

ಹೈದರಾಬಾದ್, ಅಕ್ಟೋಬರ್ 22: ತಂಡದ ಆಡಳಿತದ ಬಗ್ಗೆ ಅಸಮಾಧಾನಗೊಂಡಿರುವ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್, ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಹೊರಬರುವ ಸಾಧ್ಯತೆ ಇದೆ.
ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಡಿಸೆಂಬರ್ ಮಧ್ಯದಲ್ಲಿ ನಡೆಯುವ ಐಪಿಎಲ್ ಹರಾಜಿಗೆ ಮುನ್ನವೇ ತಂಡವನ್ನು ಬದಲಿಸಲಿರುವ ಪ್ರಮುಖ ಆಟಗಾರ ಎನಿಸಿಕೊಂಡಿದ್ದಾರೆ.
ಸನ್ ರೈಸರ್ಸ್ ನೀಡುತ್ತಿರುವ ಕಡಿಮೆ ಶುಲ್ಕದ ಬಗ್ಗೆ ಅವರು ಅಸಮಾಧಾನ ಹೊಂದಿದ್ದಾರೆ. ಈ ವರ್ಷದ ನಡೆದ ಹರಾಜಿನ ವೇಳೆ ಸನ್ ರೈಸರ್ಸ್ ಧವನ್ ಅವರನ್ನು ಉಳಿಸಿಕೊಂಡಿರಲಿಲ್ಲ. ಬಳಿಕ ಆರ್ಟಿಎಂ (ರೈಟ್ ಟು ಮ್ಯಾಚ್) ಕಾರ್ಡ್ ಬಳಸಿ 5.2 ಕೋಟಿ ರೂ.ಗೆ ಅವರನ್ನು ಮರಳಿ ಖರೀದಿಸಿತ್ತು.
ಡೇವಿಡ್ ವಾರ್ನರ್ ಅವರನ್ನು 12 ಕೋಟಿ ರೂ ಮತ್ತು ಭುವನೇಶ್ವರ್ ಕುಮಾರ್ ಅವರನ್ನು 8.5 ಕೋಟಿಗೆ ಉಳಿಸಿಕೊಳ್ಳಲಾಗಿತ್ತು.
ಇದರಿಂದ ಹತಾಶರಾಗಿದ್ದ ಧವನ್, ತಾವು ಭಾರತ ತಂಡದ ಪ್ರಮುಖ ಆಟಗಾರನಾಗಿದ್ದೂ, ತಂಡದಲ್ಲಿ ಉಳಿಸಿಕೊಳ್ಳದ್ದಕ್ಕೆ ಕೋಚ್ ಟಾಮ್ ಮೂಡಿ ಅವರೊಂದಿಗೆ ವಾಗ್ವಾದ ನಡೆಸಿದ್ದರು ಎನ್ನಲಾಗಿದೆ.
2009 ಮತ್ತು 2010ರ ಆವೃತ್ತಿಗಳಲ್ಲಿ ಧವನ್, ಮುಂಬೈ ತಂಡದ ಪರ ಆಡಿದ್ದರು. ಆರ್ಸಿಬಿಯ ಆಟಗಾರ ಕ್ವಿಂಟನ್ ಡಿ ಕಾಕ್ ಕೂಡ ಮುಂಬೈ ಇಂಡಿಯನ್ಸ್ ಸೇರಲು ತಯಾರಿ ನಡೆಸಿದ್ದಾರೆ.