ಅಫ್ಘಾನಿಸ್ತಾನದ ಈ ಇಬ್ಬರು ಭಾರತಕ್ಕೆ ಸೋಲು ತರಬಹುದು ಹುಷಾರ್; ಕೊಹ್ಲಿ ಪಡೆಗೆ ಎಚ್ಚರಿಸಿದ ಮಾಜಿ ಕ್ರಿಕೆಟಿಗ!

ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಪಡೆ ಯಾರೂ ಸಹ ಊಹಿಸದ ರೀತಿ ಕಳಪೆ ಆರಂಭವನ್ನು ಪಡೆದುಕೊಂಡಿದೆ. ಹೌದು, ಟೂರ್ನಿಯಲ್ಲಿ ಇದುವರೆಗೂ ಒಟ್ಟು 2 ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ ಆ ಎರಡೂ ಪಂದ್ಯಗಳಲ್ಲಿಯೂ ಸೋಲುವುದರ ಮೂಲಕ ಇದೀಗ ಸೆಮಿಫೈನಲ್ ಹಂತವನ್ನು ಪ್ರವೇಶಿಸುವಲ್ಲಿ ಕೂಡ ಅನುಮಾನವನ್ನು ಹುಟ್ಟುಹಾಕಿದೆ.
ಸೂಪರ್ 12 ಗ್ರೂಪ್ 2ರಲ್ಲಿ ಟೀಮ್ ಇಂಡಿಯಾ ಸ್ಥಾನ ಪಡೆದುಕೊಂಡಿದ್ದು, ಅಕ್ಟೋಬರ್ 24ರ ಭಾನುವಾರದಂದು ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ತನ್ನ ಬದ್ಧ ವೈರಿಯಾದ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಹೀನಾಯವಾದ ಸೋಲನ್ನು ಅನುಭವಿಸಿತ್ತು. ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ಪಾಕಿಸ್ತಾನ ವಿಶ್ವಕಪ್ ಹಣಾಹಣಿಯೊಂದರಲ್ಲಿ ಸೋಲಿಸಿದ ಮೈಲಿಗಲ್ಲನ್ನು ಈ ಪಂದ್ಯದ ಮೂಲಕ ನೆಟ್ಟಿತ್ತು. ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಆರಂಭದ ಪಂದ್ಯದಲ್ಲಿಯೇ ದೊಡ್ಡ ಮಟ್ಟದ ಸೋಲನ್ನು ಕಂಡ ಟೀಮ್ ಇಂಡಿಯಾ ನಂತರ ನ್ಯೂಜಿಲೆಂಡ್ ವಿರುದ್ಧ ನಡೆದ ಮತ್ತೊಂದು ಪಂದ್ಯದಲ್ಲಿಯೂ ಸೋಲನ್ನು ಅನುಭವಿಸಿತು.
ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ತನ್ನ ಮೊದಲೆರಡು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿರುವ ಟೀಮ್ ಇಂಡಿಯಾ ಸೂಪರ್ 12 ಹಂತದಲ್ಲಿ ಇನ್ನೂ 3 ಪಂದ್ಯಗಳನ್ನಾಡಲಿದೆ. ಆಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳ ವಿರುದ್ಧ ಟೀಮ್ ಇಂಡಿಯಾ ತನ್ನ ಮುಂದಿನ 3 ಪಂದ್ಯಗಳನ್ನಾಡಲಿದ್ದು, ಈ 3 ಪಂದ್ಯಗಳಲ್ಲಿಯೂ ಅತೀ ದೊಡ್ಡ ಅಂತರದಿಂದ ಗೆದ್ದರೆ ಮಾತ್ರ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಅಂತಿಮ ಹಂತದಲ್ಲಿ ಸಿಕ್ಕರೂ ಸಿಗಬಹುದು. ಆದರೆ ಈಗಾಗಲೇ 1 ಜಯ ಸಾಧಿಸಿರುವ ನ್ಯೂಜಿಲೆಂಡ್ ತನ್ನ ಮುಂದಿನ 3 ಪಂದ್ಯಗಳಲ್ಲಿಯೂ ಜಯ ಗಳಿಸಿದರೆ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವ ಕನಸಿಗೆ ಕಲ್ಲು ಬೀಳಲಿದೆ. ಹೀಗೆ ತನ್ನ ಮೊದಲೆರಡು ಪಂದ್ಯಗಳಲ್ಲಿ ಸೋಲನ್ನು ಅನುಭವಿಸುವುದರ ಮೂಲಕ ಸೆಮಿಫೈನಲ್ ಪ್ರವೇಶಕ್ಕೂ ಸಂಕಷ್ಟ ತಂದುಕೊಂಡಿರುವ ಟೀಮ್ ಇಂಡಿಯಾ ಇಂದು ( ನವೆಂಬರ್ 3 ) ಅಫ್ಘಾನಿಸ್ತಾನ ವಿರುದ್ಧ ಪಂದ್ಯವನ್ನಾಡಲಿದೆ. ಹೀಗೆ ಈ ಪಂದ್ಯದ ಕುರಿತು ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಕೂಡ ಈ ಕೆಳಕಂಡಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಅಫ್ಘಾನಿಸ್ತಾನ ಟಿ ಟ್ವೆಂಟಿಯಲ್ಲಿ ಹೆದರುವುದಿಲ್ಲ
"ಹೌದು, ಅಫ್ಘಾನಿಸ್ತಾನದ ಒಂದು ಭಯಾನಕ ತಂಡ ಎಂದೇ ಹೇಳಬಹುದು. ಏಕೆಂದರೆ ಅವರು ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಾರೆ, ಆ ತಂಡದ ಆಟಗಾರರು ಟಿ ಟ್ವೆಂಟಿ ಪಂದ್ಯಗಳಲ್ಲಿ ಮುಂದೆ ನುಗ್ಗಿ ಬ್ಯಾಟ್ ಬೀಸುತ್ತಾರೆ ಹಾಗೂ ತಂಡದಲ್ಲಿ ಅತ್ಯುನ್ನತ ಸ್ಪಿನ್ ಬೌಲರ್ಗಳಿದ್ದಾರೆ. ಅಫ್ಘಾನಿಸ್ತಾನ ಬಾಳೆಹಣ್ಣಿನ ಸಿಪ್ಪೆ ಇದ್ದಂತೆ, ಅವರನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಬಲಿಷ್ಠ ತಂಡಗಳೇ ಜಾರಿ ಬೀಳಬೇಕಾಗುತ್ತದೆ" ಎಂದು ಸುನೀಲ್ ಗವಾಸ್ಕರ್ ಟೀಮ್ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.

ಆ ಇಬ್ಬರು ಬೌಲರ್ಗಳ ಬಗ್ಗೆ ಎಚ್ಚರ
ಅಫ್ಘಾನಿಸ್ತಾನವನ್ನು ಕಡೆಗಣಿಸಬೇಡಿ ಗಂಭೀರವಾಗಿ ಪರಿಗಣಿಸಿ ಎಂದು ಎಚ್ಚರಿಕೆ ನೀಡಿರುವ ಸುನಿಲ್ ಗವಾಸ್ಕರ್ ಆ ತಂಡದ ಇಬ್ಬರು ಬೌಲರ್ಗಳ ಬಗ್ಗೆ ಕೂಡ ಎಚ್ಚರಿಕೆ ನೀಡಿದ್ದಾರೆ. "ರಶೀದ್ ಖಾನ್ ಮತ್ತು ಮುಜೀಬ್ ಉರ್ ರೆಹಮಾನ್ ಬೌಲಿಂಗ್ಗೆ ವಿಭಿನ್ನವಾದ ಯೋಜನೆಗಳನ್ನು ಹಾಕಿಕೊಂಡು ಕಣಕ್ಕಿಳಿಯಿರಿ. ಇಲ್ಲದಿದ್ದರೆ ಆ ಇಬ್ಬರು ತಮ್ಮ ಪಾಲಿನ 4 ಓವರ್ಗಳನ್ನು 25ರಿಂದ 30 ರನ್ ನೀಡಿ ಮುಗಿಸಿಬಿಡುತ್ತಾರೆ. ಹೀಗೆ 8 ಓವರ್ಗಳಲ್ಲಿ ಕೇವಲ 50ರಿಂದ 60 ರನ್ ಸಿಗಲಿದ್ದು ಟೀಮ್ ಇಂಡಿಯಾಗೆ ಹಿನ್ನಡೆಯಾಗಲಿದೆ" ಎಂದು ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ.

ಈ ಪಂದ್ಯ ಸೋತರೆ ಅಧಿಕೃತವಾಗಿ ಸೆಮಿಫೈನಲ್ ರೇಸ್ನಿಂದ ಹೊರಬೀಳಲಿದೆ ಟೀಮ್ ಇಂಡಿಯಾ
ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಪಂದ್ಯ ಇಂದು ( ನವೆಂಬರ್ 3 ) ಅಬುಧಾಬಿಯ ಶೈಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿದ್ದೇ ಆದಲ್ಲಿ ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ರೇಸ್ನಿಂದ ಅಧಿಕೃತವಾಗಿ ಹೊರಬೀಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications