ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಅವರ ಮುಂದಾಳತ್ವದಲ್ಲಿ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಸತತ ಸರಣಿ ಗೆಲುವಿನ ನಗೆಯನ್ನು ಬೀರುತ್ತಿದೆ. ಆದರೆ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಚಿಂತೆ ಎಲ್ಲರಲ್ಲೂ ಮನೆ ಮಾಡಿತ್ತು. ಸೂರ್ಯ ಮೈದಾನದಲ್ಲಿ ತಳವೂರಿ ಬಿಗ್ ಇನಿಂಗ್ಸ್ ಕಟ್ಟುತ್ತಿಲ್ಲ ಎಂಬ ಚಿಂತೆ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಹೀಗೆ ಆದರೆ ಟಿ20 ವಿಶ್ವಕಪ್ನಲ್ಲಿ ತಂಡ ಹೇಗೆ ಪ್ರದರ್ಶನ ನೀಡುತ್ತದೆ ಎಂಬ ಪ್ರಶ್ನೆ ಮೂಡಿತ್ತು. ಆದರೆ ಈ ಎಲ್ಲ ಪ್ರಶ್ನೆಗಳಿಗೆ ಸೂರ್ಯ ಶುಕ್ರವಾರ ಉತ್ತರ ಕಂಡುಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ನೈಜ ಬ್ಯಾಟಿಂಗ್ ಮಾಡಿದರು. ಎದುರಾಳಿ ಬೌಲರ್ಗಳ ಹೆಡೆ ಮುಡಿ ಕಟ್ಟಿದ ಸೂರ್ಯ ಅಬ್ಬರದ ಆಟವನ್ನು ನಡೆಸಿದರು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಸೂರ್ಯ, ತಮ್ಮಲ್ಲಿನ ಬ್ಯಾಟಿಂಗ್ ಕ್ಷಮತೆಯನ್ನು ಮತ್ತೊಮ್ಮೆ ಪರಿಚಯಿಸಿದರು. ತಮ್ಮ ಹಳೆಯ ಧಾಟಿಯಲ್ಲಿ ಬ್ಯಾಟ್ ಮಾಡಿದ ಸೂರ್ಯ ನೆರೆದಿದ್ದ ಅಭಿಮಾನಿಗಳಿಗೆ ಹಬ್ಬದೂಟವನ್ನು ಹಾಕಿದರು.

ಸೂರ್ಯಕುಮಾರ್ ಯಾದವ್ ಶುಕ್ರವಾರ ಆರಂಭದಲ್ಲಿ ತಮ್ಮ ನೈಜ ಆಟ ವಿರುದ್ಧವಾಗಿ ಆಟವಾಡಿದರು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಾಯಕ, ಇನ್ನೊಂದು ಬದಿಯಲ್ಲಿದ್ದ ಇಶಾನ್ ಕಿಶನ್ ಅವರಿಗೆ ಹೆಚ್ಚಿನ ಸ್ಟ್ರೈಕ್ ನೀಡಿದರು. ಈ ಮೂಲಕ ಯಂಗ್ ಪ್ಲೇಯರ್ ಆಟವನ್ನು ಇನ್ನೊಂದು ಬದಿಯಲ್ಲಿ ನಿಂತು ನೋಡಿ ಸೂರ್ಯ ಖುಷಿ ಪಟ್ಟರು. ಇಶಾನ್ ಕಿಶನ್ ಔಟ್ ಆಗುತ್ತಿದ್ದಂತೆ ಸೂರ್ಯ ತಮ್ಮ ಬತ್ತಳಿಕೆಯಲ್ಲಿದ್ದ ಹೊಡೆತಗಳನ್ನು ಒಂದೊಂದಾಗಿ ಪ್ರಯೋಗಿಸಿದರು.
ಟೀಮ್ ಇಂಡಿಯಾ ನಾಯಕ ಕಳೆದ 23 ಇನಿಂಗ್ಸ್ಗಳಲ್ಲಿ ಒಂದೇ ಒಂದು ಬಿಗ್ ಇನಿಂಗ್ಸ್ ಕಟ್ಟಿರಲಿಲ್ಲ. ಆದರೆ ಶುಕ್ರವಾರ ಅರ್ಧಶತಕ ಬಾರಿಸಿದ ಅಬ್ಬರಿಸಿದರು. ಈ ಮೂಲಕ ಸೂರ್ಯ ತಮ್ಮ ಟಿ20 ವೃತ್ತಿ ಜೀವನದ 22ನೇ ಅರ್ಧಶತಕ ಬಾರಿಸಿದರು. ಇವರು ಈ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ 50 ರನ್ ಬಾರಿಸಿದರು. ಶುಕ್ರವಾರ ನಡೆದ ಪಂದ್ಯದಲ್ಲಿ ಸೂರ್ಯ ಕೇವಲ 37 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 82 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದರು.

ಈ ಕ್ಲಾಸಿಕ್ ಇನಿಂಗ್ಸ್ ಮೂಲಕ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಅಳಿಸಿ ಹಾಕಿದರು. ವಿರಾಟ್ ಕೊಹ್ಲಿ ರಾಜ್ಕೋಟ್ನಲ್ಲಿ ನಡೆದ ಟಿ20 ಪಂದ್ಯದಲ್ಲಿ ನಾಯಕರಾಗಿ ನ್ಯೂಜಿಲೆಂಡ್ ವಿರುದ್ಧ 65 ರನ್ ಬಾರಿಸಿದ್ದರು. ಇದು ಭಾರತದ ನಾಯಕ ನ್ಯೂಜಿಲೆಂಡ್ ವಿರುದ್ಧ ದಾಖಲಿಸಿದ ದೊಡ್ಡ ಮೊತ್ತವಾಗಿತ್ತು. ಈ ದಾಖಲೆ ಈಗ ಸೂರ್ಯ ಪಾಲಾಗಿದೆ. ಇನ್ನು ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲೂ ಸೂರ್ಯ ಮತ್ತೊಂದು ದಾಖಲೆ ಬರೆದರು. ಇವರು ಆಡಿದ 10 ಇನಿಂಗ್ಸ್ಗಳಲ್ಲಿ 398 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಸೂರ್ಯ ವಿರಾಟ್ (311) ಹಾಗೂ ಕೆಎಲ್ ರಾಹುಲ್ (322) ದಾಖಲೆಯನ್ನು ಮೀರಿ ನಿಂತಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ನಲ್ಲಿ ಸೂರ್ಯಕುಮಾರ್ ಯಾದವ್ ಅವರು ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಫೆಬ್ರವರಿ 7 ರಿಂದ ಆರಂಭವಾಗುವ ಟೂರ್ನಿಯಲ್ಲಿ ಟೀಮ್ ಇಂಡಿಯಾ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಈ ವೇಳೆ ಟೀಮ್ ಇಂಡಿಯಾ ನಾಯಕ ಭರ್ಜರಿ ಫಾರ್ಮ್ಗೆ ಮರಳಿರುವುದು ನಿಜಕ್ಕೂ ಎದುರಾಳಿಗಳಿಗೆ ನಡುಕ ಹುಟ್ಟಿಸಿದೆ.