ಭಾನುವಾರ ನಡೆದ ಬಾಂಗ್ಲಾದೇಶ ವಿರುದ್ಧ ಮೊದಲ ಟಿ20 ಪಂದ್ಯವನ್ನು ಭಾರತ ಗೆದ್ದು ಬೀಗಿದೆ. ಭಾರತ 49 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿದೆ. ಈಗ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.
14 ವರ್ಷಗಳ ನಂತರ ಗ್ವಾಲಿಯರ್ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಡೆಯಿತು. ಈ ಸಂಭ್ರಮದ ಕ್ಷಣಕ್ಕೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯ ಸಾಕ್ಷಿ ಆಯಿತು. ಬಾಂಗ್ಲಾದೇಶ ವಿರುದ್ಧದ ಬೃಹತ್ ಗೆಲುವಿನ ನಂತರ ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಸಂಭ್ರಮಿಸಿದ್ದಾರೆ. ಟೀಮ್ ಇಂಡಿಯಾದ ಅಮೋಘ ಗೆಲುವಿನ ನಿಜವಾದ ಹೀರೋ ಯಾರು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿತು. ಜೊತೆಗೆ ನಾಯಕ ಅಂದುಕೊಂಡತೆ ಎಲ್ಲವೂ ಪಂದ್ಯದ ಸಂದರ್ಭದಲ್ಲಿ ನಡೆಯಿತು. ಇದೀಗ
ಸೂರ್ಯಕುಮಾರ್ ಯಾದವ್ ಅವರು ತಮ್ಮ ಯೋಜನೆಯನ್ನು ಮೈದಾನದಲ್ಲಿ ಜಾರಿಗೆ ತಂದ ಬಗ್ಗೆ ಹೇಳಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅವರು, 'ನಾವು ನಮ್ಮ ಪ್ರತಿಭೆಗೆ ತಕ್ಕಂತೆ ಆಡಲು ಪ್ರಯತ್ನಿಸಿದ್ದೇವೆ. ತಂಡದ ಸಭೆಯಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರವನ್ನು ಕಾರ್ಯಗತಗೊಳಿಸಿದ್ದೇವೆ. ಪಂದ್ಯವನ್ನು ಗೆಲ್ಲಲು ಆಟಗಾರರು ಉತ್ಸಾಹ ತೋರಿದರು ಎಂದು ತಿಳಿಸಿದ್ದಾರೆ.
ಇದೇ ವೇಳೆ ಚೊಚ್ಚಲ ಪಾದಾರ್ಪಣೆ ಪಂದ್ಯವಾಡಿದ ವೇಗದ ಬೌಲರ್ ಮಯಾಂಕ್ ಯಾದವ್ ಮತ್ತು ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರ ಪ್ರದರ್ಶನಕ್ಕೆ ಸೂರ್ಯಕುಮಾರ್ ಯಾದವ್ ಹೊಗಳಿದ್ದಾರೆ. 'ಮುಂದಿನ ಪಂದ್ಯಗಳಲ್ಲಿ ಮಯಾಂಕ್ ಮತ್ತು ನಿತೀಶ್ ನೋಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನೀವು ಮೈದಾನದಲ್ಲಿರುವಾಗ ಮತ್ತು ಹೆಚ್ಚುವರಿ ಬೌಲಿಂಗ್ ಆಯ್ಕೆಗಳನ್ನು ಹೊಂದಿರುವಾಗ ಇದು ಉತ್ತಮ ತಲೆನೋವು. ಪ್ರತಿ ಪಂದ್ಯದಲ್ಲೂ ನೀವು ಯಾವಾಗಲೂ ಹೊಸದನ್ನು ಕಲಿಯುತ್ತೀರಿ. ಕೆಲವು ಕ್ಷೇತ್ರಗಳಲ್ಲಿ ಸುಧಾರಣೆಯ ತರುವ ಅಗತ್ಯವಿದೆ. ಮುಂದಿನ ಪಂದ್ಯಕ್ಕೂ ಮುನ್ನ ಇದರ ಬಗ್ಗೆ ನಾವು ಮಾತನಾಡುತ್ತೇವೆ ಎಂದಿದ್ದಾರೆ.
ಟಿ20 ವಿಶ್ವಕಪ್ 2024ರ ನಂತರ ಟೀಮ್ ಇಂಡಿಯಾ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮತ್ತೊಮ್ಮೆ ಸಂಚಲನ ಮೂಡಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧವೂ ಅರ್ಷದೀಪ್ ಸಿಂಗ್ ಭರ್ಜರಿ ಬೌಲಿಂಗ್ ಪ್ರದರ್ಶಿಸಿದರು. ಅವರ ಈ ಅತ್ಯುತ್ತಮ ಬೌಲಿಂಗ್ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಸಿಕ್ಕಿತು. ಅರ್ಷದೀಪ್ ಸಿಂಗ್ 3.5 ಓವರ್ಗಳಲ್ಲಿ 14 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.