
ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಮುಗ್ಗರಿಸಿ ಬರಿಗೈನಲ್ಲಿ ಟೂರ್ನಿಯಿಂದ ಹೊರನಡೆದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಓಪನಿಂಗ್ ಬಂದು ಕೇವಲ ಆರು ರನ್ಗೆ ಇನ್ನಿಂಗ್ಸ್ ಮುಗಿಸಿದ್ರು. ಟೂರ್ನಿಯಲ್ಲಿ ಆರ್ಸಿಬಿ ಪರ ಅತಿ ಹೆಚ್ಚು ರನ್ ಕಲೆಹಾಕಿರುವ ದೇವದತ್ ಪಡಿಕ್ಕಲ್ ಕೂಡ ಬಹುಮುಖ್ಯವಾದ ಪಂದ್ಯದಲ್ಲಿ ತಂಡಕ್ಕೆ ಆಧಾರವಾಗಲಿಲ್ಲ ಕೇವಲ ಒಂದು ರನ್ಗೆ ಪೆವಿಲಿಯನ್ ಸೇರಿಕೊಂಡ್ರು. ಆ್ಯರೋನ್ ಫಿಂಚ್ ಆಟವು 32 ರನ್ಗಳಿಗೆ ಮುಕ್ತಾಯವಾಯಿತು.
ಫಿಂಚ್ ಔಟಾದ ಬಳಿಕ ಕಣಕ್ಕಿಳಿದ ಮೋಯಿನ್ ಅಲಿ ಇನ್ನೇನು ರನ್ಗಳಿಸಬಹುದು ಅನ್ನೋದನ್ನು ಯೋಚಿಸುವ ಮೊದಲೇ ವಿಕೆಟ್ ಒಪ್ಪಿಸಿದ್ರು. ಶಬಾಜ್ ನದೀಮ್ ಓವರ್ನಲ್ಲಿ ಫ್ರೀ ಹಿಟ್ನಲ್ಲಿ ಮೋಹಿನ್ ಅಲಿ ರನ್ಔಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ರು. ಸಿಂಗಲ್ಸ್ ಕದಿಯಲು ಹೋಗಿ ರಶೀದ್ ಖಾನ್ ಚುರುಕು ಫೀಲ್ಡಿಂಗ್ಗೆ ಬಲಿಯಾದ್ರು.
ಆರ್ಸಿಬಿ ಪರ ಏಕಾಂಗಿಯಾಗಿ ಹೋರಾಟ ನಡೆಸಿದ ಎಬಿಡಿ ವಿಲಿಯರ್ಸ್ ಕೊನೆಯ ಎರಡು ಓವರ್ ಇರುವಂತೆ 56ರನ್ಗೆ ಔಟಾಗಿದ್ದು ತಂಡಕ್ಕೆ ನುಂಗಲಾರದ ತುತ್ತಾಯಿತು. ಹೈದ್ರಾಬಾದ್ ಪರ ಬೊಂಬಾಟ್ ಬೌಲಿಂಗ್ ಮಾಡಿದ ಜೇಸನ್ ಹೋಲ್ಡರ್ ಮೂರು ವಿಕೆಟ್ ಪಡೆದು ಮಿಂಚಿದ್ರು. ಅಂತಿಮವಾಗಿ ನಿಗದಿತ 20 ಓವರ್ಗಳಲ್ಲಿ ಆರ್ಸಿಬಿ ಏಳು ವಿಕೆಟ್ ನಷ್ಟಕ್ಕೆ 131ರನ್ ಕಲೆಹಾಕಿತು.
132ರನ್ ಗುರಿ ಬೆನ್ನತ್ತಿದ ಎಸ್ಆರ್ಹೆಚ್ ಕೂಡ ಮೊದಲ ಓವರ್ನಲ್ಲೇ ಗೋಸ್ವಾಮಿ ವಿಕೆಟ್ ಕಳೆದುಕೊಂಡಿತು. ಡೇವಿಡ್ ವಾರ್ನರ್ ಕೂಡ 17ರನ್ಗೆ ಸಿರಾಜ್ಗೆ ಔಟಾದ್ರು. ಮನೀಶ್ ಪಾಂಡೆ ಆಟ 24ರನ್ಗೆ ಮುಕ್ತಾಯವಾಯಿತು. ಆದರೆ ತನ್ನ ತಾಳ್ಮೆಯ ಆಟದೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟ ಕೇನ್ ವಿಲಿಯಮ್ಸನ್ ಅಜೇಯ 50 ರನ್ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ವಿಲಿಯಮ್ಸನ್ಗೆ ಸಾಥ್ ಕೊಟ್ಟ ಜೇಸನ್ ಹೋಲ್ಡರ್ 24ರನ್ಗಳಿಸಿ ಬ್ಯಾಟಿಂಗ್ನಲ್ಲೂ ತಂಡಕ್ಕೆ ಆಧಾರವಾದ್ರು.
ಇನ್ನೆರಡು ಎಸೆತಗಳು ಬಾಕಿ ಇರುವಂತೆ ಗೆದ್ದು ಬೀಗಿದ ಸನ್ರೈಸರ್ಸ್ ಹೈದ್ರಾಬಾದ್ ಎರಡನೇ ಕ್ವಾಲಿಫೈಯರ್ ಪ್ರವೇಶಿಸಿದ್ದು, ಭಾನುವಾರ ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೋರಾಡಲಿದೆ. ಇನ್ನೊಂದೆಡೆ ಸೋತ ಆರ್ಸಿಬಿಗೆ ಮತ್ತೊಮ್ಮೆ ಟ್ರೋಫಿ ಗೆಲ್ಲುವ ಕನಸು ನನಸಾಗದೆ ಉಳಿದಿದೆ.