ಐಪಿಎಲ್ ಚಾಂಪಿಯನ್ ತಂಡಗಳ ಪಟ್ಟಿಯನ್ನು ಗಮನಿಸಿದಾಗ ಅಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಹೆಸರು ಎದ್ದು ಕಾಣುತ್ತದೆ. ಈ ತಂಡ ಸಹ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ತಂಡ ಕಳೆದ ಕೆಲವು ವರ್ಷಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದೆ. ಈ ಫ್ರಾಂಚೈಸಿ ವಿಶ್ವದಲ್ಲೇ ಹಲವು ಲೀಗ್ಗಳಲ್ಲಿ ತಮ್ಮ ತಂಡವನ್ನು ಹೊಂದಿದೆ. ದಿ ಹಂಡ್ರೆಡ್ ಲೀಗ್ನಲ್ಲೂ ಸನ್ರೈಸರ್ಸ್ ಲೀಡ್ಸ್ ತಂಡವನ್ನು ಹೊಂದಿದೆ.
ಗುರುವಾರ ನಡೆದ ದಿ ಹಂಡ್ರೆಡ್ ಲೀಗ್ನ ಹರಾಜಿನಲ್ಲಿ ಸನ್ರೈಸರ್ಸ್ ಲೀಡ್ಸ್ ತಂಡದ ಮಾಲೀಕೆ ಕಾವ್ಯಾ ಮಾರನ್ ಅವರು ಪಾಕಿಸ್ತಾನದ ಸ್ಪಿನ್ ಬೌಲರ್ ಅಬ್ರಾರ್ ಅಹ್ಮದ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡರು. ಈ ಪ್ಲೇಯರ್ ತಂಡಕ್ಕೆ ಖರೀದಿಸಲು ಸನ್ರೈಸರ್ಸ್ ಭಾರೀ ಮೊತ್ತವನ್ನು ಖರ್ಚು ಮಾಡಿದೆ. ಅಬ್ರಾರ್ ಅಹ್ಮದ್ ಪಾಕ್ ತಂಡವನ್ನು ಸೇರಿದಾಗಿನಿಂದಲೂ ಚರ್ಚೆಗಳು ಆರಂಭವಾಗಿವೆ. ಈ ವಿವಾದದ ಬಗ್ಗೆ ಬಿಸಿಸಿಐ ತನ್ನ ಮೊದಲ ಪ್ರತಿಕ್ರಿಯೆ ನೀಡಿದೆ. ಬಿಸಿಸಿಐ ಕಾರ್ಯದರ್ಶಿ ರಾಜೀವ್ ಶುಕ್ಲಾ ಮಹತ್ವದ ಹೇಳಿಕೆ ನೀಡಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ರಾಜೀವ್ ಶುಕ್ಲಾ ಇದಕ್ಕೂ ಐಪಿಎಲ್ಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ದಿ ಹಂಡ್ರೆಡ್ನಲ್ಲಿ ನಡೆದಿದ್ದು ಐಪಿಎಲ್ ವಿಷಯವಲ್ಲ. ಇದು ಐಪಿಎಲ್ನ ವ್ಯಾಪ್ತಿಯಲ್ಲಿಲ್ಲ ಎಂದು ಶುಕ್ಲಾ ಸ್ಪಷ್ಟಪಡಿಸಿದರು. ಬೇರೆ ವಿದೇಶಿ ಲೀಗ್ಗಳಲ್ಲಿ ಯಾರು ಏನು ಮಾಡುತ್ತಾರೆ ಎಂಬುದರಲ್ಲಿ ಬಿಸಿಸಿಐ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಬೇರೆ ಲೀಗ್ಗಳಲ್ಲಿ ಏನು ಮಾಡುತ್ತಾರೆ ಎಂಬುದು ಆಯಾ ತಂಡಗಳ ಮಾಲೀಕರಿಗೆ ಬಿಟ್ಟಿದ್ದು. ಐಪಿಎಲ್ನಲ್ಲಿ ಆ ಆಟಗಾರ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.
ಸನ್ರೈಸರ್ಸ್ ಲೀಡ್ಸ್ ತಂಡ ದಿ ಹಂಡ್ರೆಡ್ ಹರಾಜಿನಲ್ಲಿ ಪಾಕ್ ಸ್ಪಿನ್ ಬೌಲರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸುತ್ತಿದ್ದಂತೆ ಭಾರತದಲ್ಲಿ ಎಸ್ಆರ್ಎಚ್ ವಿರುದ್ಧ ಅಭಿಮಾನಿಗಳು ಮುಗಿ ಬಿದಿದ್ದಾರೆ. ಅಲ್ಲದೆ ಬಾಯ್ಕಾಟ್ ಎಸ್ಆರ್ಎಚ್ ಆರಂಭಿಸಿದ್ದಾರೆ. ಇದು ಹೀಗೆ ಮುಂದುವರೆದಲ್ಲಿ ತಂಡದ ವಿರುದ್ಧ ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳು ಇವೆ. ಈ ಬಾರಿಯ ಐಪಿಎಲ್ನ ಮೊದಲ ಪಂದ್ಯದಲ್ಲಿ ಎಸ್ಆರ್ಎಚ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವಾಲು ಎದುರಿಸಲಿದೆ. ಈ ಪಂದ್ಯ ಮಾರ್ಚ್ 28 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದ್ದು, ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.