
ಕ್ರಿಕೆಟ್ ಜಂಟಲ್ ಮೆನ್ ಗೇಮ್ ಎಂದೇ ಖ್ಯಾತಿಯನ್ನು ಪಡೆದಿರುವಂತ ಕ್ರೀಡೆಯಾಗಿದೆ. ಮೈದಾನದಲ್ಲಿ ಆಟವಾಡುವ ಸಂದರ್ಭದಲ್ಲಿ ಎಷ್ಟೇ ಜಿದ್ದಾಜಿದ್ದಿ ಏರ್ಪಟ್ಟರೂ ಪಂದ್ಯ ಮುಗಿದ ನಂತರ ವಿವಿಧ ತಂಡದ ಆಟಗಾರರು ಪರಸ್ಪರ ಸ್ನೇಹ ವಿನಿಮಯ ಮಾಡಿಕೊಳ್ಳುವುದರ ಮೂಲಕ ಕ್ರೀಡಾಸ್ಫೂರ್ತಿಯನ್ನು ಮೆರೆಯುತ್ತಾರೆ. ಈ ಹಿಂದೆ ಸಾಕಷ್ಟು ಪಂದ್ಯಗಳ ನಂತರ ಕಣಕ್ಕಿಳಿದ ಇತ್ತಂಡಗಳ ಆಟಗಾರರು ಪರಸ್ಪರ ಭೇಟಿ ಮಾಡಿ ಆಟದ ಕುರಿತು ತಮಗಿರುವ ಜ್ಞಾನವನ್ನು ಇತರ ಆಟಗಾರರೊಂದಿಗೆ ಹಂಚಿಕೊಳ್ಳುವುದನ್ನು ನಾವೆಲ್ಲರೂ ನೋಡಿರುತ್ತೇವೆ.
ಅದೇ ರೀತಿ ಟೀಮ್ ಇಂಡಿಯಾ ಡ್ರೆಸಿಂಗ್ ರೂಮ್ ಪ್ರವೇಶಿಸಲು ಸ್ಕಾಟ್ಲೆಂಡ್ ತಂಡದ ಆಟಗಾರರು ಇಚ್ಛಿಸಿದ್ದರು. ಹೌದು, ನವೆಂಬರ್ 5ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 37ನೇ ಪಂದ್ಯದಲ್ಲಿ ಭಾರತ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 8 ವಿಕೆಟ್ಗಳ ಅಮೋಘ ಜಯವನ್ನು ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸುವ ತನ್ನ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.
ಹೀಗೆ ಭಾರತ ಮತ್ತು ಸ್ಕಾಟ್ಲೆಂಡ್ ನಡುವಿನ ಪಂದ್ಯ ಮುಗಿದ ನಂತರ ಸ್ಕಾಟ್ಲೆಂಡ್ ತಂಡದ ಎಲ್ಲ ಆಟಗಾರರು ಟೀಮ್ ಇಂಡಿಯಾ ಡ್ರೆಸಿಂಗ್ ರೂಮ್ ಪ್ರವೇಶಿಸಲು ಇಚ್ಛೆ ಪಟ್ಟಿದ್ದರು. ಸ್ಕಾಟ್ಲೆಂಡ್ ಆಟಗಾರರ ಈ ಆಸೆಗೆ ಒಪ್ಪಿಗೆ ನೀಡಿದ ಟೀಮ್ ಇಂಡಿಯಾ ಸ್ಕಾಟ್ಲೆಂಡ್ ಕ್ರಿಕೆಟಿಗರನ್ನು ತಮ್ಮ ಡ್ರೆಸ್ಸಿಂಗ್ ರೂಮ್ ಒಳಗೆ ಬರಮಾಡಿಕೊಂಡಿದೆ. ಹೀಗೆ ಡ್ರೆಸ್ಸಿಂಗ್ ರೂಮ್ ಪ್ರವೇಶಿಸಿದ ಸ್ಕಾಟ್ಲೆಂಡ್ ಆಟಗಾರರ ಜೊತೆ ಟೀಮ್ ಇಂಡಿಯಾದ ಆಟಗಾರರಾದ ಕೆ ಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಕುರಿತಾಗಿ ಸಾಕಷ್ಟು ಚರ್ಚೆಗಳನ್ನು ನಡೆಸಿ ಆಟದ ಕುರಿತ ಕೆಲ ಸಲಹೆಗಳನ್ನು ನೀಡಿದ್ದಾರೆ.
ಇದೇ ಸಮಯದಲ್ಲಿ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮಾರ್ಗದರ್ಶಕನಾಗಿರುವ ಎಂಎಸ್ ಧೋನಿ ಕೂಡ ಸ್ಕಾಟ್ಲೆಂಡ್ ಆಟಗಾರರ ಜೊತೆ ಮಾತನಾಡಿ ಕೆಲ ಕ್ರಿಕೆಟ್ ಟಿಪ್ಸ್ ನೀಡಿದ್ದಾರೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿರುವ ವಿಕ್ರಂ ರಾಥೋರ್ ಕೂಡಾ ಸ್ಕಾಟ್ಲೆಂಡ್ ತಂಡದ ಅಧಿಕಾರಿಯೋರ್ವರ ಜೊತೆ ಈ ವೇಳೆ ಚರ್ಚೆಯನ್ನು ನಡೆಸಿದ್ದಾರೆ. ಹೀಗೆ ಸ್ಕಾಟ್ಲೆಂಡ್ ತಂಡದ ಆಟಗಾರರು ಟೀಮ್ ಇಂಡಿಯಾ ಡ್ರೆಸಿಂಗ್ ರೂಮ್ ಪ್ರವೇಶಿಸಿದ ಮತ್ತು ಟೀಮ್ ಇಂಡಿಯಾ ಆಟಗಾರರ ಜೊತೆ ಮಾತುಕತೆ ನಡೆಸಿದ ವಿಡಿಯೋ ಒಂದನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
"ನೀವು ಇದನ್ನು ನೋಡಲೇಬೇಕು, ಕ್ರಿಕೆಟ್ನ ಉತ್ಸಾಹವೆಂದರೆ ಇದು. ಪಂದ್ಯ ಮುಗಿದ ನಂತರ ಸ್ಕಾಟ್ಲೆಂಡ್ ತಂಡದ ಆಟಗಾರರು ಟೀಮ್ ಇಂಡಿಯಾ ಡ್ರೆಸಿಂಗ್ ರೂಮ್ ಪ್ರವೇಶಿಸಲು ಇಚ್ಛಿಸಿದ್ದರು ಮತ್ತು ಅದಕ್ಕೆ ಟೀಮ್ ಇಂಡಿಯಾ ಆಟಗಾರರು ಕೂಡ ಒಪ್ಪಿಗೆಯನ್ನು ಸೂಚಿಸಿದರು. ಹಾಗೂ ಡ್ರೆಸಿಂಗ್ ರೂಮ್ ಪ್ರವೇಶಿಸಿದ ಸ್ಕಾಟ್ಲೆಂಡ್ ತಂಡದ ಆಟಗಾರರಿಗೆ ಟೀಮ್ ಇಂಡಿಯಾ ಆಟಗಾರರು ತಮ್ಮ ಮನೆಯ ವಾತಾವರಣವನ್ನು ಸೃಷ್ಟಿಯಾಗುವಂತೆ ಮಾಡಿದರು" ಎಂದು ಬಿಸಿಸಿಐ ಈ ವಿಡಿಯೋ ಟ್ವೀಟ್ ಮಾಡುವುದರ ಜತೆಗೆ ಬರೆದುಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿ ತಂಡವಾದ ಸ್ಕಾಟ್ಲೆಂಡ್ಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿದರು. ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಸ್ಕಾಟ್ಲೆಂಡ್ ಬ್ಯಾಟ್ಸ್ಮನ್ಗಳು ಟೀಮ್ ಇಂಡಿಯಾ ಬೌಲರ್ಗಳ ದಾಳಿಗೆ ತತ್ತರಿಸಿ ಪೆವಿಲಿಯನ್ ಪರೇಡ್ ನಡೆಸಿದರು. 17.4 ಓವರ್ಗಳಲ್ಲಿ 85 ರನ್ಗಳಿಗೆ ಆಲ್ ಔಟ್ ಆದ ಸ್ಕಾಟ್ಲೆಂಡ್ ಟೀಮ್ ಇಂಡಿಯಾಗೆ ಗೆಲ್ಲಲು 86 ರನ್ಗಳ ಅಲ್ಪ ಮೊತ್ತದ ಗುರಿಯನ್ನು ನೀಡಿತು.
ಇನ್ನು ಸ್ಕಾಟ್ಲೆಂಡ್ ತಂಡ ನೀಡಿದ 86 ರನ್ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಪ್ರಾರಂಭದಿಂದಲೂ ಅಬ್ಬರದ ಬ್ಯಾಟಿಂಗ್ ನಡೆಸಿದರು. ರೋಹಿತ್ ಶರ್ಮಾ 16 ಎಸೆತಗಳಲ್ಲಿ 30 ರನ್ ಗಳಿಸಿದರು ಮತ್ತು ಕೆಎಲ್ ರಾಹುಲ್ 19 ಎಸೆತಗಳಲ್ಲಿ 50 ರನ್ ಬಾರಿಸಿದರು. ಇನ್ನುಳಿದಂತೆ ವಿರಾಟ್ ಕೊಹ್ಲಿ ಅಜೇಯ 2 ರನ್ ಮತ್ತು ಸೂರ್ಯಕುಮಾರ್ ಯಾದವ್ ಅಜೇಯ 6 ರನ್ ಕಲೆ ಹಾಕಿದರು. ಈ ಮೂಲಕ ಟೀಮ್ ಇಂಡಿಯಾ 6.3 ಓವರ್ಗಳಲ್ಲಿ 89 ರನ್ ಬಾರಿಸುವ ಮೂಲಕ 8 ವಿಕೆಟ್ಗಳ ಬೃಹತ್ ಗೆಲುವನ್ನು ದಾಖಲಿಸಿದೆ. ಹಾಗೂ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನಕ್ಕೇರಿದೆ.