ಜೂನ್ 11 ಮಂಗಳವಾರ, ಭಾರತ ಕ್ರಿಕೆಟ್ ತಂಡದ ಯುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಮ್ಮ ಅದ್ಭುತ ಆಟದ ಮೂಲಕ ವಿಶ್ವದಾದ್ಯಂತದ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇದೀಗ ತಮ್ಮ ವಿನಮ್ರ ನಡವಳಿಕೆಯಿಂದ ಮತ್ತೊಮ್ಮೆ ಎಲ್ಲರ ಮನ ಗೆದ್ದಿದ್ದಾರೆ.
ಅಮೆರಿಕಾದ ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಜೂನ್ 9 ರಂದು ಟಿ20 ವಿಶ್ವಕಪ್ನ ಗುಂಪು ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು.ಈ ರಣರೋಚಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ ಗೆದ್ದು ಬೀಗಿತು.

ಮತ್ತೊಂದೆಡೆ ಈ ಪಂದ್ಯವನ್ನು ವೀಕ್ಷಿಸಲು ಹಲವು ಗಣ್ಯರು ಆಗಮಿಸಿದ್ದರು. ಹಾಗೆಯೇ ಭಾರತ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರು ಕೂಡ ಈ ಪಂದ್ಯ ವೀಕ್ಷಿಸಲು ಕುಟುಂಬ ಸಮೇತ ನ್ಯೂಯಾರ್ಕ್ ಬಂದಿದ್ದರು.
ಈ ವೇಳೆ ಸಚಿನ್ ಮೈದಾನದಲ್ಲಿ ಉಪಸ್ಥಿತರಿರುವಾಗ ಅವರನ್ನು ಯಶಸ್ವಿ ಜೈಸ್ವಾಲ್ ಭೇಟಿಯಾದರು. ಭೇಟಿಯಾದಾಗ ಮೊದಲು ಸಚಿನ್ ಅವರ ಪಾದಗಳನ್ನು ಮುಟ್ಟಲು ಯಶಸ್ವಿ ಮುಂದಾದರು. ತಕ್ಷಣ ಸಚಿನ್ ಅವರನ್ನು ತಡೆದು ತಬ್ಬಿಕೊಂಡರು.
ಯಶಸ್ವಿ ಅವರ ಈ ನಡೆಯಿಂದ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದು, ಭಾರೀ ಮೆಚ್ಚುಗೆ ಗಳಿಸಿದ್ದಾರೆ.
ಇನ್ನೊಂದೆಡೆ ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ಅವರನ್ನು ಯಶಸ್ವಿ ಅಪ್ಪಿಕೊಂಡಿರುವುದನ್ನು ಕಂಡು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್ನ ಯುವ ಪೀಳಿಗೆಯು ದಿಗ್ಗಜ ಕ್ರಿಕೆಟಿಗರನ್ನು ಗೌರವಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ. ಇದನ್ನು ಇನ್ನಷ್ಟು ಯುವ ಕ್ರಿಕೆಟಿಗರು ನೋಡಿ ಕಲಿಯಬೇಕು ಎಂದು ಒಂದಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ.
2024ರ ಟಿ20 ವಿಶ್ವಕಪ್ನ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಯಶಸ್ವಿ ಜೈಸ್ವಾಲ್ಗೆ ಇಲ್ಲಿಯವರೆಗೆ
ಆಡುವ ಅವಕಾಶ ಸಿಕ್ಕಿಲ್ಲ. ಯಶಸ್ವಿ ಆರಂಭಿಕ ಬ್ಯಾಟರ್ ಆಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರ ಸ್ಥಾನದಲ್ಲಿ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಜೈಸ್ವಾಲ್ಗೆ ಮೈದಾನಕ್ಕಿಳಿಯಲು ಅವಕಾಶ ಸಿಕ್ಕಿರಲಿಲ್ಲ. ಬಳಿಕ ಐರ್ಲೆಂಡ್ ಮತ್ತು ಪಾಕಿಸ್ತಾನದ ವಿರುದ್ಧ ಕೂಡ ಆಡಲಿಲ್ಲ.
ವಿರಾಟ್ ಕೊಹ್ಲಿ ಎರಡೂ ಪಂದ್ಯಗಳಲ್ಲಿ ಆರಂಭಿಕರಾಗಿ ವಿಫಲರಾಗಿದ್ದಾರೆ. ಐರ್ಲೆಂಡ್ ವಿರುದ್ಧ 1 ರನ್ ಮತ್ತು ಪಾಕಿಸ್ತಾನ ವಿರುದ್ಧ 4 ರನ್ ಗಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯಶಸ್ವಿಗೆ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆ ಇದ್ದು, ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.