ಭಾನುವಾರ ಗ್ವಾಲಿಯರ್ನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಣ ಮೊದಲ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಮತ್ತೊಂದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಕನಸನ್ನು ಹೊಂದಿದೆ. ಇದೇ ವೇಳೆ ಟೀಮ್ ಇಂಡಿಯಾ ನಾಯಕ ನೀಡಿದ ಹೇಳಿಕೆಯೊಂದು ಸಖತ್ ವೈರಲ್ ಆಗುತ್ತಿದೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್. ಐಪಿಎಲ್ನಲ್ಲಿ ಅಬ್ಬರದ ಪ್ರದರ್ಶನದ ನೀಡಿದ ಫಲವಾಗಿ ಇವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಸ್ಕೈ, ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾದ ಖಾಯಂ ಸದಸ್ಯರಾದರು. ಬಳಿಕ ಹಂತ ಹಂತವಾಗಿ ಯಶಸ್ಸು ಸಾಧಿಸಿರುವ ಸೂರ್ಯಕುಮಾರ್ ಟಿ20 ಫಾರ್ಮೆಟ್ನ ನಂಬರ್ ಬ್ಯಾಟರ್ ಸ್ಥಾನವನ್ನು ಅಲಂಕರಿಸಿದರು. ಈಗ ಸೂರ್ಯ ಟೀಮ್ ಇಂಡಿಯಾವನ್ನು ಚುಟುಕು ಫಾರ್ಮೆಟ್ನಲ್ಲಿ ಮುನ್ನಡೆಸುತ್ತಿದ್ದಾರೆ.

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಣ ಟಿ20 ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್ ದೊಡ್ಡ ಹೇಳಿಕೆ ನೀಡಿದ್ದಾರೆ. ಸೂರ್ಯಕುಮಾರ್ ಯಾದವ್ ಮೊದಲ ಪಂದ್ಯಕ್ಕೂ ಮುನ್ನ ನೀಡಿದ ಹೇಳಿಕೆ, ಭವಿಷ್ಯದಲ್ಲಿ ಐಪಿಎಲ್ ತಂಡದ ನಾಯಕರಾಗುವ ಸಂಕೇತವಾಗಿದೆ.
ಕಳೆದ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ತಂಡ ಹಾರ್ದಿಕ್ ಪಾಂಡ್ಯರನ್ನು ತಂಡದ ನಾಯಕರನ್ನಾಗಿ ನೇಮಕ ಮಾಡಿತು. ರೋಹಿತ್ ಶರ್ಮಾ ಅವರನ್ನು ಕೆಳಗಿಸಿ, ಪಾಂಡ್ಯ ಅವರಿಗೆ ಪಟ್ಟ ಕಟ್ಟಲಾಯಿತು. ಹಾರ್ದಿಕ್ ನಾಯಕಿತ್ವದಲ್ಲಿ ಮುಂಬೈ ಇಂಡಿಯನ್ಸ್ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಇದೇ ವೇಳೆ ಸೂರ್ಯ ನೀಡಿರುವ ಹೇಳಿಕೆ ಅವರು ಮುಂಬೈ ಇಂಡಿಯನ್ಸ್ ತಂಡದ ಚುಕ್ಕಾಣಿ ಹಿಡಿಯುತ್ತಾರಾ ಎಂಬ ಚರ್ಚೆಗಳು ಆರಂಭವಾಗುವಂತೆ ಮಾಡಿವೆ.
ಪತ್ರಕರ್ತರು ಐಪಿಎಲ್ನಲ್ಲಿ ನೀವು ತಂಡವನ್ನು ಮುನ್ನಡೆಸುತ್ತೀರಾ ಎಂದು ಪ್ರಶ್ನೆಯನ್ನು ಕೇಳಿದಾಗ, ಸೂರ್ಯಕುಮಾರ್ ನೀವು ನನಗೆ ಗೂಗ್ಲಿ ಹಾಕಿದ್ದಿರಿ ಎಂದು ತಿಳಿಸಿದರು. ಸದ್ಯ ನಾನು ನನ್ನ ಜವಾಬ್ದಾರಿಯನ್ನು ಆನಂದಿಸುತ್ತಿದ್ದೇನೆ. ಭಾರತ ತಂಡದ ನಾಯಕನಾಗಿರುವುದು ಸಂತಸ ತಂದಿದೆ ಎಂದರು. ತಂಡದಲ್ಲಿ ಹಲವು ನಾಯಕರೊಂದಿಗೆ ಆಡಿದ್ದೇನೆ. ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬುದನ್ನು ಹಿರಿಯರಿಂದ ಕಲಿತಿದ್ದೇನೆ ಎಂದು ತಿಳಿಸಿದ್ದಾರೆ.

ಬಿಸಿಸಿಐ ಇತ್ತೀಚಿಗೆ ರಿಟೇನ್ಶನ್ ಪಾಲಿಸಿ ಲೀಸ್ಟ್ ಬಿಟ್ಟಿದೆ. ಈ ಲೀಸ್ಟ್ ನಿಜಕ್ಕೂ ಫ್ರಾಂಚೈಸಿಗಳ ಕೆಲಸವನ್ನು ದ್ವಿಗುಣ ಗೊಳಿಸಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಲವು ಸ್ಟಾರ್ ಆಟಗಾರರು ಇದ್ದಾರೆ. ಅವರಲ್ಲಿ ಆರು ಜನರನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲೇ ಸರಿ. ಒಂದು ವೇಳೆ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಉಳಿಸಿಕೊಂಡಲ್ಲಿ, ಅವರು ಸಹ ಮುಂಬೈ ತಂಡದ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು. ಇಲ್ಲದೇ ಇದ್ದರೆ ಹರಾಜಿನ ಮೂಲಕ ಬೇರೆ ತಂಡ ಸೇರಿ ಅಲ್ಲಿ ತಂಡವನ್ನು ಮುನ್ನಡೆಸಬಹುದಾಗಿದೆ.