ಪಾಕ್ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ಕೊಹ್ಲಿ; ಕಳಪೆ ಪ್ರದರ್ಶನ ನೀಡಿದ ರೋಹಿತ್ ಬಗ್ಗೆ ಕೊಹ್ಲಿ ಮಾತು

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಇದೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯವನ್ನು ಭಾರತದ ವಿರುದ್ಧ ಗೆದ್ದು ಬೀಗಿದೆ.
ಹೌದು, ಅಕ್ಟೋಬರ್ 24ರ ಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡು ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಟೀಮ್ ಇಂಡಿಯಾಗೆ ನೀಡಿತು. ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾದ ಪರ ಆರಂಭಿಕ ಆಟಗಾರರಾಗಿ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಕಣಕ್ಕಿಳಿದರು. ಈ ಇಬ್ಬರು ಆರಂಭಿಕ ಆಟಗಾರರು ಸಹ ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ನಂತರ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಹೊರತುಪಡಿಸಿ ಭಾರತದ ಬೇರೆ ಯಾವುದೇ ಆಟಗಾರ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 151 ರನ್ ಗಳಿಸಿ ಎದುರಾಳಿ ಪಾಕಿಸ್ತಾನ ತಂಡಕ್ಕೆ 152 ರನ್ಗಳ ಗುರಿಯನ್ನು ನೀಡಿತು.
ಭಾರತ ತಂಡ ನೀಡಿದ 152 ರನ್ಗಳ ಗುರಿಯನ್ನು ಪಾಕಿಸ್ತಾನ ಯಾವುದೇ ವಿಕೆಟ್ ಕಳೆದುಕೊಳ್ಳದೇ ಯಶಸ್ವಿಯಾಗಿ ಬೆನ್ನಟ್ಟಿತು. ಪಾಕಿಸ್ತಾನ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಬಾಬರ್ ಅಜಮ್ ಮತ್ತು ಮಹಮ್ಮದ್ ರಿಜ್ವಾನ್ ಅಂತಿಮ ಹಂತದವರೆಗೂ ಅಜೇಯರಾಗಿ ಉಳಿದು ಉತ್ತಮ ಪ್ರದರ್ಶನ ನೀಡಿದರು. ನಾಯಕ ಬಾಬರ್ ಅಜಮ್ ಅಜೇಯ 68 ರನ್ ಗಳಿಸಿದರೆ, ಮಹಮ್ಮದ್ ರಿಜ್ವಾನ್ ಅಜೇಯ 79 ರನ್ ಗಳಿಸಿದರು. ಹೀಗೆ ಪಾಕಿಸ್ತಾನ 17.5 ಓವರ್ಗಳಲ್ಲಿ 152 ರನ್ ಕಲೆಹಾಕಿ ಭಾರತದ ವಿರುದ್ಧ 10 ವಿಕೆಟ್ಗಳ ಗೆಲುವನ್ನು ಸಾಧಿಸುವುದರ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿತು. ಇನ್ನು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಟೀಮ್ ಇಂಡಿಯಾ ಎಡವಿದ್ದರ ಕುರಿತು ಪಂದ್ಯೋತ್ತರ ಸಂದರ್ಶನದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಸೋಲಿಗೆ ಕಾರಣವಾದ ಅಂಶಗಳನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಬೇಗನೆ 3 ವಿಕೆಟ್ ಕಳೆದುಕೊಂಡೆವು, ಅವರು ನಮಗೆ ಅವಕಾಶವನ್ನು ಕೊಡಲಿಲ್ಲ
"ನಾವು ಅಂದುಕೊಂಡಂತೆ ಆರಂಭವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. 20 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡೆವು. ಹೀಗೆ ಸಂಕಷ್ಟದಲ್ಲಿದ್ದ ನಮಗೆ ದೊಡ್ಡ ಹೊಡೆತಗಳನ್ನು ಬಾರಿಸಲಾಗಲಿಲ್ಲ. ಇನ್ನು 10 ಓವರ್ ನಂತರ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಕಾರಣ ನಮಗೆ ಬೇಕಾಗಿದ್ದ 15ರಿಂದ 20 ಅಧಿಕ ರನ್ ಪಡೆದುಕೊಳ್ಳಲಾಗಲಿಲ್ಲ. ಇನ್ನು ಪಾಕ್ ಬ್ಯಾಟಿಂಗ್ ವೇಳೆ ಅವರ ಮೊದಲ 3 ವಿಕೆಟ್ಗಳನ್ನು ವೇಗವಾಗಿ ಪಡೆಯಬೇಕಾಗಿದ್ದ ಅನಿವಾರ್ಯತೆ ಇತ್ತು. ಆದರೆ ಆ ಅವಕಾಶವನ್ನು ಎದುರಾಳಿ ತಂಡ ನಮಗೆ ನೀಡಲೇ ಇಲ್ಲ, ಅವರು ಉತ್ತಮ ಕ್ರಿಕೆಟ್ ಆಡಿದರು" ಎಂದು ವಿರಾಟ್ ಕೊಹ್ಲಿ ತಿಳಿಸಿದರು.

