
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ ಭಾರತದ ಪರವಾಗಿ ಚೊಚ್ಚಲ ಬಾರಿಗೆ ಪ್ರತಿನಿಧಿಸಿದ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅದ್ಭುತ ಆಟವನ್ನು ಪ್ರದರ್ಶಿಸಿದ್ದಾರೆ. ಈ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈಗ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಕೂಡ ಈ ಇಬ್ಬರು ಆಟಗಾರರ ಪ್ರದರ್ಶನಕ್ಕೆ ಮುಕ್ತಕಂಠದಿಂದ ಹೊಗಳಿದ್ದಾರೆ.
"ಇಶಾನ್ ಕಿಶನ್ ಹಾಗೂ ಸೂರ್ಯ ಇಬ್ಬರೂ ಆಡಲು ಸಂಪೂರ್ಣ ಸಿದ್ಧರಾಗಿದ್ದಾರೆ. ಯಾಕೆಂದರೆ ಐಪಿಎಲ್ನಂತಾ ವೇದಿಗೆ ಈ ಆಟಗಾರರಿಗೆ ಯಾವಾಗಲೂ ಸಹಕಾರಿಯಾಗಿದೆ" ಎಂದು ಸಚಿನ್ ತೆಂಡೂಲ್ಕರ್ ಪಿಟಿಐ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
"ಮೊದಲು ನಾವು ಆಡುವಾಗ ವಾಸಿಂ ಅಕ್ರಂ ಅವರನ್ನು ಎದುರಿಸಿರಲಿಲ್ಲ. ಆಸ್ಟ್ರೇಲಿಯಾದಲ್ಲಿ ಆಡುವಾಗ ಶೇನ್ ವಾರ್ನ್ ಅಥವಾ ಕ್ರಗ್ ಮೆಕ್ಡೆರ್ಮಾರ್ಟ್ ಅಥವಾ ಮಾರ್ವ್ ಹ್ಯೂಸ್ ಅವರನ್ನು ಎದುರಿಸಿರಲಿಲ್ಲ. ನಾವು ಅಲ್ಲಿಗೆ ತೆರಳಿದ ನಂತರವೇ ನಮಗೆ ಏನಾಗುತ್ತದೆ ಎಂಬುದು ತಿಳಿಯುತ್ತಿತ್ತು" ಎಂದು ಸಚಿನ್ ವಿವರಿಸಿದ್ದಾರೆ.
"ಆದರೆ ಈಗ ಐಪಿಎಲ್ನಿಂದಾಗಿ ಸಹಕಾರಿಯಾಗಿದೆ. ನಿನ್ನೆ ಪಂದ್ಯವನ್ನು ನೋಡುತ್ತಿರಬೇಕಾದರೆ ಕಾಮೆಂಟೇಟರ್ಗಳು ವಿವರಿಸುತ್ತಿದ್ದರು. ಜೋಫ್ರಾ ಆರ್ಚರ್ ಹಾಗೂ ಬೆನ್ ಸ್ಟೋಕ್ಸ್ ಅವರ ಎಸೆತಗಳು ಸೂರ್ಯಕುಮಾರ್ಗೆ ಹೊಸತಲ್ಲ. ಯಾಕೆಂದರೆ ಆತ ರಾಜಸ್ಥಾನ್ ರಾಯಲ್ಸ್ ವಿರುದ್ಧ ಈ ಹಿಂದೆ ಆಡಿದ್ದಾರೆ" ಎಂದು ಪ್ರತಿಕ್ರಿಯಿಸಿದ್ದಾರೆ.
"ಇದೇ ಕಾರಣಕ್ಕೆ ನಾನು ಹೇಳಿದ್ದೇನೆ, ಇಬ್ಬರೂ ಆಟಗಾರರು ಕೂಡ ಆಡಲು ಕಾಯುತ್ತಿದ್ದಾರೆ. ಇದು ಭಾರತದ ಬೆಂಚ್ ಸಾಮರ್ಥ್ಯವನ್ನು ತೋರ್ಪಡಿಸುತ್ತದೆ. ಅದು ನಿಜಕ್ಕೂ ಅತ್ಯಂತ ಬಲಿಷ್ಠವಾಗಿದೆ. ಇದು ಈಗಿನ ನಮ್ಮ ತಂಡದ ಸೌಂದರ್ಯವಾಗಿದೆ" ಎಂದು ಸಚಿನ್ ತೆಂಡೂಲ್ಕರ್ ವಿವರಿಸಿದ್ದಾರೆ