ಟಿ20 ಮಾದರಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತೊಂದು ಅದ್ಭುತ ಪ್ರದರ್ಶನ ನೀಡಿ ಪಂದ್ಯದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ. ಗುರುವಾರ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ನಾಯಕನಾಗಿ ಮೊದಲ ಬಾರಿಗೆ ಜವಾಬ್ಧಾರಿ ನಿಭಾಯಿಸುವುದರ ಜೊತೆಗೆ ನಾಯಕನ ಆಟವನ್ನಾಡುವ ಮೂಲಕ ಗಮನಸೆಳೆದಿದ್ದಾರೆ.
ಪ್ರಸ್ತುತ ಟಿ20 ಮಾದರಿಯ ನಂಬರ್ 1 ಬ್ಯಾಟರ್ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ತಮ್ಮ ಸಾಮರ್ಥ್ಯಕ್ಕೆ ತಕ್ಕನಾದ ಪ್ರದರ್ಶನ ನೀಡಿದ್ದು ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವಿಗೆ ಕಾರಣವಾದರು. ಈ ಪಂದ್ಯದಲ್ಲಿ 42 ಎಸೆತಗಳಲ್ಲಿ 80 ರನ್ಗಳನ್ನು ಬಾರಿಸಿ ಅಬ್ಬರಿಸಿದರು. ಈ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಪಂದ್ಯಶ್ರೇಷ್ಠ ಪ್ರಶಸ್ತಿಯೊಂದಿಗೆ ಸೂರ್ಯಕುಮಾರ್ ಯಾದವ್ 13 ಬಾರಿ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಮೂಲಕ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಿಗಿಂತ ಕೇವಲ ಎರಡರಷ್ಟು ಹಿಂದಿದ್ದಾರೆ. ವಿರಾಟ್ ಕೊಹ್ಲಿ 115 ಪಂದ್ಯಗಳನ್ನು ಆಡಿದ್ದು 15 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದನ್ನು ಈ ದಾಖಳೆ ಹಿಂದಿಕ್ಕಲು ಸೂರ್ಯಕುಮಾರ್ ಇನ್ನು ಕೇವಲ ಎರಡು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಸಾಕಾಗಲಿದೆ.
ನಾಯಕನಾಗಿ ಶುಭಾರಂಭ
ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾಗಿರುವ ಕಾರಣ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಬಳಿಕ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಿಂದಲೂ ಹೊರಬೀಳುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಹಂಗಾಮಿ ನಾಯಕನಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಿಸಲಾಗಿದೆ. ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕನಾಗಿ ಹಾಗೂ ಬ್ಯಾಟರ್ ಆಗಿಯೂ ಭರ್ಜರಿ ಯಶಸ್ಸು ಸಾಧಿಸಿದೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಸ್ಪೋಟಕ ಪ್ರದರ್ಶನ ನೀಡಿತು.ಆರಂಭಿಕ ಆಟಗಾರ ಮ್ಯಾಥ್ಯೂ ಶಾರ್ಟ್ ಅವರನ್ನು ಬೇಗನೆ ಕಳೆದುಕೊಂಡ ಆಸ್ಟ್ರೇಲಿಯಾ ಬಳಿಕ ಸ್ಟಿವ್ ಸ್ಮಿತ್ ಹಾಗೂ ಜೋಶ್ ಇಂಗ್ಲೀಸ್ ಅವರಿಂದ ಬೃಹತ್ ಜೊತೆಯಾಟ ಪಡೆಯಿತು. 130 ರನ್ಗಳ ಜೊತೆಯಾಟ ಆಸಿಸ್ ಪಡೆಯನ್ನು ದೊಡ್ಡ ಮೊತ್ತದತ್ತ ಹೆಜ್ಜೆಯಿಡುವಂತೆ ಮಾಡಿತು.
ಈ ಪೈಕಿ ಸ್ಮಿತ್ 41 ಎಸೆತಗಳಲ್ಲಿ 52 ರನ್ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಜೋಸ್ ಇಂಗ್ಲೀಸ್ ಕೇವಲ 50 ಎಸೆತಗಳನ್ನು ಎದುರಿಸಿದ್ದು 11 ಬೌಂಡರಿ ಹಾಗೂ 8 ಸಿಕ್ಸರ್ಗಳ ನೆರವಿನಿಂದ 110 ರನ್ಗಳನ್ನು ಬಾರಿಸಿದ್ದಾರೆ. ಅಂತಿಮವಾಗಿ ಆಸ್ಟ್ರೇಲಿಯಾ ನಿಗದಿತ 20 ಓವರ್ಗಳಲ್ಲಿ 208 ರನ್ಗಳನ್ನು ಕಲೆಹಾಕಿತು.
ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಋತುರಾಜ್ ಗಾಯಕ್ವಾಡ್ ಚೆಂಡು ಎದುರಿಸುವ ಮುನ್ನವೇ ರನೌಟ್ ಆಗಿ ಆಘಾತ ಅನುಭವಿಸಿದರು. ಬಳಿಕ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಯಶಸ್ವು ಜೈಸ್ವಾಲ್ ಕೂಡ ವಿಕೆಟ್ ಕಳೆದುಕೊಂಡರು. ಆದರೆ ಬಳಿಕ ಕಣಕ್ಕಿಳಿದ ಇಶಾನ್ ಕಿಶನ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಭರ್ಜರಿ ಶತಕದ ಜೊತೆಯಾಟ ನೀಡಿದರು. ಇಶಾನ್ 58 ರನ್ ಹಾಗೂ ಸೂರ್ಯ 80 ರನ್ಗಳ ಕೊಡುಗೆ ನೀಡಿದರು.
ಗೆಲುವಿನ ಸನಿಹದಲ್ಲಿದ್ದಾಗ ಸೂರ್ಯಕುಮಾರ್ ವಿಕೆಟ್ ಕಳೆದುಕೊಂಡ ಕಾರಣ ಭಾರತ ಕೊನೆಯ ಹಂತದಲ್ಲಿ ಒಂದಾದ ಬಳಿಕ ಮತ್ತೊಂದರಂತೆ ವಿಕೆಟ್ ಕಳೆದುಕೊಂಡಿತು. ಆದರೆ ರಿಂಕು ಸಿಂಗ್ ಭಾರತದ ಗೆಲುವನ್ನು ಖಚಿತಪಡಿಸಿದರು.