
ಐಸಿಸಿ ಆಯೋಜಿಸಿರುವ ಪಂದ್ಯವನ್ನು ರದ್ದು ಮಾಡಲಾಗುವುದಿಲ್ಲ
ಅಕ್ಟೋಬರ್ 24ರಂದು ನಡೆಯಬೇಕಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ ಟ್ವೆಂಟಿ ವಿಶ್ವಕಪ್ ಪಂದ್ಯವನ್ನು ರದ್ದು ಮಾಡಬೇಕೆಂದು ಒತ್ತಾಯ ಮಾಡುತ್ತಿರುವವರಿಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ "ಐಸಿಸಿ ಆಯೋಜಿಸಿರುವ ಪಂದ್ಯಗಳನ್ನು ನಾವು ಯಾವುದೇ ಕಾರಣಕ್ಕೂ ಆಡುವುದಿಲ್ಲ ಎಂದು ವಿರೋಧಿಸಲು ಸಾಧ್ಯವಿಲ್ಲ. ಪ್ರತಿಯೊಂದು ತಂಡವೂ ಕೂಡ ಐಸಿಸಿ ನಿಯಮದಂತೆ ಪಂದ್ಯವನ್ನು ಆಡಿಯೇ ತೀರಬೇಕಾಗುತ್ತದೆ" ಎಂದಿದ್ದಾರೆ.

ಪಂದ್ಯ ರದ್ದಾಗಬೇಕು ಎನ್ನುವುದರ ಹಿಂದಿನ ಕಾರಣವೇನು?
ಜಮ್ಮು ಕಾಶ್ಮೀರದ ಕಾಶ್ಮೀರ ಕಣಿವೆಯಲ್ಲಿ ಕಳೆದೆರಡು ದಿನಗಳಿಂದ ಉಗ್ರರ ಹಿಂಸಾಚಾರ ನಡೆಯುತ್ತಿದೆ. ಈಗಾಗಲೇ ಕೆಲ ಸೈನಿಕರು ಮತ್ತು ಜನಸಾಮಾನ್ಯರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ. ಹೀಗಾಗಿ ಭಾರತದ ಸೈನಿಕರನ್ನು ಕೊಂದಂತಹ ದೇಶದ ವಿರುದ್ಧ ಭಾರತ ಯಾವುದೇ ಕಾರಣಕ್ಕೂ ಕ್ರಿಕೆಟ್ ಆಡಬಾರದು ಎಂದು ಹಲವಾರು ದೇಶ ಪರ ಸಂಘಟನೆಗಳು ಬಿಸಿಸಿಐಗೆ ಒತ್ತಾಯ ಮಾಡಿವೆ. ಆದರೆ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ "ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿರುವವರಿಗೆ ಸಂತಾಪ ಸೂಚಿಸುತ್ತೇನೆ. ಈ ರೀತಿಯ ದಾಳಿ ಮಾಡಿರುವ ಉಗ್ರ ಸಂಘಟನೆಗಳು ಸರಿಯಾದ ಪಾಠ ಕಲಿಯಲಿವೆ. ಆದರೆ ಕ್ರಿಕೆಟ್ ವಿಚಾರದಲ್ಲಿ ಪಂದ್ಯವನ್ನಾಡದೇ ಹಿಂದೆ ಸರಿಯುವುದು ಸಾಧ್ಯವಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ?
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸೂಪರ್ 12 ಹಂತದ ಪಂದ್ಯ ಅಕ್ಟೋಬರ್ 24ರ ಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಆರಂಭವಾಗಲಿದೆ.


Click it and Unblock the Notifications
