ಚಿಕ್ಕಬಳ್ಳಾಪುರ, ಜನವರಿ 18: ಮಾನವ ಸೇವಾ ಸ್ಫೂರ್ತಿಯನ್ನು ಉತ್ತುಂಗಕ್ಕೇರಿಸುವ ಸದುದ್ದೇಶದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಕ್ರೀಡಾಂಗಣದಲ್ಲಿ ಗುರುವಾರ, ಜನವರಿ 18ರಂದು ಟಿ20 ಕ್ರಿಕೆಟ್ ಪಂದ್ಯ ಆಯೋಜಿಸಲಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ನ ಮಾಜಿ ದಿಗ್ಗಜರ ಸಮಾಗಮ ನಡೆಯಲಿದೆ.
ಸತ್ಯಸಾಯಿ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಅಂತಾರಾಷ್ಟ್ರೀಯ ಮಟ್ಟದ ಸಾಯಿಕೃಷ್ಣನ್ ಕ್ರಿಕೆಟ್ ಸ್ಟೇಡಿಯಂನಲ್ಲಿ (Saikrishnan Cricket Stadium) ಗುರುವಾರ (ಜನವರಿ 18) ಟಿ20 ಕ್ರಿಕೆಟ್ (T20 Cricket) ಟೂರ್ನಿಯನ್ನು ಆಯೋಜನೆ ಮಾಡಲಾಗಿದೆ.


ಅಲ್ಲದೆ, ಈ ಪಂದ್ಯಾವಳಿಯಲ್ಲಿ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್, ಚಮಿಂಡಾ ವಾಸ್ ಸೇರಿದಂತೆ 24 ಮಂದಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರರು ಭಾಗವಹಿಸಲಿದ್ದಾರೆ.

ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರದ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ ಭಾಗವಹಿಸಲಿದ್ದಾರೆ. ವಸುದೈವ ಕುಟುಂಬಕಂ ಸಂದೇಶ ಸಾರುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕ್ರಿಕೆಟ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ನಾಯಕತ್ವದ ಎರಡು ತಂಡಗಳ ನಡುವೆ ಹೋರಾಟ ನಡೆಯಲಿದೆ.
ಸ್ಪಿನ್ನರ್ಗಳಾದ ಹರ್ಭಜನ್ ಸಿಂಗ್, ಮುತ್ತಯ್ಯ ಮುರಳೀಧರನ್, ವೇಗಿಗಳಾದ ಇರ್ಫಾನ್ ಪಠಾಣ್, ಚಮಿಂಡಾ ವಾಸ್, ಆರ್.ಪಿ ಸಿಂಗ್ ಅಲ್ಲದೆ ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್, ಡ್ಯಾನಿ ಮಾರಿಸನ್, ವೆಂಕಟೇಶ್ ಪ್ರಸಾದ್ ಸೇರಿ 7 ದೇಶಗಳ ಆಟಗಾರರು ಪಾಲ್ಗೊಳ್ಳಲಿದ್ದಾರೆ.
ಒಂದು ಜಗತ್ತು - ಒಂದು ಕುಟುಂಬ ಸಂದೇಶ ಬೆಂಬಲಿಸಿ 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಕೆಲವು ಆಟಗಾರರು ಆಗಮಿಸುತ್ತಿರುವುದು ವಿಶೇಷವಾಗಿದೆ.