2024ರ ಐಸಿಸಿ ಟಿ20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಅಫ್ಘಾನಿಸ್ತಾನ ತಂಡವು ಐತಿಹಾಸಿಕವಾಗಿ ಚೊಚ್ಚಲ ಬಾರಿಗೆ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದೆ.
ಮಂಗಳವಾರ, ಜೂನ್ 25ರಂದು ಬಾಂಗ್ಲಾದೇಶ ತಂಡವನ್ನು 8 ರನ್ಗಳಿಂದ ಸೋಲಿಸುವ ಮೂಲಕ ಕನಸಿನ ಸೆಮಿಫೈನಲ್ಗೆ ಮುನ್ನಡೆದರೆ, 2021ರ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಸೆಮಿಫೈನಲ್ ಆಸೆಯನ್ನು ಚಿವುಟಿ ಹಾಕಿತು.

ಈ ಅದ್ಭುತ ಸಾಧನೆಯನ್ನು ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಸಂಭ್ರಮಿಸಿದರು ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಲೆಜೆಂಡ್ ಬ್ರಿಯಾನ್ ಲಾರಾ ಅವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದರು.
2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಮೊದಲು, ನಾಲ್ಕು ಸೆಮಿಫೈನಲಿಸ್ಟ್ಗಳ ಭವಿಷ್ಯ ನುಡಿಯುವ ಕ್ರಿಕೆಟ್ ತಜ್ಞರ ಅಭಿಪ್ರಾಯಗಳ ವಿಡಿಯೋವನ್ನು ಸ್ಟಾರ್ ಸ್ಪೋರ್ಟ್ಸ್ ಹಂಚಿಕೊಂಡಿದೆ.
ಸುನಿಲ್ ಗವಾಸ್ಕರ್ ಮತ್ತು ಆರೋನ್ ಫಿಂಚ್ ಅವರಂತಹ ದಿಗ್ಗಜರು ಸ್ಥಾಪಿತ ಬಲಿಷ್ಠ ತಂಡಗಳನ್ನು ಆರಿಸಿಕೊಂಡರೆ, ಬ್ರಿಯಾನ್ ಲಾರಾ ಮಾತ್ರ ತನ್ನ ನಂಬಿಕೆಯಲ್ಲಿ ಏಕಾಂಗಿಯಾಗಿ ಅಫ್ಘಾನಿಸ್ತಾನ ತಂಡವನ್ನು ಸೆಮಿಫೈನಲಿಸ್ಟ್ ಆಗಿ ಆಯ್ಕೆ ಮಾಡಿದ್ದರು. ಇದೀಗ ಅಫ್ಘಾನಿಸ್ತಾನ ತಂಡವು ಕನಸಿನ ಸೆಮಿಫೈನಲ್ಗೆ ಎಂಟ್ರಿ ಪಡೆಯುವ ಮೂಲಕ ಬ್ರಿಯಾನ್ ಲಾರಾ ಅವರ ನಂಬಿಕೆಯನ್ನು ಸಮರ್ಥಿಸಿಕೊಂಡಿದೆ.

'ಇದು ಕನಸಿನಂತೆ' ಎಂದು ಪಂದ್ಯದ ನಂತರ ಭಾವುಕರಾಗಿ ರಶೀದ್ ಖಾನ್ ಹೇಳಿದರು. ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಗೆಲುವಿನೊಂದಿಗೆ ಪ್ರಾರಂಭವಾದ ಅಫ್ಘಾನಿಸ್ತಾನ ತಂಡದ ಗೆಲುವಿನ ಆವೇಗವು ಉಳಿಸಿಕೊಳ್ಳಲು ಸಹಾಯ ಮಾಡಿತು.
