ಟೀಮ್ ಇಂಡಿಯಾದ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಟೀಮ್ ಇಂಡಿಯಾ ಎರಡನೇ ಟೆಸ್ಟ್ ಪಂದ್ಯವನ್ನು ಆಡಲು ಸಿದ್ಧತೆ ನಡೆಸಿದೆ. ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್, ತಂಡದಿಂದ ದೂರ ಉಳಿದಿದ್ದಾರೆ. ಇವರು ದೇಶೀಯ ಟೂರ್ನಿಯಲ್ಲಿ ಮಿಂಚು ಹರಿಸುತ್ತಿದ್ದಾರೆ. ಈ ಮೂಲಕ ತಾವು ಪ್ರತಿನಿಧಿಸುವ ತಂಡಕ್ಕೆ ಜಯದ ಮಾಲೆಯನ್ನು ತೊಡಿಸಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಸೂರ್ಯ ಮುಂಬೈ ಪರ ಬ್ಯಾಟ್ ಮಾಡುತ್ತಿದ್ದಾರೆ. ಇ ಗುಂಪಿನ ಪಂದ್ಯದಲ್ಲಿ ಮುಂಬೈ ಹಾಗೂ ಸರ್ವಿಸಸ್ ತಂಡದ ವಿರುದ್ಧ ಫೈಟ್ ನಡೆಯಿತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ 20 ಓವರ್ಗಳಲ್ಲಿ 4 ವಿಕೆಟ್ಗೆ 192 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸರ್ವಿಸಸ್ 19.3 ಓವರ್ಗಳಲ್ಲಿ 153 ರನ್ ಸಿಡಿ ಆಲೌಟ್ ಆಯಿತು. ಈ ಮೂಲಕ ಮುಂಬೈ ಟೂರ್ನಿಯಲ್ಲಿ ನಾಲ್ಕನೇ ಜಯ ಸಾಧಿಸಿತು.

ಐಪಿಎಲ್ನಲ್ಲಿ ಅನ್ಸೋಲ್ಡ್ ಆಗಿರುವ ಪೃಥ್ವಿ ಶಾ ತಮ್ಮನ್ನು ತಾವು ಪ್ರೂ ಮಾಡಿಕೊಳ್ಳುವಲ್ಲಿ ಮತ್ತೊಮ್ಮೆ ವಿಫಲರಾದರು. ಇವರು ಮತ್ತೊಮ್ಮೆ ಸೊನ್ನೆ ಸುತ್ತಿದರು. ದಾಖಲೆಯ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಿರುವ ಶ್ರೇಯಸ್ ಅಯ್ಯರ್ 20 ರನ್ಗಳಿಗೆ ಆಟ ಮುಗಿಸಿದರು.
ಆರಂಭಿಕ ಭರವಸೆಯ ಆಟಗಾರ ಅಜಿಂಕ್ಯ ರಹಾನೆ ಹಾಗೂ ಸೂರ್ಯಕುಮಾರ್ ಯಾದವ್ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಜವಾಬ್ದಾರಿಯನ್ನು ಹೊತ್ತು ಕೊಂಡರು. ಅಜಿಂಕ್ಯ ರಹಾನೆ ಸಹ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಇವರ ಆಟ 22 ರನ್ಗಳಿಗೆ ಕೊನೆಯಾಯಿತು.

ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ಛಾಪು ಮೂಡಿಸಿರುವ ಸೂರ್ಯಕುಮಾರ್ ಯಾದವ್, ದೇಶೀಯ ಕ್ರಿಕೆಟ್ನಲ್ಲೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಈ ವೇಳೆ ಸೂರ್ಯ 7 ಬೌಂಡರಿ, 4 ಸಿಕ್ಸರ್ ಸಹಾಯದಿಂದ 70 ರನ್ ಸಿಡಿಸಿ ಅಬ್ಬರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ 37 ಎಸೆತಗಳಲ್ಲಿ 2 ಬೌಂಡರಿ, 7 ಸಿಕ್ಸರ್ ನೆರವಿನಿಂದ 71 ರನ್ ಸಿಡಿಸಿದರು.
ಗುರಿಯನ್ನು ಬೆನ್ನಟ್ಟಿದ ಸರ್ವಿಸಸ್ ತಂಡದ ಬ್ಯಾಟರ್ಗಳು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುವಲ್ಲಿ ವಿಫಲರಾದರು. ಸರ್ವಿಸಸ್ ಪರ ಮೋಹಿತ್ ಅಹ್ಲಾವತ್, ಸಿ ರಹಾನೆ (54), ವಿಕಾಸ್ ಹತ್ವಾಲಾ (22), ಮೋಹಿತ್ ರಾಥಿ (20) ಕೊಂಚ ಮುಂಬೈ ಬೌಲರ್ಗಳನ್ನು ಕಾಡಿದರು.
ಐಪಿಎಲ್ನಲ್ಲಿ ಅನ್ಸೋಲ್ಡ್ ಆಗಿರುವ ಶಾರ್ದೂಲ್ ಠಾಕೂರ್ 25 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಶಮ್ಸ್ ಮುಲಾನಿ ಮೂರು ವಿಕೆಟ್ ಪಡೆದರು. ಈ ಮೂಲಕ ಶಾರ್ದೂಲ್ ತಮ್ಮನ್ನು ಕೈ ಬಿಟ್ಟ ನಿರ್ಧಾರವನ್ನು ತಪ್ಪು ಎಂದು ಸಾಬೀತು ಪಡಿಸಿದರು.