
ಭಾನುವಾರ, ಅಕ್ಟೋಬರ್ 30ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 2022ರ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಣಾಹಣಿಗಾಗಿ, ಭಾರತ ತಂಡವು ಎಡಗೈ ಸ್ಪಿನ್ನಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ ಬದಲಿಗೆ ಮತ್ತೊಬ್ಬ ಅಲ್ರೌಂಡರ ದೀಪಕ್ ಹೂಡಾ ರೂಪದಲ್ಲಿ ಹೆಚ್ಚುವರಿ ಬ್ಯಾಟರ್ಗೆ ಅವಕಾಶ ನೀಡಿದೆ.
ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ತಂಡದ ವಿರುದ್ಧದ ಪಂದ್ಯಗಳ ಆಡುವ 11ರ ಬಳಗದಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೀಗಾಗಿ, ಈ ಆಟಕ್ಕೆ ಭಾರತವು ಬೌಲಿಂಗ್ ಆಯ್ಕೆಗಳನ್ನು ಹೊಂದಿದ್ದು, ಮೊಹಮ್ಮದ್ ಶಮಿ, ಅರ್ಶ್ದೀಪ್ ಸಿಂಗ್, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್ ಮತ್ತು ಹಾರ್ದಿಕ್ ಪಾಂಡ್ಯ ಇದ್ದಾರೆ. ಅಗತ್ಯ ಬಿದ್ದರೆ ದೀಪಕ್ ಹೂಡಾ ಕೂಡ ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ಗೆ ತತ್ತರಿಸಿರುವ ಭಾರತ ತಂಡ ಕೆಟ್ಟ ಆರಂಭ ಪಡೆದಿದೆ. ಭಾರತ ಸದ್ಯ 8 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿತ್ತು. ಅಕ್ಷರ್ ಪಟೇಲ್ ಬದಲಿಗೆ ಅವಕಾಶ ಪಡೆದ ದೀಪಕ್ ಹೂಡಾ ನಿರಾಸೆ ಮೂಡಿಸಿದರು, ಯಾವುದೇ ರನ್ ಗಳಿಸದೆ ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿದರು.
"ನಾವು ಮೊದಲು ಬ್ಯಾಟಿಂಗ್ ಮಾಡುತ್ತೇವೆ. ಇದು ಉತ್ತಮ ಮೇಲ್ಮೈ ಹೊಂದಿದೆ. ಈ ಪಿಚ್ನಲ್ಲಿ ಏನನ್ನು ನಿರೀಕ್ಷಿಸಬಹುದು ಮತ್ತು ಏನು ಮಾಡಬೇಕೆಂದು ನಮಗೆ ತಿಳಿದಿದೆ. ನಾವು ಪರ್ತ್(WACA) ನಲ್ಲಿ ಉತ್ತಮ ಅಭ್ಯಾಸ ಶಿಬಿರವನ್ನು ಹೊಂದಿದ್ದೇವೆ. ಬ್ಯಾಟರ್ಗಳು ಮತ್ತು ಬೌಲರ್ಗಳಿಗೆ ಬೌನ್ಸ್ಗೆ ಬಳಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ," ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ನಂತರ ಹೇಳಿದರು.
"ಆದರೆ ಇದು ಪಂದ್ಯಾವಳಿಯ ಪ್ರಮುಖ ಆಟವಾಗಿದೆ, ನಾವು ದಿನಚರಿಯನ್ನು ಅನುಸರಿಸಬೇಕು ಮತ್ತು ಪ್ರಕ್ರಿಯೆಯನ್ನು ನಂಬಬೇಕು. ಶಾಂತವಾಗಿರುವುದು ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುವ ಯೋಜನೆ ಹೊಂದಿದ್ದೇವೆ. ತಂಡದಲ್ಲಿ ಒಂದು ಬದಲಾವಣೆ, ಅಕ್ಷರ್ ಪಟೇಲ್ ಆಡುತ್ತಿಲ್ಲ, ಬದಲಾಗಿ ದೀಪಕ್ ಹೂಡಾ ಸೇರಿದ್ದಾರೆ," ರೋಹಿತ್ ಶರ್ಮಾ ತಿಳಿಸಿದರು.
ಟೀಮ್ ಇಂಡಿಯಾ ಪ್ರಸ್ತುತ ಗ್ರೂಪ್ 2ರ ಅಂಕಪಟ್ಟಿಯಲ್ಲಿ ನಾಲ್ಕು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ ಮತ್ತು ದಕ್ಷಿಣ ಆಫ್ರಿಕಾ 2 ಪಂದ್ಯಗಳಿಂದ 3 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಭಾರತದ ಆಡುವ 11ರ ಬಳಗ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ), ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಶ್ದೀಪ್ ಸಿಂಗ್.