ಲೆಜೆಂಡರಿ ಕ್ರಿಕೆಟಿಗ ಬ್ರಿಯಾನ್ ಲಾರಾ ಅವರ ದೂರದೃಷ್ಟಿಯನ್ನು ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಒಪ್ಪಿಕೊಂಡರು. "ನಮ್ಮನ್ನು ಸೆಮಿಫೈನಲ್ಗೆ ಸೇರಿಸಿದ ಏಕೈಕ ವ್ಯಕ್ತಿ ಬ್ರಿಯಾನ್ ಲಾರಾ ಮತ್ತು ನಾವು ಅವರನ್ನು ಸರಿ ಎಂದು ಸಾಬೀತುಪಡಿಸಿದ್ದೇವೆ. ನಾವು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ," ಎಂದರು.
ಡಿಎಲ್ಎಸ್ ವಿಧಾನದ ಮೂಲಕ ಬಾಂಗ್ಲಾದೇಶ ತಂಡವನ್ನು 8 ರನ್ಗಳಿಂದ ಸೋಲಿಸಿದ ಅಫ್ಘಾನಿಸ್ತಾನ ತಂಡ ಐತಿಹಾಸಿಕವಾಗಿ ಮೊದಲ ಬಾರಿಗೆ ಸೆಮಿಫೈನಲ್ಗೆ ಮುನ್ನಡೆಯಿತು. ಪಂದ್ಯದ ಇಡೀ ತಂಡವು ಎಷ್ಟು ಭಾವಪರವಶವಾಗಿದೆ ಮತ್ತು ಅದು ತಮಗೆ ಹೇಗೆ ಕನಸು ನನಸಾಗಿದೆ ಎಂಬುದನ್ನು ರಶೀದ್ ಖಾನ್ ಬಹಿರಂಗಪಡಿಸಿದರು.
"ನಮಗೆ ಸೆಮಿಫೈನಲ್ಗೆ ಬರುವುದು ಕನಸಾಗಿದೆ. ನಾವು ಪಂದ್ಯಾವಳಿಯನ್ನು ಪ್ರಾರಂಭಿಸಿದ ರೀತಿ ನೋಡಿದರೆ, ನಾವು ನ್ಯೂಜಿಲೆಂಡ್ ತಂಡವನ್ನು ಸೋಲಿಸಿದಾಗ ನಂಬಿಕೆ ಬಂದಿತು. ನಾವು 130-135 ಉತ್ತಮ ಸ್ಕೋರ್ ಎಂದು ಭಾವಿಸಿದ್ದೇವು, ಆದರೆ ನಾವು 15 ರನ್ಗಳಿಂದ ಹಿಂದೆ ಬಿದ್ದಿದ್ದೇವೆ," ಎಂದರು.
"ಬಾಂಗ್ಲಾದೇಶ ನಮ್ಮ ವಿರುದ್ಧ ಕಠಿಣವಾಗಿ ಆಡುತ್ತಾರೆ ಎಂದು ನಮಗೆ ತಿಳಿದಿತ್ತು ಮತ್ತು ಅದರ ಲಾಭವನ್ನು ನಾವು ಪಡೆಯಬಹುದು ಎಂದು ನಮಗೆ ತಿಳಿದಿತ್ತು. ನಾವು ಹೆಚ್ಚುವರಿ ಏನನ್ನೂ ಮಾಡಬೇಕಾಗಿಲ್ಲ, ನಮ್ಮ ಯೋಜನೆಗಳಲ್ಲಿ ಸ್ಪಷ್ಟವಾಗಿರಬೇಕು. ತವರಿಗೆ ಮರಳಿದ ನಂತರ ಜನರನ್ನು ಸಂತೋಷಪಡಿಸಲು ನಾವು ಬಯಸಿದ್ದೇವೆ. ಅದು ನಾವು ನಡೆಸಿದ ಚರ್ಚೆ ಮತ್ತು ಎಲ್ಲರೂ ಅದ್ಭುತವಾದ ಕೆಲಸ ಮಾಡಿದರು," ಎಂದು ರಶೀದ್ ಖಾನ್ ತಿಳಿಸಿದರು.