ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿಯೂ ಸೋಲು ಅನುಭವಿಸಿದ ಬಳಿಕ ಟೀಮ್ ಇಂಡಿಯಾ ನಾಯಕತ್ವ ಬದಲಾವನೆ ಬಗ್ಗೆ ಮತ್ತೆ ಚರ್ಚೆಗಳು ನಡೆಯುತ್ತಿವೆ. ಏಕದಿನ ವಿಶ್ವಕಪ್ ರೋಹಿತ್ ಶರ್ಮಾಗೆ ಕೊನೆಯ ಅವಕಾಶ ಎಂಬ ಅಭಿಪ್ರಾಯಗಳು ಕುಡ ವ್ಯಕ್ತವಾಗುತ್ತಿದ್ದು ಭವಿಷ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವವು ಯಾರು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಟೀಮ್ ಇಂಡಿಯಾದ ನಾಯಕತ್ವಕ್ಕೆ ಇಬ್ಬರು ಆಟಗಾರರ ಹೆಸರನ್ನು ಸೂಚಿಸಿದ್ದಾರೆ.
ವಿರಾಟ್ ಕೊಹ್ಲಿ ಮೂರು ಮಾದರಿಯಿಂದೂ ನಾಯಕತ್ವದಿಂದ ಕೆಳಗಿಳಿದ ಬಳಿಕ ಟೀಮ್ ಇಂಡಿಯಾ ನಾಯಕತ್ವದ ಜವಾಬ್ಧಾರಿ ರೋಹಿತ್ ಶರ್ಮಾ ಹೆಗಲಿಗೆ ಬಿತ್ತು. ರೋಹಿತ್ ಶರ್ಮಾ ನಾಯಕತ್ವದಲ್ಲಿಯೂ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಐಸಿಸಿ ಟ್ರೋಫಿ ಗೆಲ್ಲುವ ಕನಸು ನನಸಾಗಿಲ್ಲ. ಈ ಮಧ್ಯೆ ರೋಹಿತ್ ಶರ್ಮಾ ವಯಸ್ಸು ಈಗಾಗಲೇ 36 ವರ್ಷ ದಾಟಿದ್ದು ಟೆಸ್ಟ್ ಮಾದರಿಯಲ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ನಾಯಕನನ್ನು ರೂಪಿಸುವ ಜವಾಬ್ಧಾರಿ ಮ್ಯಾನೇಜ್ಮೆಂಟ್ ಮುಂದಿದೆ.

ಇನ್ನು ಈ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾದ ಯುವ ಆಟಗಾರ ಶುಬ್ಮನ್ ಗಿಲ್ ಹಾಗೂ ಅಕ್ಷರ್ ಪಟೇಲ್ ಅವರನ್ನು ಟೀಮ್ ಇಂಡಿಯಾದ ಭವಿಷ್ಯದ ನಾಯಕರಾಗಬಲ್ಲ ಆಟಗಾರರು ಎಂದು ಹೆಸರಿಸಿದ್ದಾರೆ. ಶುಬ್ಮನ್ ಗಿಲ್ ಎಲ್ಲಾ ಮಾದರಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದ್ದು ಆರಂಭಿಕನಾಗಿ ಉತ್ತಮ ಯಶಸ್ಸು ಸಾಧಿಸಿದ್ದಾರೆ. ಇನ್ನು ಅಕ್ಷರ್ ಪಟೇಲ್ ಕೂಡ ಇತ್ತೀಚಿನ ದಿನಗಳಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುತ್ತಾ ಗಮನಸೆಳೆದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗೆ ಟೀಮ್ ಇಂಡಿಯಾ ತಂಡವನ್ನು ಹೆಸರಿಸಿದ ಬಳಿಕ ಸುನಿಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದು ಶುಬ್ಮನ್ ಗಿಲ್ ಅಥವಾ ಅಕ್ಷರ್ ಪಟೇಲ್ ಅವರನ್ನು ಆಯ್ಕೆಗಾರರು ತಂಡದ ಉಪನಾಯಕನನ್ನಾಗಿ ಹೆಸರಿಸಬೇಕು. ಈ ಮೂಲಕ ಅವರನ್ನು ಕೂಡ ಚಿಂತಿಸುವಂತೆ ಮಾಡಬೇಕು ಎಂದಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಇಶಾನ್ ಕಿಶನ್ ಹೆಸರನ್ನು ಕೂಡ ಗವಾಸ್ಕರ್ ಹೆಸರಿಸಿದ್ದು ತಂಡದಲ್ಲಿ ಸ್ಥಾವನ್ನು ಭದ್ರಪಡಿಸಿಕೊಂಡರೆ ಕಿಶನ್ ಕೂಡ ನಾಯಕತ್ವಕ್ಕೆ ಸಮರ್ಥನಾಗಬಲ್ಲ ಆಟಗಾರ ಎಂದಿದ್ದಾರೆ.
"ಟೀಮ್ ಇಂಡಿಯಾ ನಾಯಕತ್ವಕ್ಕೆ ಶುಬ್ಮನ್ ಗಿಲ್ ಅಥವಾ ಅಕ್ಷರ್ ಪಟೇಲ್ ಉತ್ತಮ ಆಯ್ಕೆಯಾಗಬಲ್ಲ ಆಟಗಾರರು. ಅಕ್ಷರ್ ಯಾಕೆಂದರೆ ಆತ ಪ್ರತಿ ಪಂದ್ಯದಿಂದ ಪಂದ್ಯಕ್ಕೆ ಉತ್ತಮವಾಗುತ್ತಸಾ ಸಾಗುತ್ತಿದ್ದಾರೆ. ಅವರಿಗೆ ಉಪನಾಯಕತ್ವದ ಜವಾಬ್ಧಾರಿ ನೀಡಿ ಅವರು ಕೂಡ ಯೋಚಿಸುವಂತೆ ಮಾಡಲಿ. ನನ್ನ ಪ್ರಕಾರ ಇವರಿಬ್ಬರು ಭವಿಷ್ಯದ ನಾಯಕತ್ವಕ್ಕೆ ಅಭ್ಯರ್ಥಿಗಳು" ಎಂದಿದ್ದಾರೆ ಗವಾಸ್ಕರ್.
ಮುಂದುವರಿದು ಅವರು ವೆಸ್ಟ್ ಇಂಡೀಸ್ ವಿರುದ್ಧದ ಪ್ರವಾಸಕ್ಕೆ ಅಜಿಂಕ್ಯಾ ರಹಾನೆ ಬದಲಿಗ ಯುವ ಆಟಗಾರಿಗೆ ಆ ಅವಕಾಶವನ್ನು ನೀಡಬಹುದಾಗಿತ್ತು ಎಂದಿದ್ದಾರೆ. "ಅಜಿಂಕ್ಯಾ ರಹಾನೆಯನ್ನು ಉಪನಾಯಕನನ್ನಾಗಿ ಹೆಸರಿಸಿರುವುದರಲ್ಲಿ ತಪ್ಪೇನಿಲ್ಲ. ಆದರೆ ಯುವ ಆಟಗಾರರನ್ನು ನಾಯಕನಾಗಿ ಬೆಳೆಸುವ ಒಂದು ಅವಕಾಶವನ್ನು ಕಳೆದುಕೊಂಡಂತಾಗುತ್ತದೆ. ಕನಿಷ್ಠ ಪಕ್ಷ ಯುವ ಆಟಗಾರರಲ್ಲಿ ಈ ವಿಚಾರವಾಗಿ ಮನದಟ್ಟನ್ನಾದರೂ ಮಾಡಿ" ಎಂದಿದ್ದಾರೆ ಸುನಿಲ್ ಗವಾಸ್ಕರ್.