಾ ಸ್ಥಾನ ಪಡೆಯುವುದಿಲ್ಲ" ಎಂದಿದ್ದಾರೆ ಸುನಿಲ್ ಗವಾಸ್ಕರ್.
ಐಪಿಎಲ್ನಲ್ಲಿ ಧವನ್ ಉತ್ತಮ ಪ್ರದರ್ಶನ: ಇನ್ನು ಶಿಖರ ಧವನ್ ಐಪಿಎಲ್ನಲ್ಲಿ ಈ ಬಾರಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡಿರುವ ಶಿಖರ ಧವನ್ ಆರಂಭಿಕನಾಗಿ ಮತ್ತೊಂದು ಆವೃತ್ತಿಯಲ್ಲಿಯೂ ಮಿಂಚಿದ್ದಾರೆ. ಐಪಿಎಲ್ನಲ್ಲಿ ಪ್ರತಿ ಆವೃತ್ತಿಯಲ್ಲಿಯೂ ಸ್ಥಿರ ಪ್ರದರ್ಶನ ನೀಡಿಕೊಂಡು ಬರುತ್ತಿದ್ದಾರೆ.
ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಪರವಾಗಿ ಅಗ್ರ ಮೂರು ಕ್ರಮಾಂಕದಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಕಣಕ್ಕಿಳಿದಿದ್ದರು. ಆದರೆ ಈ ಟೂರ್ನಿಯಲ್ಲಿ ಭಾರತ ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಹಿನ್ನಲೆಯಲ್ಲಿ ಈ ಅನುಭವಿ ಆಟಗಾರರ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳು ಎದುರಾದವು. ಹಾಗಿದ್ದರೂ ಭಾರತ ತಂಡ ಈ ಬಾರಿಯ ವಿಶ್ವಕಪ್ನಲ್ಲಿಯೂ ಇದೇ ಆಟಗಾರರು ಅಗ್ರ ಮೂರ ಕ್ರಮಾಂಕದಲ್ಲಿ ಆಡುವುದನ್ನು ನೋಡಲು ಬಯಸುವುದಾಗಿ ಹೇಳಿದ್ದಾರೆ. ಈ ಆಟಗಾರರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಲಾಗುತ್ತಿದೆ ಎಂದಿದ್ದಾರೆ ಸುನಿಲ್ ಗವಾಸ್ಕರ್.
ಆರಂಭಿಕರಾಗಿ ಇವರೆ ಉತ್ತಮ ಎಂದ ಗವಾಸ್ಕರ್: ಇನ್ನು ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ತಂಡಲ್ಲಿ ಆರಂಭಿಕ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಕಂಡುಬರುತ್ತಿದೆ. ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಜೊತೆಗೆ ಯುವ ಆಟಗಾರ ಇಶಾನ್ ಕಿಶನ್ ಸತತವಾಗಿ ಅದ್ಭುತ ಪ್ರದರ್ಶನ ನಿಡಿ ಗಮನಸೆಳೆದಿದ್ದು ತಾನು ಕೂಡ ಆರಂಭಿಕ ಸ್ಥಾನಕ್ಕೆ ಆಕಾಂಕ್ಷಿ ಎಂಬುದನ್ನು ಬಲವಾಗಿ ಸಾಬಿತುಪಡಿಸಿದ್ದಾರೆ. ಅಲ್ಲದೆ ಋತುರಾಜ್ ಗಾಯಕ್ವಾಡ್ ಕೂಡ ಸ್ಪರ್ಧೆಯಲ್ಲಿದ್ದಾರೆ. ಆದರೆ ಆರಂಬಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅವರೇ ಆರಂಭಿಕ ಸ್ಥಾನಕ್ಕೆ ಸೂಕ್ತ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಯುವ ತಂಡದೊಂದಿಗೆ ಐರ್ಲೆಂಡ್ ಪ್ರವಾಸಕ್ಕೆ ಭಾರತ ಸಜ್ಜು: ಈ ಮಧ್ಯೆ ಭಾರತ ತಂಡ ಟಿ20 ಸರಣಿಯನ್ನಾಡಲು ಐರ್ಲೆಂಡ್ ಪ್ರವಾಸಕ್ಕೆ ಸಂಪೂರ್ಣ ಸಜ್ಜಾಗಿದೆ. ಜೂನ್ 26 ಹಾಗೂ ಜೂನ್ 28ರಂದು ಈ ಸರಣಿಯ ಎರಡು ಪಂದ್ಯಗಳು ಆಯೋಜನೆಯಾಗಲಿದೆ. ಹಾರ್ದಿಕ್ ಪಾಂಡ್ಯ ಈ ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ಐರ್ಲೆಂಡ್ಗೆತೆರಳುವ ಭಾರತ ತಂಡ ಹೀಗಿದೆ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆರ್. ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್.