ಶ್ರೀಲಂಕಾ ಪ್ರವಾಸದ ನಂತರ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಆಟಗಾರರು ಸಜ್ಜಾಗಿದ್ದಾರೆ. ಈ ಸರಣಿಗೂ ಮುನ್ನ ಸೆಪ್ಟೆಂಬರ್ 5 ರಿಂದ ದುಲೀಪ್ ಟ್ರೋಫಿ ಆಯೋಜಿಸಲಾಗಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಅನುಭವಿ ಮತ್ತು ಯುವ ಆಟಗಾರರು ಆಡಲಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಗಾಯಗೊಂಡಿದ್ದಾರೆ. ಕೊಯಮತ್ತೂರಿನಲ್ಲಿ ನಡೆದ ಬುಚ್ಚಿ ಬಾಬು ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಿಎನ್ಸಿಎ ಇಲೆವೆನ್ ಮತ್ತು ಮಂಬೈ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಮುಂಬೈ ಪರ ಫೀಲ್ಡಿಂಗ್ ಮಾಡುವಾಗ ಸೂರ್ಯಕುಮಾರ್ ಕೈ ಗಾಯ ಮಾಡಿಕೊಂಡಿದ್ದಾರೆ. ಇದಾದ ನಂತರ ಅವರು ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿಯೂ ಬ್ಯಾಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ.

ಈಗ ದುಲೀಪ್ ಟ್ರೋಫಿಯಲ್ಲೂ ಭಾರತ ಸಿ ತಂಡದಲ್ಲಿ ಸ್ಥಾನ ಪಡೆದಿರುವ ಸೂರ್ಯಕುಮಾರ್, ಭಾರತ ಡಿ ವಿರುದ್ಧದ ಪಂದ್ಯವನ್ನು ಆಡುತ್ತಿಲ್ಲ. ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಮಿಂಚುವ ನಿರೀಕ್ಷೆ ಇಟ್ಟುಕೊಂಡಿದ್ದ ಅವರಿಗೆ ಅದೃಷ್ಟ ಕೈ ಕೊಟ್ಟಿದೆ. ಹೀಗಾಗಿ ಗಾಯಗೊಂಡಿರುವ ಸೂರ್ಯಕುಮಾರ್ ದುಲೀಪ್ ಟ್ರೋಫಿಯ ಪ್ರಾಥಮಿಕ ಸುತ್ತಿನಿಂದ ಹೊರಗುಳಿದಿದ್ದಾರೆ. ಅನಂತಪುರದಲ್ಲಿ ಸೆಪ್ಟೆಂಬರ್ 5-8 ರಿಂದ ಮೊದಲ ಸುತ್ತಿನ ಪಂದ್ಯದಲ್ಲಿ ನಡೆಯಲಿದೆ.
ಸದ್ಯ ಸೂರ್ಯಕುಮಾರ್ ಯಾದವ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಇದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಅವರು ಟಿ20 ಕ್ರಿಕೆಟ್ನಲ್ಲಿ ಒಂದರ ಹಿಂದೆ ಒಂದರಂತೆ ದೊಡ್ಡ ಸಾಧನೆಗಳನ್ನು ಸಾಧಿಸಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ಟೆಸ್ಟ್ ಕ್ರಿಕೆಟ್ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾ ಪರ ಇದುವರೆಗೆ ಸೂರ್ಯ ಒಂದೇ ಒಂದು ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಈ ಪಂದ್ಯದಲ್ಲಿ ಅವರಿಂದ ಹೇಳಿಕೊಳ್ಳುವಂತ ಪ್ರದರ್ಶನ ಬಂದಿಲ್ಲ. ಈಗ ಗಾಯದಿಂದ ಹಿಂತಿರುಗಿದ ನಂತರ ಅವರು ಹೇಗೆ ಆಟವಾಡುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.