ದ್ವಿತೀಯಾರ್ಧದಲ್ಲಿ ಇಬ್ಬನಿ ತೊಂದರೆ
"ಹೊಸ ಚೆಂಡನ್ನು ಟಿ ಟ್ವೆಂಟಿ ಪಂದ್ಯಗಳಲ್ಲಿ ಯಾವ ರೀತಿ ಉಪಯೋಗಿಸಬೇಕೋ ಅದನ್ನು ಶಾಹಿನ್ ಅಫ್ರಿದಿ ಯಶಸ್ವಿಯಾಗಿ ಮಾಡಿದರು. ಹೊಸ ಚೆಂಡನ್ನು ಬಳಸಿ ಚಾಣಾಕ್ಷತನದಿಂದ ವಿಕೆಟ್ ಕಬಳಿಸಿದರು, ಹೀಗಾಗಿ ಆತನಿಗೆ ಕ್ರೆಡಿಟ್ ಸಲ್ಲಬೇಕು. ಇನ್ನು ನಮ್ಮ ತಂಡದ ಬೌಲಿಂಗ್ ವೇಳೆ ಇಬ್ಬನಿಯ ತೊಂದರೆ ಇದ್ದ ಕಾರಣ ಬೌಲಿಂಗ್ ಪರಿಣಾಮಕಾರಿಯಾಗಿರಲಿಲ್ಲ. ನಮ್ಮ ಕೈಲಾದಷ್ಟು ಪ್ರಯತ್ನವನ್ನು ಮಾಡಿದೆವು, ಎದುರಾಳಿ ತಂಡವನ್ನು ಕಟ್ಟಿಹಾಕಲು ಸಾಕಷ್ಟು ಪ್ರಯತ್ನ ಪಟ್ಟೆವು. ಆದರೆ ಎದುರಾಳಿ ತಂಡದ ಆಟಗಾರರು ಅದಕ್ಕೆಲ್ಲಾ ಉತ್ತರ ನೀಡಿದರು. ಹಾಗೂ ಎದುರಾಳಿ ತಂಡ ನಮಗಿಂತ ಉತ್ತಮ ಆಟವನ್ನು ಆಡಿತು ಎಂಬ ಸತ್ಯವನ್ನು ಒಪ್ಪಿಕೊಳ್ಳುವಲ್ಲಿ ಯಾವುದೇ ನಾಚಿಕೆ ಇರಬಾರದು" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕಳಪೆ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಬದಲು ಇಶಾನ್ ಕಿಶನ್ ಆಯ್ಕೆ ಮಾಡ್ತೀರಾ ಎಂಬ ಪ್ರಶ್ನೆಗೆ ಕೊಹ್ಲಿ ಹೇಳಿದ್ದಿಷ್ಟು
ಹೀಗೆ ಪಂದ್ಯ ಮುಗಿದ ನಂತರ ಸಂದರ್ಶನದಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿಗೆ ಪಾಕ್ ವಿರುದ್ಧದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಬದಲು ಮುಂದಿನ ಪಂದ್ಯದಲ್ಲಿ ಇಶಾನ್ ಕಿಶನ್ ಅವರಿಗೆ ಆರಂಭಿಕ ಆಟಗಾರನ ಸ್ಥಾನ ನೀಡುತ್ತೀರಾ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆ ಎದುರಾದ ಕೂಡಲೇ ನಕ್ಕ ವಿರಾಟ್ ಕೊಹ್ಲಿ "ಟಿ ಟ್ವೆಂಟಿ ತಂಡದಿಂದ ರೋಹಿತ್ ಶರ್ಮಾ ಅವರನ್ನು ನಿಮ್ಮಿಂದ ಹೊರಗಿಡಲಾಗುತ್ತಾ, ಕಳೆದ ಪಂದ್ಯದಲ್ಲಿ ತಂಡಕ್ಕೆ ಆತ ನೀಡಿದ ಕೊಡುಗೆ ಏನೆಂಬುದನ್ನು ತಿಳಿದಿದ್ದರೂ ಸಹ ಈ ರೀತಿಯ ನಿರ್ಧಾರ ಕೈಗೊಳ್ಳಲು ಆಗುತ್ತಾ" ಎಂದು ಮರು ಪ್ರಶ್ನೆ ಕೇಳಿದರು. ಹಾಗೂ ಇನ್ನೂ ಮುಂದುವರೆದು ಮಾತನಾಡಿದ ಕೊಹ್ಲಿ "ಈ ವಿಷಯದ ಕುರಿತಾಗಿ ವಿವಾದ ಸೃಷ್ಟಿಸುವ ಇಚ್ಛೆ ಇದ್ದರೆ ಮೊದಲೇ ಹೇಳಿ" ಎಂದು ನೇರ ಉತ್ತರವನ್ನು ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications