ಜೂನ್ 27 ಗುರುವಾರ, 2024ರ ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಅಫ್ಘಾನಿಸ್ತಾನ ಸೋಲು ಕಂಡಿದೆ. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಶೀದ್ ಖಾನ್ ಪಡೆಯ ಪಯಣ ಅಂತ್ಯವಾಗಿದೆ.
ಇದಕ್ಕೂ ಮುನ್ನ ಸೂಪರ್-8ರ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಅಫ್ಘಾನಿಸ್ತಾನ ಗೆದ್ದು ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಪ್ರತಿಷ್ಠಿತ ಟೂರ್ನಿಯೊಂದರಲ್ಲಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿತ್ತು. ಆದರೆ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ನೀತಿ ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್ ಐಸಿಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಪಂದ್ಯದಲ್ಲಿ ಸಂಹಿತೆಯ ಹಂತ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಆಫ್ಘಾನಿಸ್ತಾನದ ನಾಯಕ ರಶೀದ್ ಖಾನ್ಗೆ ಅಧಿಕೃತ ವಾಗ್ದಂಡನೆ ವಿಧಿಸಲಾಗಿದೆ. ಪಂದ್ಯದ ವೇಳೆ ಕ್ರಿಕೆಟ್ ಉಪಕರಣಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ರಶೀದ್ ಖಾನ್ ಅವರಿಗೆ ಐಸಿಸಿ ಛೀಮಾರಿ ಹಾಕಿದೆ.
ಐಸಿಸಿ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ರಶೀದ್ ಖಾನ್ ನೀತಿ ಸಂಹಿತೆಯ ಆರ್ಟಿಕಲ್ 2.9 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಇದು ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಆಟಗಾರನ ಮೇಲೆ ಅಥವಾ ಸಮೀಪದಲ್ಲಿ ಅನುಚಿತ ವರ್ತನೆಯನ್ನು ನಿಷೇಧಿಸುತ್ತದೆ. ಕ್ರಿಕೆಟ್ (ಬ್ಯಾಟ್, ಬಾಲ್, ಸ್ಟಂಪ್ ಇನ್ನಿತರ) ಉಪಕರಣಗಳನ್ನು ಅಪಾಯಕಾರಿ ರೀತಿಯಲ್ಲಿ ಎಸೆಯುವುದಕ್ಕೆ ಸಂಬಂಧಿಸಿದೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಿತ್ತು. ಕೊನೆ ಓವರ್ನಲ್ಲಿ ಅಫ್ಘಾನಿಸ್ತಾನದ ಪರ ನಾಯಕ ರಶೀದ್ ಖಾನ್ ಹಾಗು ಕರೀಮ್ ಜನತ್ ಕ್ರೀಸ್ನಲ್ಲಿ ಇದ್ದರು.
ಈ ವೇಳೆ ರಶೀದ್ ಖಾನ್ ದೊಡ್ಡ ಹೊಡೆತಕ್ಕೆ ಮಂದಾದರು. ಆದರೆ ಚೆಂಡು ಬೌಂಡರಿ ಬಳಿ ಹೋಗದೆ ಫೀಲ್ಡರ್ ಕೈಗೆ ಹೋಯಿತು. ಇತ್ತ ರಶೀದ್ ಖಾನ್ ಮೊದಲ ರನ್ ಅನ್ನು ಸುಲಭವಾಗಿ ಓಡಿದರು. ಆದರೆ ಎರಡನೇ ರನ್ ಗಳಿಸಲು ಕ್ರೀಸ್ ಮಧ್ಯೆ ಭಾಗಕ್ಕೆ ಓಡಿ ಹೋದಾಗ ಕರೀಮ್ ಜನತ್ ಓಡಲು ನಿರಾಕರಿಸಿದರು.
ಇದರಿಂದ ಕೋಪಗೊಂಡ ರಶೀದ್ ತನ್ನ ಬ್ಯಾಟ್ ಅನ್ನು ನೆಲದ ಮೇಲೆ ಎಸೆದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಈ ಘಟನೆ ನಡೆದ ನಂತರ ರಶೀದ್ ತಪ್ಪೊಪ್ಪಿಕೊಂಡಿದ್ದ, ಐಸಿಸಿ ಮ್ಯಾಚ್ ರೆಫರಿಗಳ ಎಮಿರೇಟ್ಸ್ ಎಲೈಟ್ ಪ್ಯಾನೆಲ್ನ ರಿಚಿ ರಿಚರ್ಡ್ಸನ್ ಪ್ರಸ್ತಾಪಿಸಿದ ಪೆನಾಲ್ಟಿಯನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿರಲಿಲ್ಲ ಎಂದು ಐಸಿಸಿ ತಿಳಿಸಿದೆ.
ಆನ್-ಫೀಲ್ಡ್ ಅಂಪೈರ್ಗಳಾದ ನಿತಿನ್ ಮೆನನ್ ಮತ್ತು ಲ್ಯಾಂಗ್ಟನ್ ರಸ್ಸೆರೆ, ಮೂರನೇ ಅಂಪೈರ್ ಆಡ್ರಿಯನ್ ಹೋಲ್ಡ್ಸ್ಟಾಕ್ ಮತ್ತು ನಾಲ್ಕನೇ ಅಂಪೈರ್ ಅಹ್ಸಾನ್ ರಜಾ ಅವರು ರಶೀದ್ ಖಾನ್ ವಿರುದ್ಧ ಆರೋಪ ಮಾಡಿದ್ದರು.
ಹಂತ 1 ಉಲ್ಲಂಘನೆಗೆ ಕನಿಷ್ಠ ದಂಡವು ಅಧಿಕೃತ ವಾಗ್ದಂಡನೆಯಾಗಿದೆ. ಗರಿಷ್ಠ ದಂಡವು ಆಟಗಾರನ ಪಂದ್ಯ ಶುಲ್ಕದ 50 ಪ್ರತಿಶತ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ವಿಧಿಸಲಾಗುವುದು.