ಭಾರತ ಟಿ20 ತಂಡ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ನಾಯಕನಾಗಿ ಸೂರ್ಯಕುಮಾರ್ ಯಾದವ್ ಸತತ ಮೂರು ಟಿ20 ಸರಣಿಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ 3-1 ಅಂತರದಲ್ಲಿ ಟಿ20 ಸರಣಿಯನ್ನು ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಗೆದ್ದು ಬೀಗಿತ್ತು. ಈ ಸರಣಿಯ ನಂತರ ಇದೀಗ ಸೂರ್ಯಕುಮಾರ್ ಸೈಯದ್ ಮುಷ್ತಾಕ್ ಆಲಿ ಟಿ20 ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಮಂಗಳವಾರ ಡಿಸೆಂಬರ್ 3 ರಂದು ಸೈಯದ್ ಮುಷ್ತಾಕ್ ಆಲಿ ಟಿ20 ಟೂರ್ನಿಯ ಪಂದ್ಯದಲ್ಲಿ ಆಂಧ್ರಪ್ರದೇಶ ಮತ್ತು ಮುಂಬೈ ಮುಖಾಮುಖಿಯಾಗುತ್ತಿವೆ. ಇದೇ ಪಂದ್ಯದಲ್ಲಿ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮುಂಬೈ ತಂಡದ ಪರ ಆಡಲಿದ್ದಾರೆ. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಅಬ್ಬರವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೂರ್ಯಕುಮಾರ್ ಎರಡು ವಾರಗಳ ಕಾಲ ಕ್ರಿಕೆಟ್ನಿಂದ ವಿರಾಮ ಪಡೆದಿದ್ದರು. ಇದೀಗ ಸೈಯದ್ ಮುಷ್ತಾಕ್ ಆಲಿ ಟಿ20 ಟೂರ್ನಿಯಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.

ಸೈಯದ್ ಮುಷ್ತಾಕ್ ಆಲಿ ಟಿ20 ಟೂರ್ನಿಯಲ್ಲಿ ಮುಂಬೈ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಈ ಹಿಂದಿನಂತೆ ಸೂರ್ಯಕುಮಾರ್ ಯಾದವ್ ಅವರು ಕೇವಲ ಆಟಗಾರನಾಗಿ ಮುಂಬೈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇ ಗುಂಪಿನಲ್ಲಿರುವ ಮುಂಬೈ ತಂಡ ಆಡಿದ 4 ಪಂದ್ಯಗಳಲ್ಲಿ 3 ರಲ್ಲಿ ಗೆಲುವು, 1 ರಲ್ಲಿ ಸೋಲು ಕಂಡಿದ್ದು, ಮೂರನೇ ಸ್ಥಾನದಲ್ಲಿದೆ.
ಇದುವರೆಗೆ ಸೂರ್ಯಕುಮಾರ್ ಆಡಿರುವ 84 ಪ್ರಥಮ ದರ್ಜೆ ಪಂದ್ಯಗಳ 140 ಇನ್ನಿಂಗ್ಸ್ಗಳಲ್ಲಿ 42.84 ಸರಾಸರಿಯಲ್ಲಿ 5656 ರನ್ ಗಳಿಸಿದ್ದಾರೆ. ಈ ವೇಳೆ 14 ಶತಕಗಳು ಮತ್ತು 29 ಅರ್ಧ ಶತಕಗಳನ್ನು ಬಾರಿಸಿದ್ದಾರೆ.ದೇಶೀಯ ಕ್ರಿಕೆಟ್ನಲ್ಲಿ 200 ರನ್ ಸೂರ್ಯಕುಮಾರ್ ಗರಿಷ್ಠ ಸ್ಕೋರ್ ಆಗಿದೆ. 2014-15ರ ರಣಜಿ ಟ್ರೋಫಿ ಆವೃತ್ತಿಯಲ್ಲಿ ಮುಂಬೈ ತಂಡಕ್ಕೆ ಸೂರ್ಯಕುಮಾರ್ ಅಲ್ಪಾವಧಿಗೆ ನಾಯಕತ್ವ ವಹಿಸಿದ್ದರು. ಈ ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ 690 ರನ್ ಕಲೆ ಹಾಕಿದ್ದರು. ಅವರು 2015-16 ರ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದ ಮುಂಬೈ ತಂಡದ ಭಾಗವಾಗಿದ್ದರು.