
ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ಗಾಗಿ ಭರ್ಜರಿ ಸಿದ್ಧತೆ ನಡೆಸಿ ಮೊದಲ ಪಂದ್ಯಕ್ಕಾಗಿ ಎದುರು ನೋಡುತ್ತಿದೆ. ಅಕ್ಟೋಬರ್ 23ರಂದು ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ.
ಟೀಂ ಇಂಡಿಯಾ ಐಸಿಸಿ ಟ್ರೋಫಿಯನ್ನ ಜಯಿಸಿ 9 ವರ್ಷಗಳೇ ಕಳೆದು ಹೋಗಿವೆ. 2013ರಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿ ಗೆದ್ದ ಬಳಿಕ ಭಾರತ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಇನ್ನು ಚೊಚ್ಚಲ ಟಿ20 ವಿಶ್ವಕಪ್ ಗೆದ್ದು 15 ವರ್ಷಗಳಾದ್ರೂ ಮತ್ತೊಂದು ಕಪ್ ಗೆದ್ದಿಲ್ಲ. ಹೀಗಾಗಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಈ ಕೊರತೆಯನ್ನ ನೀಗಿಸಲು ಕಾಂಗರೂ ನಾಡಿಗೆ ಕಾಲಿಟ್ಟಿದೆ.
ಟೀಂ ಇಂಡಿಯಾ ಮಾಜಿ ಬೌಲರ್ ಜಹೀರ್ ಖಾನ್ ಪ್ರಕಾರ ಟೀಂ ಇಂಡಿಯಾ ಫೈನಲ್ ತಲುಪಲಿದ್ದು, ಇಂಗ್ಲೆಂಡ್ ವಿರುದ್ಧ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ ಎಂದು ಅಂದಾಜಿಸಿದ್ದಾರೆ.
''ನಾನು ಖಂಡಿತವಾಗಿಯೂ ಟೀಂ ಇಂಡಿಯಾ ಜೊತೆಗೆ ಹೋಗುತ್ತೇನೆ. ಹೌದು ಕೆಲವು ಆಟಗಾರರ ಕುರಿತಾಗಿ ಹೆಚ್ಚು ಮಾತನಾಡಲಾಗುತ್ತಿದೆ. ಜಸ್ಪ್ರೀತ್ ಬುಮ್ರಾ ಇಂಜ್ಯುರಿಯಾಗಿದ್ದರೂ ಸಹ, ಟೀಂ ಇಂಡಿಯಾ ಬೌಲಿಂಗ್ ಲೈನಪ್ ಅನ್ನು ಕಳೆದ ಕೆಲವು ವರ್ಷಗಳಲ್ಲಿ ಗಮನಿಸಿದ್ದು, ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಖಂಡಿತವಾಗಿಯೂ ಫೈನಲ್ ತಲುಪುವ ಎಲ್ಲಾ ಸಾಮರ್ಥ್ಯ ಟೀಂ ಇಂಡಿಯಾಗಿದೆ'' ಎಂದು ಕ್ರಿಕ್ಬಝ್ಗೆ ಜಹೀರ್ ಖಾನ್ ತಿಳಿಸಿದ್ದಾರೆ.
ಜೊತೆಗೆ ಫೈನಲ್ನಲ್ಲಿ ಭಾರತದ ಪ್ರತಿಸ್ಪರ್ಧಿ ಇಂಗ್ಲೆಂಡ್ ಆಗಿರಲಿದೆ ಎಂದು ಜಹೀರ್ ಖಾನ್ ಒತ್ತಿ ಹೇಳಿದ್ದಾರೆ. ಟೀಂ ಇಂಡಿಯಾ ಈಗಾಗಲೇ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ ಅನ್ನು ಅಂತಿಮಗೊಳಿಸಿದೆ.
ಆದ್ರೆ ಇಲ್ಲಿ ಆತಂಕದ ವಿಚಾರ ಏನಂದ್ರೆ ಆಸ್ಟ್ರೇಲಿಯಾ ಸರ್ಕಾರದ ಹವಾಮಾನ ಇಲಾಖೆ ಪ್ರಕಾರ ಭಾನುವಾರ ಮೆಲ್ಬರ್ನ್ನಲ್ಲಿ ಶೇಕಡಾ 80ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಮಳೆಯು ಸ್ಥಳೀಯ ಕಾಲಮಾನ ಸಂಜೆಯ ವೇಳೆಯಲ್ಲಿ ಬರುವ ಸಾಧ್ಯತೆಯಿದ್ದು, ಗಾಳಿಯು 15 ರಿಂದ 25 ಕಿ.ಮೀ ವೇಗದಲ್ಲಿ ಬೀಸಲಿದೆ.