
ಇತ್ತೀಚಿಗೆ ಐಸಿಸಿ ಟಿ20 ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಬ್ಬರಿಸಿ ಬೊಬ್ಬಿರಿದ್ದ ವಿರಾಟ್ ಕೊಹ್ಲಿ, ನಮ್ಮ ತಂಡದ ವಿರುದ್ಧ ಅಂತಹದ್ದೇ ಪ್ರದರ್ಶನ ನೀಡುವುದಿಲ್ಲ ಎಂದು ನಂಬಿದ್ದೇನೆ ಎಂದು ನೆದರ್ಲ್ಯಾಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ ಹೇಳಿದ್ದಾರೆ.
ಗ್ರೂಪ್ 2ನಲ್ಲಿರುವ ಭಾರತ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಗುರುವಾರ ಸಿಡ್ನಿಯ, ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಮುಖಾಮುಖಿಯಾಗುತ್ತಿದ್ದು, ಅಭಿಮಾನಿಗಳಿದುರು ಭರ್ಜರಿ ಪ್ರದರ್ಶನ ನೀಡುವ ಉದ್ದೇಶ ಹೊಂದಿವೆ.
ಮೆಲ್ಬರ್ನ್ನ ಲೋಕಲ್ ಬಾಯ್ ಆಗಿರುವ ಸ್ಕಾಟ್ ಎಡ್ವರ್ಡ್ಸ್, ನೆದರ್ಲ್ಯಾಂಡ್ಸ್ಗೆ ವಲಸೆ ಹೋಗುವ ಮೂಲಕ ಅಲ್ಲಿಯೇ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ. ಟೀಂ ಇಂಡಿಯಾ ವಿರುದ್ಧ ಮುಂಬರುವ ಪಂದ್ಯದಲ್ಲಿ ಉತ್ತಮ ಆಟವಾಡುವ ವಿಶ್ವಾಸ ಹೊಂದಿದ್ದಾರೆ.
'' ವಿರಾಟ್ ಕೊಹ್ಲಿ ಕಳೆದ ದಿನಗಳು ಅಸಾಧ್ಯವಾದದ್ದನ್ನು ಸಾಧಿಸಿದ್ದಾರೆ. ಆತ ಮತ್ತೆ ಅದನ್ನು ನಮ್ಮೆದುರು ಪುನರಾವರ್ತಿಸುವುದಿಲ್ಲ ಎಂದು ನಂಬಿದ್ದೇನೆ'' ಎಂದು ಎಡ್ವರ್ಡ್ಸ್ ಬುಧವಾರ ಪಂದ್ಯ ಪೂರ್ವ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
''ಅನೇಕ ಜನರು ನಾವು ಗೆಲ್ಲುವುದಿಲ್ಲ ಎಂದು ಭಾವಿಸಸುತ್ತಾರೆ, ಹೀಗಾಗಿ ನಮ್ಮ ಮೇಲೆ ಹೆಚ್ಚಿನ ಒತ್ತಡವಿರುವುದಿಲ್ಲ'' ಎಂದು ಡಚ್ ನಾಯಕ ಎಡ್ವರ್ಡ್ಸ್, ಸೂಪರ್ ಸ್ಟಾರ್ಗಳನ್ನ ಒಳಗೊಂಡ ಟೀಂ ಇಂಡಿಯಾ ವಿರುದ್ಧದ ಪಂದ್ಯದ ಕುರಿತು ಮಾತನಾಡಿದ್ದಾರೆ.
'' ನಮ್ಮ ಬ್ರಾಂಡ್ ಆಫ್ ಕ್ರಿಕೆಟ್ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ನೀಡುವುದಾಗಿದೆ. ನಮ್ಮ A ಗೇಮ್ ಅನ್ನು ಆಡುವುದಾಗಿದೆ. ಅದು ಸಾಧ್ಯವಾದರೆ ಸಾಧ್ಯವಾಗಲಿ, ಇಲ್ಲದೆ ಹೋದರೂ ಪರ್ವಾಗಿಲ್ಲ'' ಎಂದು ತನ್ನ ಮಾತಿಗೆ ಸೇರಿಸಿದ್ದಾರೆ.
ಜೊತೆಗೆ ಟೀಂ ಇಂಡಿಯಾ ವಿರುದ್ಧ ಆಡುವುದು ನಿಜಕ್ಕೂ ಕನಸು ನನಸಾದಂತೆಯೇ ಸರಿ. ಭಾರತವು ವಿಶ್ವದಲ್ಲಿಯೇ ಅತ್ಯಂತ ಬೆಸ್ಟ್ ಟೀಂಗಳಲ್ಲಿ ಒಂದಾಗಿದೆ ಎಂದು ಎಡ್ವರ್ಡ್ಸ್ ಹೇಳಿದ್ದಾರೆ.
ಮೆಲ್ಬರ್ನ್ನ ಎಂಸಿಜಿ ಮೈದಾನದಲ್ಲಿ ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವನ್ನ ಪಡೆದಿದೆ. ಪಾಕಿಸ್ತಾನ ವಿರುದ್ಧ ಭಾರತ 4 ವಿಕೆಟ್ಗಳ ರೋಚಕ ಗೆಲುವಿನೊಂದಿಗೆ ವಿಶ್ವಕಪ್ನಲ್ಲಿ ಶುಭಾರಂಭ ಮಾಡಿದೆ. ಕೊನೆಯ ಎಸೆತದಲ್ಲಿ ಗೆಲುವಿನ ಸಿಹಿ ಪಡೆದ ಕೋಟ್ಯಾಂತರ ಭಾರತೀಯ ಅಭಿಮಾನಿಗಳು ಗೆಲುವನ್ನ ಸಂಭ್ರಮಿಸಿದ್ದಾರೆ.
ಟೀಂ ಇಂಡಿಯಾ ಗೆಲುವಿನಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ ಆಟಗಾರರಲ್ಲಿ ಇಬ್ಬರು ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ. ಪಾಕಿಸ್ತಾನ ನೀಡಿದ್ದ 160ರನ್ಗಳ ಗುರಿ ಬೆನ್ನತ್ತಿದ ಭಾರತವು ಆರಂಭಿಕ ಆಘಾತದ ನಡುವೆ ಸೋಲಿನ ಸುಳಿಗೆ ಸಿಲುಕಿತ್ತು. ಈ ವೇಳೆಯಲ್ಲಿ ಮುಳುಗುತ್ತಿದ್ದ ಭಾರತದ ನೌಕೆಯನ್ನು ಮೇಲೆತ್ತಿದ ಕೀರ್ತಿ ಈ ಜೋಡಿಗೆ ಸಲ್ಲುತ್ತದೆ.
ಹಾರ್ದಿಕ್ ಪಾಂಡ್ಯ ಬ್ಯಾಟ್ ಹಾಗೂ ಬಾಲ್ ಎರಡರಲ್ಲೂ ಮಿಂಚುವ ಮೂಲಕ ಆ್ಯಂಕರ್ ರೋಲ್ನಲ್ಲಿ ಮಿಂಚಿದ್ರೆ, ವಿರಾಟ್ ಕೊಹ್ಲಿ ತನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಬೆಸ್ಟ್ ಇನ್ನಿಂಗ್ಸ್ ಆಡುವ ಮೂಲಕ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟರು.