ಜೂನ್ 10 ಸೋಮವಾರ, ಟಿ20 ವಿಶ್ವಕಪ್ನ ಗುಂಪು ಹಂತದ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲಿನ ನಂತರ ಪಾಕಿಸ್ತಾನ ಆಘಾತಕ್ಕೊಳಗಾಗಿದೆ. ಭಾನುವಾರ (ಜೂನ್ 9) ನ್ಯೂಯಾರ್ಕ್ ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ 6 ರನ್ ಗಳ ಜಯ ಸಾಧಿಸಿದೆ.
ಇದು ಗುಂಪು ಹಂತದಲ್ಲಿ ಪಾಕಿಸ್ತಾನ ಸತತ ಎರಡು ಸೋಲು ಕಂಡಿದ್ದು, ಭಾರತ ಸತತ ಎರಡನೇ ಗೆಲುವನ್ನು ಸಾಧಿಸಿದೆ. 120 ರನ್ಗಳ ಗುರಿ ಬೆನ್ನತ್ತಲು ಸಾಧ್ಯವಾಗದೆ ಬಾಬರ್ ಅಜಮ್ ತಂಡ ಹೀನಾಯವಾಗಿ ಸೋತಿದೆ.
ಇದಾದ ಬಳಿಕ ಪಾಕಿಸ್ತಾನ ತಂಡ ತನ್ನದೇ ದೇಶದ ಮಾಜಿ ದಿಗ್ಗಜ ಆಟಗಾರರಿಂದ ಟೀಕೆಗೆ ಗುರಿಯಾಗಿದೆ. ಪಾಕಿಸ್ತಾನ ತಂಡದ ಆಟಗಾರರ ವಿರುದ್ಧ ವಾಸಿಂ ಅಕ್ರಂ, ಶೋಯೆಬ್ ಅಖ್ತರ್ ಮತ್ತು ವಕಾರ್ ಯೂನಿಸ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಇಡೀ ಪಾಕಿಸ್ತಾನ ತಂಡವನ್ನು ಬದಲಾಯಿಸುವ ಸಮಯ ಬಂದಿದೆ ಎಂದು ವಾಸಿಂ ಅಕ್ರಂ ಹೇಳಿದ್ದಾರೆ. ಕಳಪೆ ಪ್ರದರ್ಶನದ ನಂತರ ಕೋಚ್ಗಳನ್ನು ಯಾವಾಗಲೂ ವಜಾ ಮಾಡಲಾಗುತ್ತದೆ. ಆದರೆ ಈಗ ಅದು ಆಟಗಾರರ ಸರದಿಯಾಗಿದೆ ಎಂದಿದ್ದಾರೆ.

ಭಾರತದ ವಿರುದ್ಧ ಪಂದ್ಯವನ್ನು ಗೆಲ್ಲಿಸಲು ಸಾಧ್ಯವಾಗದ ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಕರ್ ಅಹ್ಮದ್ ವಿರುದ್ಧ ವಾಸಿಂ ಆಕ್ರಂ ವಾಗ್ದಾಳಿ ನಡೆಸಿದ್ದಾರೆ. ರಿಜ್ವಾನ್ 10 ವರ್ಷಗಳಿಂದ ಆಡುತ್ತಿದ್ದು, ಅವರಿಗೆ ಕ್ರಿಕೆಟ್ ಕಲಿಸಲು ಯಾರಿಂದಲೂ ಸಾಧ್ಯವಿಲ್ಲ.
ಮತ್ತೊಂದೆಡೆ, ಇಫ್ತಿಕರ್ ಅವರಿಗೆ ಲೆಗ್ ಸೈಡ್ನಲ್ಲಿ ಒಂದೇ ಒಂದು ಶಾಟ್ ಆಡುವುದು ಮಾತ್ರ ತಿಳಿದಿದೆ. ಅವರು ಕೂಡ ಹಲವು ವರ್ಷಗಳಿಂದ ತಂಡದಲ್ಲಿದ್ದರು, ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ಮಾಜಿ ವೇಗಿ ಶೋಯೆಬ್ ಅಖ್ತರ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ತಮ್ಮ ತಂಡದ ನೈತಿಕ ಸ್ಥೈರ್ಯ ಕುಸಿದಿದೆ. ನಿಮಗಾಗಿ ಆಡುವುದರಲ್ಲಿ ಅರ್ಥವಿಲ್ಲ. ಆಟಗಾರರು ತಂಡಕ್ಕಾಗಿ ಆಡಬೇಕಾಗುತ್ತದೆ.
ಟಿ20 ವಿಶ್ವಕಪ್ನಲ್ಲಿ ನಮ್ಮ ಪ್ರದರ್ಶನ ತೀರಾ ಕಳಪೆಯಾಗಿದೆ. ನಾವು ಸೂಪರ್-8 ತಲುಪಲು ಅರ್ಹರೇ? ಯಾರೂ ಪಂದ್ಯ ಗೆಲ್ಲುವ ಉದ್ದೇಶವನ್ನು ತೋರಿಸಲಿಲ್ಲ. ರಿಜ್ವಾನ್ ಅವರು ಪಂದ್ಯವನ್ನು ಗೆಲ್ಲಿಸಬಹುದಿತ್ತು ಎಂದು ಶೋಯೆಬ್ ತಿಳಿಸಿದ್ದಾರೆ.

ಪಾಕಿಸ್ತಾನ ಸೋಲಿನ ನಂತರ ಮಾಜಿ ನಾಯಕ ಮತ್ತು ಅನುಭವಿ ವೇಗದ ಬೌಲರ್ ವಕಾರ್ ಯೂನಿಸ್ ಕೂಡ ತಮ್ಮ ತಂಡದ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನನ್ನ ಪ್ರಕಾರ ಭಾರತವು ಪಾಕಿಸ್ತಾನಕ್ಕೆ ಪಂದ್ಯವನ್ನು ಗೆಲ್ಲಲು ಉತ್ತಮ ಅವಕಾಶವನ್ನು ನೀಡಿತ್ತು. ಭಾರತ ಸುಲಭವಾಗಿ 140-150 ರನ್ ಗಳಿಸಬಹುದಿತ್ತು. ಆದರೆ ಕಡಿಮೆ ಸ್ಕೋರರ್ ಪಂದ್ಯವನ್ನೆ ಪಾಕಿಸ್ತಾನಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ.
ಮೊಹಮ್ಮದ್ ರಿಜ್ವಾನ್ ಅವರ ಪ್ರದರ್ಶನ ತೀರಾ ಸಾಧಾರಣವಾಗಿತ್ತು. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಸಾಮರ್ಥ್ಯಗಳ ಬಗ್ಗೆ ನನಗೆ ತಿಳಿದಿತ್ತು. ಹಾರ್ದಿಕ್ ಬ್ಯಾಟಿಂಗ್ನಲ್ಲಿ ಉತ್ತಮವಾಗಿ ಆಡಲಿಲ್ಲ. ಆದರೆ ಅವರ ಬೌಲಿಂಗ್ನಲ್ಲಿ ನಾವು ಪಂದ್ಯವನ್ನು ಗೆಲ್ಲಬಹುದಿತ್ತು ಎಂದು ವಕಾರ್ ಯೂನಿಸ್ ಬೇಸರ ವ್ಯಕ್ತಪಡಿಸಿದ್ದಾರೆ.