ಏಪ್ರಿಲ್ 22 ರಂದು ಪಹಲ್ಗಾಮ್ ದಾಳಿಯ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಕಂಡು ಬಂದಿತ್ತು. ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ನಡೆಯಬೇಕಾ ಎಂಬ ಚರ್ಚೆ ಸಹ ಆರಂಭವಾಗಿತ್ತು. ಆದರೆ ದುಬೈನಲ್ಲಿ ಭಾನುವಾರ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಭಾರತ ಹಾಗೂ ಪಾಕ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ನಿರೀಕ್ಷೆಯಂತೆ ಟೀಮ್ ಇಂಡಿಯಾ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.
128 ರನ್ಗಳ ಸಾಧಾರಣ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಆರಂಭ ಭರ್ಜರಿಯಾಗಿತ್ತು. ಶುಭಮನ್ ಗಿಲ್ 10 ರನ್ಗೆ ಪೆವಿಲಿಯನ್ ಸೇರಿದರೆ, ಆರಂಭಿಕ ಅಭಿಷೇಕ್ ಶರ್ಮಾ ಮೈಚಳಿ ಬಿಟ್ಟು ಆಡಿದರು. ತಾವು ಎದುರಿಸಿದ ಮೊದಲ ಎಸೆತದಿಂದಲೇ ಅಗ್ರೇಷನ್ ತೋರಿಸಿದ ಅಭಿಷೇಕ್ ಶರ್ಮಾ ಅಬ್ಬರಿಸಿದರು. ಇವರು 2 ಸಿಕ್ಸರ್, 4 ಬೌಂಡರಿ ಸಹಾಯದಿಂದ 13 ಎಸೆತಗಳಲ್ಲಿ 31 ರನ್ ಬಾರಿಸಿದರು. ಈ ವೇಳೆ ಇವರ ಸ್ಟ್ರೈಕ್ ರೇಟ್ 238 ಆಗಿತ್ತು.

ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಸಮಯೋಚಿತ ಆಟವನ್ನು ಆಡಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 31 ರನ್ ಬಾರಿಸಿ ಔಟ್ ಆದರು. ಸುರ್ಯಕುಮಾರ್ ಯಾದವ್ ತಮ್ಮ ಜವಾಬ್ದಾರಿಯನ್ನು ಅರಿತು ಆಡಿದರು. ಇವರು 37 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 47 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಟೀಮ್ ಇಂಡಿಯಾ ಪಾಕ್ ವಿರುದ್ಧ ಭರ್ಜರಿ ಜಯ ಸಾಧಿಸಿದಲ್ಲಿ ಈ ಮೂವರು ಆಟಗಾರರು ಎದ್ದು ಕಾಣುತ್ತಾರೆ. ಆದರೆ ಅಸಲಿ ಹೀರೋ ಇವರಲ್ಲ.
ಟೀಮ್ ಇಂಡಿಯಾದ ಗೆಲುವಿನ ಅಸಲಿ ಹೀರೋ ರಿಸ್ಟ್ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್. ಕುಲ್ದೀಪ್ ಯಾದವ್ ಪಾಕ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿ ಕಾಡಿದರು. ಇವರ ರಾಂಗ್ ಒನ್, ಗೂಗ್ಲಿಗಳನ್ನು ಗುರುತಿಸುವಲ್ಲಿ ಪಾಕ್ ಬ್ಯಾಟರ್ಗಳು ವಿಫಲರಾದರು. ಇವರು 4 ಓವರ್ ಬೌಲಿಂಗ್ ನಡೆಸಿ 4.50ರ ಎಕಾನಮಿಯಲ್ಲಿ 18 ರನ್ ನೀಡಿ 3 ಅಮೂಲ್ಯ ವಿಕೆಟ್ ಕಬಳಿಸಿದರು.
ಕುಲ್ದೀಪ್ ಯಾದವ್ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಸದ್ಯ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಇವರಿಗೆ ಅಗ್ರ ಸ್ಥಾನ. ಕುಲ್ದೀಪ್ ಏಷ್ಯಾ ಕಪ್ ಟಿ20 ಕ್ರಿಕೆಟ್ನಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿದರು. ಇವರು ಆಡಿದ ಮೊದಲೆರೆಡು ಪಂದ್ಯಗಳಲ್ಲಿ 3ಕ್ಕೂ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಆಗಿದ್ದಾರೆ. ಕುಲ್ದೀಪ್ ಯುಎಇ ವಿರುದ್ಧ 4 ವಿಕೆಟ್ ಕಬಳಿಸಿದ್ದರು.