ಭಾರತದ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಪತ್ನಿ ದೇವಿಶಾ ಶೆಟ್ಟಿ ಆಂಧ್ರ ಪ್ರದೇಶದ ತಿರುಮಲ್ಲದಲ್ಲಿರುವ ವೆಂಕಟೇಶ್ವರ ದರ್ಶನ ಪಡೆದಿದ್ದಾರೆ. ವೈಕುಂಠ ಏಕಾದಶಿಯಂದು ಸೂರ್ಯ ದೇವರ ದರ್ಶನ ಪಡೆದರು. ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಿಕೊಂಡಿತ್ತು.
ಸೂರ್ಯ ಅವರಿಗೆ ತಿಮ್ಮಪ್ಪನ ಸನ್ನಿಧಿಯಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು. ಈ ವೇಳೆ ಸೂರ್ಯ ಸಂಪ್ರದಾಯಿಕ ಉಡುಗೆಯನ್ನು ಹಾಕಿಕೊಂಡಿದ್ದರು. ದರ್ಶನದ ನಂತರ, ಅರ್ಚಕರು ದೇವಾಲಯದ ಒಳಗಿನ ರಂಗನಾಯಕ ಕುಲವರಿ ಮಂಟಪದಲ್ಲಿ ಸೂರ್ಯ ಅವರನ್ನು ಆಶೀರ್ವದಿಸಿದರು. ಅವರಿಗೆ ತೀರ್ಥ ಪ್ರಸಾದವನ್ನು ನೀಡಿದರು. ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ತಿಲಕ್ ವರ್ಮಾ ಸಹ ಮಂಗಳವಾರ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ನಡೆಸಿದರು.

ತಿಲಕ್ ವರ್ಮಾ ಟಿ20 ವಿಶ್ವಕಪ್ಗೂ ಮುನ್ನ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿದ್ದು, ವಿಶೇಷವಾಗಿತ್ತು. ಇವರಿಗೆ ಈ ದೇವಾಲಯ ನೆಮ್ಮದಿ ಹಾಗೂ ಕೀರ್ತಿ ತರುತ್ತದೆ ಎಂಬ ವಿಶ್ವಾಸ. ತಿಲಕ್ ಅವರು ಏಷ್ಯಾ ಕಪ್ ಟಿ20 ಟೂರ್ನಿಗೂ ಮುನ್ನ ಇದೇ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ತಿಲಕ್ ಪಾಕ್ ವಿರುದ್ಧ 69 ರನ್ಗಳ ಅಮೋಘ ಇನಿಂಗ್ಸ್ ಕಟ್ಟಿ ಭಾರತದ ಜಯದಲ್ಲಿ ಮಿಂಚಿದ್ದರು.
ಸೂರ್ಯುಕುಮಾರ್ ಇತ್ತೀಚಿಗೆ ಭಾರತದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬ್ಯಾಟ್ ಮಾಡಿದ್ದರು. ಈ ಸರಣಿಯನ್ನು ಭಾರತ 3-1ರಿಂದ ಗೆದ್ದು ಕೊಂಡಿತ್ತು. ಇವರು ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇದಕ್ಕೂ ಮೊದಲು ಇವರು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಟಿ20 ಸರಣಿಯನ್ನು ಆಡಲಿದ್ದಾರೆ. ಈ ಸರಣಿ ಟಿ20 ವಿಶ್ವಕಪ್ಗೆ ಪೂರ್ವಭಾವಿ ಸಿದ್ಧತೆಯಂತೆ ಕಾಣಿಸಿಕೊಂಡಿದೆ. ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಆರಂಭವಾಗಲಿದೆ.
ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಭಾರತ, ದಕ್ಷಿಣ ಆಫ್ರಿಕಾವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಸೂರ್ಯಪಡೆ ಪ್ಲ್ಯಾನ್ ಮಾಡಿಕೊಂಡಿದೆ.
ಟಿ20 ವಿಶ್ವಕಪ್ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪ ನಾಯಕ), ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್.