ಗುರುವಾರ, ಜೂನ್ 20ರ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್ 8ರ ತಮ್ಮ ಆರಂಭಿಕ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಹಣಾಹಣಿಗೆ ಸಜ್ಜಾಗಿವೆ.
ಸೂಪರ್ 8ರ ಹಂತದ ಪಂದ್ಯಗಳಿಗೂ ಮುನ್ನ ಭಾರತ ತಂಡದ ಅಗ್ರ ಕ್ರಮಾಂಕವು ದೊಡ್ಡ ಚಿಂತೆಯಾಗಿದೆ ಮತ್ತು ಯಾರ ಮೇಲೆ ಇಡೀ ತಂಡ ನೆಚ್ಚಿಕೊಂಡಿದೆಯೋ ಅವರಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮುತ್ತಿಲ್ಲ. ವಿಶೇಷವಾಗಿ, ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ.

ಇದೇ ವೇಳೆ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್ 8ರ ಪಂದ್ಯಗಳಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು 3ನೇ ಕ್ರಮಾಂಕದಲ್ಲಿ ಕಳುಹಿಸುವಂತೆ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಭಾರತ ತಂಡದ ಮ್ಯಾನೇಜ್ಮೆಂಟ್ ಅನ್ನು ಒತ್ತಾಯಿಸಿದರು.
35 ವರ್ಷದ ವಿರಾಟ್ ಕೊಹ್ಲಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆರಂಭಿಕರಾಗಿ ಆರೆಂಜ್ ಕ್ಯಾಪ್ ಗೆದ್ದರು. ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಬಹು-ರಾಷ್ಟ್ರೀಯ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ನಲ್ಲಿ ಸಾಗುತ್ತಿದ್ದಾರೆ.
ಈವರೆಗೆ ಆಡಿದ 3 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 9 ಎಸೆತಗಳಲ್ಲಿ 1.66ರ ಸರಾಸರಿ ಮತ್ತು 55.55ರ ಸ್ಟ್ರೈಕ್ ರೇಟ್ನಲ್ಲಿ ಕೇವಲ 5 ರನ್ ಗಳಿಸಿದ್ದಾರೆ.
ಜೂನ್ 20ರಂದು ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ರಶೀದ್ ಖಾನ್ ನಾಯಕತ್ವದ ಅಫ್ಘಾನಿಸ್ತಾನ ತಂಡವನ್ನು ಎದುರಿಸುವಾಗ ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಎದುರು ನೋಡುತ್ತಾರೆ.

2011ರಿಂದ 2021ರವರೆಗೆ ಐಪಿಎಲ್ನಲ್ಲಿ ಆರ್ಸಿಬಿ ಪರ ವಿರಾಟ್ ಕೊಹ್ಲಿಯೊಂದಿಗೆ ಆಡಿದ ದಕ್ಷಿಣ ಆಫ್ರಿಕಾದ ಲೆಜೆಂಡ್ ಎಬಿ ಡಿವಿಲಿಯರ್ಸ್, ಮಧ್ಯಮ ಓವರ್ಗಳಲ್ಲಿ ಒತ್ತಡ ಹೇರಲು ವಿರಾಟ್ ಕೊಹ್ಲಿವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಎಂದು ಹೇಳಿದರು.
"ದಯವಿಟ್ಟು ವಿರಾಟ್ ಕೊಹ್ಲಿಯನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಿಡಿ ಎಂದು ನಾನು ಯಾವಾಗಲೂ ಹೇಳುತ್ತೇನೆ. ವಿಶೇಷವಾಗಿ ಈಗ ಆಡಲಿರುವ ಉತ್ತಮ ಪಿಚ್ಗಳಲ್ಲಿ, ವಿರಾಟ್ ಮೂರನೇ ಸ್ಥಾನದಲ್ಲಿ ಆಡಬೇಕಾದ ಆಟಗಾರ," ಎಂದು ಎಬಿ ಡಿ ವಿಲಿಯರ್ಸ್ ತಿಳಿಸಿದರು.
"ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟವನ್ನು ಆಡಬಹುದು ಮತ್ತು ಅಗತ್ಯವಿದ್ದರೆ ಒತ್ತಡ ಹಿಮ್ಮೆಟ್ಟಿಸಬಹುದು ಮತ್ತು ಪರಿಸ್ಥಿತಿಗೆ ತಕ್ಕಂತೆ ಅಡಬಲ್ಲರು. ಅವರು ಮಧ್ಯಮ ಓವರ್ಗಳಲ್ಲಿ ವಿಶ್ವದ ಅತ್ಯುತ್ತಮ ಆಟಗಾರ. ಇನ್ನಿಂಗ್ಸ್ ಆರಂಭಿಸಲು ನಾನು ಯಾವುದೇ ಕಾರಣಗಳನ್ನು ಕಾಣುತ್ತಿಲ್ಲ," ಎಂದು ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ ಐಸಿಸಿ ಟ್ರೋಫಿಯನ್ನು ಗೆಲ್ಲದ ಜಿಂಕ್ಸ್ ಮುರಿಯಲು, ಭಾರತ ತಂಡವು ಸ್ವಲ್ಪ ಹೆಚ್ಚು ಆಕ್ರಮಣಕಾರಿಯಾಗಬೇಕು ಎಂದು ಆರ್ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟರು.
"ನೀವು ಮೊದಲ ಪಂಚ್ ಎಸೆಯುವುದನ್ನು ಖಚಿತಪಡಿಸಿಕೊಳ್ಳಿ. ಹಿಂದಿನ ವಿಶ್ವಕಪ್ಗಳಲ್ಲಿ ಭಾರತ ತಂಡ ಸ್ವಲ್ಪ ಸಂಪ್ರದಾಯವಾದಿಗಳಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಭಾರತ ಉತ್ತಮ ಗುಣಮಟ್ಟದ ತಂಡವಾಗಿದ್ದು, ಅವರು ಆವೇಗವನ್ನು ಪಡೆಯಲು ಆರಂಭದಲ್ಲೇ ಸ್ವಲ್ಪ ಅಪಾಯವನ್ನು ತೆಗೆದುಕೊಳ್ಳಬಹುದು. ಏಕೆಂದರೆ ಅವರು ಆವೇಗವನ್ನು ಪಡೆದ ನಂತರ ಹಿಂತಿರುಗಿ ನೋಡುವುದಿಲ್ಲ," ಎಂದು ಎಬಿ ಡಿವಿಲಿಯರ್ಸ್ ತಿಳಿಸಿದರು.
ಪ್ರಸ್ತುತ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್ಎ ತಂಡಗಳ ವಿರುದ್ಧದ ಪಂದ್ಯಗಳಲ್ಲಿ ಗೇಲಉವು ಸಾಧಿಸಿ ಅಜೇಯವಾಗಿದೆ.