IND vs AUS: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೂ ಮುನ್ನ ಭಾರತ ತಂಡಕ್ಕೆ ಖಡಕ್ ಸೂಚನೆ ನೀಡಿದ ಸೂರ್ಯಕುಮಾರ್!
ಗುರುವಾರ, ನವೆಂಬರ್ 23ರಂದು ವಿಶಾಖಪಟ್ಟಣದ ವೈಎಸ್ ರಾಜಶೇಖರ್ ರೆಡ್ಡಿ ಸ್ಟೇಡಿಯಂನಲ್ಲಿ ಆರಂಭವಾಗುವ ಐದು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.
ಇದೇ ವೇಳೆ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ ನಿರ್ಭೀತ ಕ್ರಿಕೆಟ್ ಆಡುವಂತೆ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ಸೂಚಿಸಿದ್ದಾರೆ.

ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವ ಸೂರ್ಯಕುಮಾರ್ ಯಾದವ್ ಈ ಟಿ20 ಸರಣಿಯ ಮಹತ್ವದ ಬಗ್ಗೆ ಮಾತನಾಡಿದರು.
ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ (ಯುಎಸ್ಎ) ನಡೆಯಲಿರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಗಮನದಲ್ಲಿಟ್ಟುಕೊಂಡು ಯುವ ತಂಡವನ್ನು ಕಟ್ಟುವ ಬಗ್ಗೆ ಬಿಸಿಸಿಐ ಚಿಂತಿಸುತ್ತಿದೆ.
ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ನಲ್ಲಿ ಆಡುವ ಮೂಲಕ ಒತ್ತಡವನ್ನು ನಿಭಾಯಿಸಿರುವ ಆಟಗಾರರು ತಮ್ಮ ಸಹಜ ಆಟಕ್ಕೆ ಹೆಜ್ಜೆ ಹಾಕಲು ಒಗ್ಗಿಕೊಂಡಿದ್ದಾರೆ ಎಂದು ಸೂರ್ಯಕುಮಾರ್ ಯಾದವ್ ಸಮರ್ಥಿಸಿಕೊಂಡರು.
"ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಗಮನದಲ್ಲಿಟ್ಟುಕೊಂಡು, ಅಲ್ಲಿಯವರೆಗೆ ನಾವು ಆಡಲಿರುವ ಪಂದ್ಯಗಳು ಬಹಳ ಮುಖ್ಯವಾಗಿವೆ. ತಂಡದ ಆಟಗಾರರಿಗೆ ನನ್ನ ಸಂದೇಶವು ತುಂಬಾ ಸ್ಪಷ್ಟವಾಗಿದೆ, ನಿರ್ಭೀತರಾಗಿರಿ ಮತ್ತು ತಂಡಕ್ಕೆ ಸಹಾಯ ಮಾಡಲು ಏನು ಬೇಕಾದರೂ ಮಾಡಿ. ಐಪಿಎಲ್ನಲ್ಲಿ ಅದನ್ನು ಈಗಾಗಲೇ ಮಾಡುತ್ತಿದ್ದಾರೆ, ಆಟಗಾರರು ಇತ್ತೀಚೆಗೆ ಸಾಕಷ್ಟು ದೇಶೀಯ ಕ್ರಿಕೆಟ್ನಲ್ಲಿಯೂ ಆಡಿದ್ದಾರೆ," ಎಂದು ಸೂರ್ಯಕುಮಾರ್ ಯಾದವ್ ಮೊದಲ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

"ಹೀಗಾಗಿ, ಭಾರತೀಯ ಯುವ ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದಾರೆ. ಅದನ್ನು ನಾನು ನಮ್ಮ ತಂಡದ ಸಿಬ್ಬಂದಿಯಿಂದ ಕೇಳಿದ್ದೇನೆ. ನಾನು ಅವರಿಗೆ ಒಂದೇ ಒಂದು ವಿಷಯವನ್ನು ಹೇಳಿದ್ದೇನೆ, ಮಧ್ಯದಲ್ಲಿ ನಿಮ್ಮ ಸಮಯವನ್ನು ಆನಂದಿಸಿ, ಅದೇ ಕೆಲಸವನ್ನು ಮಾಡಿ ಮತ್ತು ಬೇರೆ ಏನನ್ನೂ ಮಾಡಬೇಡಿ. ದಿನದ ಕೊನೆಯಲ್ಲಿ ಇದು ಕೇವಲ ಕ್ರಿಕೆಟ್ ಆಟವಾಗಿದೆ," ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದರು.
ಇನ್ನು ಎಂಎಸ್ ಧೋನಿ, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಹಾರ್ದಿಕ್ ಪಾಂಡ್ಯ, ಸುರೇಶ್ ರೈನಾ, ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್, ರಿಷಭ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ನಂತರ ಭಾರತ ತಂಡವನ್ನು ಮುನ್ನಡೆಸುವ 13ನೇ ಆಟಗಾರನಾಗಲು ಸೂರ್ಯಕುಮಾರ್ ಯಾದವ್ ಕೂಡ ಸಿದ್ಧರಾಗಿದ್ದಾರೆ.
ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಇತ್ತೀಚೆಗೆ 2023ರ ವಿಶ್ವಕಪ್ನಲ್ಲಿ ಆಡಿದರು. ತವರಿನಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿತು. ಆದರೆ, ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್-ಅಪ್ ಆಗಿ ಅಭಿಯಾನ ಕೊನೆಗೊಳಿಸಿತು.
ನಾಯಕನಾಗಿ ಸೂರ್ಯಕುಮಾರ್ ಮೊದಲ ಪತ್ರಿಕಾಗೋಷ್ಠಿಗೆ ಕೇವಲ ಇಬ್ಬರು ಪತ್ರಕರ್ತರು
ಇನ್ನು ವಿಶಾಖಪಟ್ಟಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯಕ್ಕೂ ಮುನ್ನ ಮಾಧ್ಯಮ ಸಂವಾದಕ್ಕೆ ಕೇವಲ ಇಬ್ಬರು ಪತ್ರಕರ್ತರು ಬಂದಿದ್ದರಿಂದ, ಟೀಮ್ ಇಂಡಿಯಾ ನಾಯಕನಾಗಿ ಸೂರ್ಯಕುಮಾರ್ ಯಾದವ್ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ನೀರಸ ಸ್ವಾಗತ ಪಡೆದರು.
ಹಿರಿಯ ಕ್ರಿಕೆಟ್ ಪತ್ರಕರ್ತ ವಿಮಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಿಂದ ಆಘಾತಕಾರಿ ವಿವರಗಳನ್ನು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡರು.
"ಭಾರತದಲ್ಲಿ ನಡೆದ ವಿಶ್ವಕಪ್ ಸಮಯದಲ್ಲಿ ಹಾಜರಿದ್ದ 200ಕ್ಕೂ ಮಾಧ್ಯಮಗಳ ಪೈಕಿ ಸೂರ್ಯಕುಮಾರ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ಕೇವಲ ಇಬ್ಬರು ಪತ್ರಕರ್ತರು ಭಾಗವಹಿಸಿದ್ದು, ದಿಗ್ಭ್ರಮೆಗೊಳಿಸುವಂತಿದೆ. ಸೂರ್ಯಕುಮಾರ್ ನಾಯಕನಾಗಿ ತನ್ನ ಮೊದಲ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಊಹಿಸಿರಲಿಲ್ಲ. ಇದು ಭಾರತದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಡಿಮೆ ಹಾಜರಾತಿ ಹೊಂದಿರುವ ದಾಖಲೆಯಾಗಿದೆಯೇ? ನಾನು ಹಾಗೆ ಕಲ್ಪಿಸಿಕೊಳ್ಳುತ್ತೇನೆ,"ಎಂದು ವಿಮಲ್ ಕುಮಾರ್ ಬರೆದುಕೊಂಡಿದ್ದಾರೆ.
"ನೀವು ಪ್ರಯಾಣವನ್ನು ಹಿಂತಿರುಗಿ ನೋಡಿದಾಗ, ನಿಸ್ಸಂಶಯವಾಗಿ ನಮಗೆ ಈ ವಿಶ್ವಕಪ್ ಸ್ವಲ್ಪ ನಿರಾಶಾದಾಯಕವಾಗಿದೆ. ಇದು ನಿಜವಾಗಿಯೂ ಉತ್ತಮ ಪ್ರಚಾರವಾಗಿತ್ತು. ನಾವು ಮೈದಾನದಲ್ಲಿ ನಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ರೀತಿಗೆ ಪ್ರತಿಯೊಬ್ಬ ಸದಸ್ಯರು, ಆಟಗಾರರು ಮಾತ್ರವಲ್ಲದೆ, ಇಡೀ ಭಾರತ ಹೆಮ್ಮೆಪಡುತ್ತಾರೆ,'' ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.
ವಿಶ್ವಕಪ್ ಪಂದ್ಯಾವಳಿಯುದ್ದಕ್ಕೂ ನಾವು ಆಡಿದ ಕ್ರಿಕೆಟ್ ಬ್ರಾಂಡ್ನ ಧನಾತ್ಮಕವಾಗಿತ್ತು ಮತ್ತು ನಾವು ಅದರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದರು.
"ಇದನ್ನು ಅರಗಿಸಿಕೊಳ್ಳುವುದು ಕಷ್ಟ. ಇದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ನೀವು ಮರುದಿನ ಬೆಳಿಗ್ಗೆ ಎದ್ದು, ಹಿಂದಿನ ದಿನ ಸಂಭವಿಸಿದ ಎಲ್ಲವನ್ನೂ ಮರೆತುಬಿಡುವುದು ಸಾಧ್ಯವಿಲ್ಲ. ಅದೊಂದು ಸುದೀರ್ಘ ಟೂರ್ನಿಯಾಗಿತ್ತು. ನಿಸ್ಸಂಶಯವಾಗಿ, ನಾವು ಗೆಲ್ಲಲು ಇಷ್ಟಪಡುತ್ತಿದ್ದೆವು. ಆದರೆ ನೀವು ಸುರಂಗದ ಕೊನೆಯಲ್ಲಿ ಬೆಳಕನ್ನು ನೋಡಬೇಕು. ನೀವು ಮರೆತು ಮುಂದುವರಿಯಬೇಕು," ಎಂದು ಸೂರ್ಯಕುಮಾರ್ ಯಾದವ್ ವಿವರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications